ಕಲಬುರಗಿ | ಬಸವಣ್ಣನವರ ತತ್ವಾದರ್ಶಗಳಿಂದ ಅಂತರಂಗ ಶುದ್ಧಿ: ರಾಜಕುಮಾರ ಕೋಟೆ

Update: 2025-04-28 20:36 IST
ಕಲಬುರಗಿ | ಬಸವಣ್ಣನವರ ತತ್ವಾದರ್ಶಗಳಿಂದ ಅಂತರಂಗ ಶುದ್ಧಿ: ರಾಜಕುಮಾರ ಕೋಟೆ
  • whatsapp icon

ಕಲಬುರಗಿ : ವಚನ ಚಳವಳಿ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳಿಂದ ನಮ್ಮ ಅಂತರಂಗ ಶುದ್ಧಿಗೊಂಡು ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ ಎಂದು ಎಪಿಎಂಸಿ ಮಾಜಿ ಉಪಾಧ್ಯಕ್ಷರೂ ಆದ ಶರಣ ಚಿಂತಕ ರಾಜಕುಮಾರ ಕೋಟೆ ಹೇಳಿದರು.

ಬಸವ ಉತ್ಸವ-2025ರ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ವಚನಾಧಾರಿತ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಾದಿ ಶರಣರು ಹಾಕಿ ಕೊಟ್ಟ ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಅನುಸರಿಸಬೇಕು. ಬಸವಣ್ಣ ನಮ್ಮ ಸಾಂಸ್ಕೃತಿಕ ನಾಯಕರಾಗಿದ್ದು, ಕಾಯಕ ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕೆಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಸವ ಜಯಂತಿಯನ್ನು ವೈಚಾರಿಕವಾಗಿ ಮತ್ತು ಅರ್ಥಪೂರ್ಣವಾಗಿ ಆಯೋಜಿಸಿ ರಾಜ್ಯದ ಇತರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಮನೆ ಮತ್ತು ಮನಗಳಲ್ಲಿ ಬಸವ ಬೆಳಕು ಬೆಳಗಬೇಕು. ಮೂಢನಂಬಿಕೆ, ಅಂಧಶ್ರದ್ಧೆ ತೊರೆದು ಹೊಸ ಜೀವನ ಕಟ್ಟಿಕೊಳ್ಳಬಹುದು. ಬಸವ ತತ್ವ ಪಾಲನೆಯಿಂದ ನಾವೆಲ್ಲ ಸೌಹಾರ್ದತೆ ಮತ್ತು ಸಹೋದರತೆಯಿಂದ ಬದುಕಬಹುದಾಗಿದೆ. ಇಂದು ಬಸವ ತತ್ವ ಜನಸಾಮಾನ್ಯರ ಮನಕ್ಕೆ ತಲುಪಿಸಬೇಕಾಗಿದೆ. ಆಗ ಮಾತ್ರ ನಮ್ಮ ಅಂತರಂಗ ಶುದ್ಧಿ-ಬಹಿರಂಗ ಶುದ್ಧಿ ಸಾಧ್ಯ ಎಂದ ಅವರು, ಮಹಾತ್ಮರ ಜಯಂತಿಗಳು ಕೇವಲ ದೊಡ್ಡ ವೇದಿಕೆಗಳು-ಮೆರವಣಿಗೆಗಳಿಗೆ ಸೀಮಿತಗೊಳಿಸದೆ ಅವರ ವಿಚಾರಗಳು ನಮ್ಮ ಹೃದಯದಲ್ಲಿ ಮೆರೆಸಬೇಕಾಗಿದೆ ಎಂದರು. ಕನ್ನಡ ಭಾಷೆಗೆ ಪುನರ್ಜನ್ಮ ಕೊಟ್ಟ ವಚನ ಸಾಹಿತ್ಯವನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ಮುಟ್ಟಿಸುವ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡಿದರು.

ಹಿರಿಯ ಚಿತ್ರಕಲಾ ಡಾ.ಎ.ಎಸ್.ಪಾಟೀಲ, ಹಿರಿಯ ಪತ್ರಕರ್ತ ದೇವೇಂದ್ರಪ್ಪ ಕಪನೂರ, ಸಮಾಜ ಸೇವಕಿ ಶ್ವೇತಾ ಸಿಂಗ್, ಕಲಾ ಸೌಧ ದ ಸಂಚಾಲಕ ಡಾ.ರೆಹಮಾನ್ ಪಟೇಲ್, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ರಾಜೇಂದ್ರ ಮಾಡಬೂಳ, ಮಹ್ಮದ್ ಅಯಾಜೋದ್ದೀನ್ ಪಟೇಲ್ ವೇದಿಕೆ ಮೇಲಿದ್ದರು.

ಚೈತನ್ಯಮಯಿ ಟ್ರಸ್ಟ್, ಶರಣ ಸಂಸ್ಕೃತಿ ದೃಶ್ಯಕಲಾ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನಡೆಸಿದ ವಚನಾಧಾರಿತ ಚಿತ್ರಕಲಾ ಪ್ರದರ್ಶನದಲ್ಲಿ ಶರಣ ವಚನಗಳೊಂದಿಗೆ ಭಾವಚಿತ್ರಗಳು ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.

ಗುಲಬರ್ಗಾ ನ್ಯಾಯವಾದಿಗಳ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ಸಿದ್ಧರಾಮ ವಾಡಿ, ಆರತಿ ಎಂ.ರಾಠೋಡ, ಸುಧೀರ ಗಾದಗೆ, ಮಂಜುನಾಥ ಪಾಟೀಲ, ನಿರ್ಮಲಾ ಬಿರಾದಾರ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಉಪ್ಪಿನ್, ವಿ.ಬಿ.ಬಿರಾದಾರ, ಬಾಬುರಾವ ಪಾಟೀಲ, ಎಂ.ಎನ್.ಸುಗಂಧಿ, ವನೀತಾ ಗುತ್ತೇದಾರ, ಸವಿತಾ ನಾಸಿ, ಜ್ಯೋತಿ ಕೋಟನೂರ, ಡಾ. ಬಸವರಾಜ ಜಾನೆ, ಕುಪೇಂದ್ರ ಬರಗಾಲಿ, ಶರಣು ಹಾಗರಗುಂಡಗಿ, ಡಾ. ಬಸವರಾಜ ಕುಮನೂರ,ನಾಗಪ್ಪ ಎಂ. ಸಜ್ಜನ್, ಎಸ್.ಕೆ.ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News