ಕಲಬುರಗಿ | ಆರ್ಥಿಕವಾಗಿ ಸದೃಢರನ್ನಾಗಿಸಲು ಪಂಚ ಗ್ಯಾರೆಂಟಿ ಯೋಜನೆ ಜಾರಿ : ಎಚ್.ಎಂ.ರೇವಣ್ಣ

ಕಲಬುರಗಿ : ಸಮಾಜದಲ್ಲಿ ಪ್ರತಿಯೊಬ್ಬರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಮಿತಿಯ ರಾಜ್ಯ ಅಧ್ಯಕ್ಷರಾದ ಎಚ್.ಎಂ.ರೇವಣ್ಣ ಹೇಳಿದರು.
ಮಂಗಳವಾರದಂದು ಹೊಸ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಲಬುರಗಿ, ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಸಮಿತಿಯೊಡನೆ ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಕುರಿತು ಸಾಧಕ-ಬಾಧಕ ಗಳ ಪರಿಶೀಲನಾ ಸಭೆಗಳನ್ನು ಪ್ರತಿ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜನರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಗಳು ಬಡವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತವೆ ಎಂದರು.
ಐದು ಗ್ಯಾರೆಂಟಿ ಯೋಜನೆಗಳ ಕುರಿತು ಅಧಿಕಾರಿಗಳಿಂದ ವಿಸೃತವಾದ ಮಾಹಿತಿಯನ್ನು ಪಡೆದು ಜನ ಸಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರಾಜಕುಮಾರ ರಾಠೋಡ ಮಾತನಾಡಿ, ಗೃಹ ಲಕ್ಷ್ಮೀ ಯೋಜನೆ ಮುಖಾಂತರ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ನೇರವಾಗಿ ಡಿಬಿಟಿ ಮುಖಾಂತರ ಮಹಿಳೆಯರ ಖಾತೆಗೆ 2,000 ರೂಪಾಯಿಗಳನ್ನು ಪ್ರತಿ ತಿಂಗಳು ಜಮೆ ಮಾಡುತ್ತಿದ್ದು, ಕಲಬುರಗಿ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ಮಹಿಳೆಯರಲ್ಲಿ 5,89,105 ಅರ್ಜಿದಾರರಿದ್ದು, ಅದರಲ್ಲಿ ಈಗಾಗಲೇ 5,78,711 ಮಹಿಳೆಯರಿಗೆ ಎಂದರೆ ಪ್ರತಿ ಶತ 98.24 ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಉಳಿದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆ ಕುರಿತಂತೆ ಜಿಲ್ಲೆಯ ಕುಸನೂರು ರಾಜಾಪೂರ, ಅಮಲ್ಲವಾಡಿ, ಸ್ಟೇಶನ್ ಬಜಾರ ವಿದ್ಯುತ್ ಬಿಲ್ಲುಗಳ ಸಮಸ್ಯೆ ಜಾಸ್ತಿಯಾಗುತ್ತಿದ್ದು, ಜೆಸ್ಕಾಂ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಈವರೆಗೆ ಒಟ್ಟು 6,32,630 ನೋಂದಣಿಯಾಗಿದ್ದು, ಒಟ್ಟು ಅರ್ಹ ಗ್ರಾಹಕರು 6,07,253 ಶೇ.94.35 ಪ್ರತಿಶತದಷ್ಟು ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಶಕ್ತಿಯೋಜನೆ ಕಲಬುರಗಿ ಜಿಲ್ಲೆಯ ಎಲ್ಲ ತಾಲ್ಲೂಕು ಒಳಗೊಂಡಂತೆ ಪ್ರತಿದಿನ 1.87 ಲಕ್ಷ ಜನ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿರುತ್ತಾರೆ. ಸದರಿ ಪ್ರಯಾಣಿಕರಿಂದ ಪ್ರತಿದಿನ ಸರಾಸರಿ 61.93 ಲಕ್ಷ ಸಾರಿಗೆ ಇಲಾಖೆಗೆ ಆದಾಯ ಸಂದಾಯವಾಗುತ್ತಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಸರ್ಕಾರವು ಯುವನಿಧಿ ಯೋಜನೆಯ ಮುಖಾಂತರ ನಿರುದ್ಯೋಗಿ ಯುವಕರನ್ನು ಆರ್ಥಿಕವಾಗಿ ಸದೃಡರನ್ನನಾಗಿ ಮಾಡುವ ಉದ್ದೇಶದಿಂದ ಪದವೀಧರ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 3,000, ಡಿಪ್ಲೊಮಾ ನಿರುದ್ಯೋಗ ಯುವಕರಿಗೆ 1,500 ಯುವನಿಧಿಯಲ್ಲಿ ಇಲ್ಲಿಯವರೆಗೆ ಡಿಸೆಂಬರ್ 2023 ರಿಂದ ಪೆಬ್ರವರಿ 2025 ರವರಿಗೆ 17,574 ನೋಂದಣಿಯಾಗಿದ್ದು, ಒಟ್ಟು ಮೊತ್ತ 24,09,81,000 ಆಗಿದೆ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಭೀಮರಾಯ ಮಾತನಾಡಿ, ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ 51,8000 ಬಿಪಿಎಲ್ ಕಾರ್ಡ್ 1,16,000 ಎಪಿಎಲ್ ಕಾರ್ಡ್ಗಳು ಇದ್ದು, ಪೆಬ್ರವರಿ 2025 ರ ಮಾಹೆಯಿಂದ ಬಿ.ಪಿ.ಎಲ್. ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಮ ಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ತಿಪ್ಪಣಪ್ಪ ಕಮ್ಮಕನೂರು, ಜಗದೇವಪ್ಪ ಗುತ್ತೇದಾರ ಜಿಲ್ಲಾ ಪಂಚ ಗ್ಯಾರೆಂಟಿ ಯೋಜನೆ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಜಿಲ್ಲಾ ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನರಸಿಂಹಲು ಕುಂಭಾರ, ಜಿಲ್ಲಾ ಗ್ಯಾರೆಂಟಿ ಯೋಜನಾ ಸಮಿತಿ ಸದಸ್ಯ ಸೋಮಶೇಖರ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವಾರ ಸಿಂಗ್ ಮೀನಾ ಸೇರಿದಂತೆ ಸಮಿತಿಯ ಸದಸ್ಯರು ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.