ಕಲಬುರಗಿ | ಸಮಾಜವನ್ನು ಪರಿವರ್ತನೆ ಮಾಡಬೇಕಾದರೆ ಸಾಹಿತ್ಯ, ಸಂಸ್ಕೃತಿಯಿಂದ ಮಾತ್ರ ಸಾಧ್ಯ : ಬಸವರಾಜ ದೇಶಮುಖ

ಕಲಬುರಗಿ : ಇಂದಿನ ಕಲುಷಿತ ಸಮಾಜವನ್ನು ಪರಿವರ್ತನೆ ಮಾಡಬೇಕಾದರೆ ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ತತ್ವಪದ ಗಾಯಕ-ಆಧ್ಯಾತ್ಮಿಕ ಚಿಂತಕ ಅಮೃತಪ್ಪ ಅಣೂರ ಕವಿ-82 ಪ್ರಯುಕ್ತ ಅಭಿನಂದನಾ ಸಮಾರಂಭ ಹಾಗೂ ಅಣೂರ ಕವಿಗಳ ಆಧ್ಯಾತ್ಮಿಕ ತತ್ವಪದಗಳು ಯುಟ್ಯೂಬ್ ಗೆ ಅಳವಡಿಸುವಿಕೆಯ ಧ್ವನಿಮುದ್ರಣವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಯಾವುದೇ ವ್ಯಕ್ತಿ ಹಾಗೂ ಸಮಾಜ ಉತ್ತಮ ಮಾರ್ಗದಲ್ಲಿ ಮುನ್ನಡೆಯಬೇಕಾದರೆ ಸಾಹಿತ್ಯ ಮುಖ್ಯ. ಜೀವನ ಕಟ್ಟಿಕೊಳ್ಳಬೇಕಾದರೆ ಮಾತೃ ಭಾಷೆ ಕಲಿಯಬೇಕು. ಅನ್ಯ ಭಾಷೆ ಪ್ರೀತಿಸಿ ಮಾತೃಭಾಷೆ ಪೋಷಿಸಿ ಎಂದು ಅವರು ನುಡಿದರು. ವಿದೇಶಿಗಳಲ್ಲಿಂದು ಭಾಷಾಭಿಮಾನದಿಂದ ಕನ್ನಡ ಕಲಿಕೆ ಆರಂಭಿಸಿದ್ದಾರೆ. ಇಂಥ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ವಾತಾವರಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಅನುಭವದ ತತ್ವಪದಗಳನ್ನು ರಚಿಸಿದ ಅಮೃತಪ್ಪ ಅಣೂರ ಕವಿಗಳ ಕಾರ್ಯ ಸಾಧನೆ ಮೆಚ್ಚುವಂಥಹದು. ತತ್ವಪದ ಹಾಡುತ್ತಾ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ. ಇಂಥ ಕವಿ ಮನಸ್ಸುಗಳನ್ನು ಗುರುತಿಸಿ ಬೆಳಕಿಗೆ ತರುವ ಕಾರ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದೆ ಎಂದರು.
ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಪೀಠದ ಶ್ರೀ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದರು.
ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಗುರೂಜಿ ಡಿಗ್ರಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಜಿಲ್ಲಾ ಕಸಾಪದ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಪ್ರಮುಖರಾದ ವಿಜಯಾನಂದ ಸುರವಸೆ, ಶಿವಾನಂದ ಸುರವಸೆ, ರಾಜಕುಮಾರ ಸುರವಸೆ, ಬಸವರಾಜ ಸುರವಸೆ, ಧರ್ಮರಾಜ ಜವಳಿ, ರಮೇಶ ಡಿ.ಬಡಿಗೇರ, ಪ್ರಭುಲಿಂಗ ಮೂಲಗೆ, ನಾಗರಾಜ ಜಮದರಖಾನಿ, ಗಣೇಶ ಚಿನ್ನಾಕಾರ, ದಿನೇಶ ಮದಕರಿ ವೇದಿಕೆ ಮೇಲಿದ್ದರು.