ಕಲಬುರಗಿ | ಗೋದುತಾಯಿ ಮಹಿಳಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮ

ಕಲಬುರಗಿ : ಸಾಹಿತ್ಯವು ಸಮಾಜದ ಪ್ರತಿಬಿಂಬ ಕನ್ನಡಿಯಾಗಿದೆ ಎಂದು ಶಿವಮೊಗ್ಗದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಆರಡಿಮಲ್ಲಯ್ಯ ಕಟ್ಟೇರ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ “ವರ್ತಮಾನದಲ್ಲಿ ಮಹಿಳಾ ಶಿಕ್ಷಣ ಮತ್ತು ಸಾಹಿತ್ಯದ ಮಹತ್ವ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ಸಾಹಿತ್ಯವು ನಮ್ಮ ಅಲೋಚನೆಗಳು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸುವ ಒಂದು ರೂಪವಾಗಿದೆ. ಪ್ರತಿಯೊಂದು ಕಲಿಕೆಯ ಆಧಾರ ಸಾಹಿತ್ಯ. ಇದು ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಕವನ, ಕಥೆ, ಕಾದಂಬರಿಗಳಂತಹ ಸಾಹಿತ್ಯ ರಚನೆಯಿಂದ ವ್ಯಕ್ತಿಯ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಸಾಹಿತ್ಯದ ಜೊತೆಗೆ ಮಹಿಳಾ ಶಿಕ್ಷಣವು ಅವಶ್ಯಕವಾಗಿದ್ದು, ಪುರುಷರಿಗಿಂತ ಮಹಿಳೆಯರು ಶಿಕ್ಷಣದಲ್ಲಿ ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆ ಮತ್ತು ಪುರುಷರಿಗೆ ಸಮಾನ ಶಿಕ್ಷಣ ಸಿಗಬೇಕು ಎಂದಿರುವರು. ಅದರಂತೆ ಮಹಿಳೆಯರು ಇನ್ನೂ ಹೆಚ್ಚು ಹೆಚ್ಚು ಶಿಕ್ಷಣದಲ್ಲಿ ಮುಂದುವರೆಯಬೇಕು ಇದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಅನೇಕ ವಿಷಯಗಳ ಕುರಿತು ಬೆಳಕು ಚೆಲ್ಲಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ, ಪ್ರಾಧ್ಯಾಪಕರಾದ ಡಾ.ಪಂಡಿತ ಮದಗುಣಕಿ, ದಾಕ್ಷಾಯಣಿ ಕಾಡಾದಿ, ಸಂತೋಷ ಪೂಜಾರಿ, ಪ್ರಸಾದ ಅಷ್ಟಗೀಕರ, ಬಾಬುರಾವ ಸಂವಾದದಲ್ಲಿ ಮಾತನಾಡಿದರು, ಡಾ.ಶಾಂತಲಿಂಗ ಘಂಟೆ ಸ್ವಾಗತಿಸಿದರು, ಡಾ.ಕಾಮೇಶ ಧಾಮಾ ನಿರೂಪಿಸಿ, ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.