ಇಂದಿನ ದಿನಗಳಲ್ಲಿ ನೈತಿಕ, ಮಾನವೀಯ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದೆ: ನಮೋಶಿ

Update: 2025-04-25 10:15 IST
ಇಂದಿನ ದಿನಗಳಲ್ಲಿ ನೈತಿಕ, ಮಾನವೀಯ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದೆ: ನಮೋಶಿ
  • whatsapp icon

ಕಲಬುರಗಿ: ಇಂದಿನ ದಿನಗಳಲ್ಲಿ ಎಲ್ಲರಿಗೂ ನೈತಿಕ, ಮಾನವೀಯ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಬಿಲ್ಡಿಂಗ್ ನಲ್ಲಿ ನಡೆದ ಎಐಸಿಟಿಇ ದೇಹಲಿ ಪ್ರಾಯೋಜಿತ 3 ದಿನಗಳ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಪ್ರೋಗ್ರಾಂ ಆನ್ ಯುನಿವರ್ಸಲ್ ಹ್ಯೂಮನ್ ವ್ಯಾಲ್ಯೂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಹೆಚ್ಚಾಗಿ ಕೌಶಲ್ಯ ಆಧಾರಿತವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಪ್ರಮುಖ ಒತ್ತು ನೀಡಲಾಗಿದೆ. ಆದಾಗ್ಯೂ, ವಿಜ್ಞಾನ ಮತ್ತು ತಂತ್ರಜ್ಞಾನವು ಸೌಲಭ್ಯಗಳ ವಿಷಯದಲ್ಲಿ ಮೌಲ್ಯಯುತವೆಂದು ಪರಿಗಣಿಸಲ್ಪಟ್ಟದ್ದನ್ನು ಸಾಧಿಸಲು ಸಾಧನಗಳನ್ನು ಒದಗಿಸಲು ಮಾತ್ರ ಸಹಾಯ ಮಾಡುತ್ತದೆ. ಮೌಲ್ಯ ಶಿಕ್ಷಣ ಹಾಗೂ ನೈತಿಕ ಶಿಕ್ಷಣ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕಾಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರು ನಿರಂತರ ಅಧ್ಯಯನ ಕೈಗೊಂಡು ಉನ್ನತ ಗುರಿಮುಟ್ಟಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕಾಗಿರುವದು ಆದ್ಯ ಕರ್ತವ್ಯವಾಗಿದೆ. ಇಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ನಿರಂತರವಾಗಿ ನವನವೀನ ಕೌಶಲ್ಯಗಳನ್ನು ಬಳಸಿಕೊಂಡು ತಾವು ಬೆಳೆಯುವದರೊಂದಿಗೆ ಸಮಾಜ ಸೇವೆಯೊಂದಿಗೆ ಸಂಸ್ಥೆಯ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಹೇಳಿದರು.

30 ವರ್ಷಗಳ ಹಿಂದೆ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಶಿಕ್ಷಣದ ಅವಶ್ಯಕತೆ ಇರಲಿಲ್ಲ, ಏಕೆಂದರೆ ಅಂದಿನ ಶಿಕ್ಷಣ ಹಾಗೂ ಶಿಕ್ಷಕರು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆದರೆ ಇಂದು ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಬೋಧಿಸುವುದು ಅನಿವಾರ್ಯ ಪರಿಸ್ಥಿತಿ ಬಂದೋದಗಿದೆ, ಸುಮಾರು 200 ಕ್ಕಿಂತಲೂ ಹೆಚ್ಚು ಈ ವಿಷಯದ ಕುರಿತ ಕೋರ್ಸ್ ಗಳಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಐಸಿಟಿಇ ಯುನಿವರ್ಸಲ್ ಹ್ಯೂಮನ್ ವ್ಯಾಲ್ಯೂ ವಿಭಾಗದ ರಾಷ್ಟ್ರೀಯ ಸಮಿತಿಯ ವೈಸ್ ಚೇರ್ಮನ್ ರಾಜು ಅಸ್ಥಾನಾ, ಸಂಪನ್ಮೂಲ ವ್ಯಕ್ತಿಗಳಾದ ಔರಂಗಾಬಾದ್ ನ ಉಮೇಶ್ ಜಾಧವ್, ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ.ಶರಣಬಸಪ್ಪ ಹರವಾಳ, ಅನಿಲಕುಮಾರ ಮರಗೋಳ, ನಾಗಣ್ಣ ಘಂಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್ ಆರ್ ಪಾಟೀಲ್, ಸಹ ಸಂಯೋಜಕರಾದ ಡಾ. ಅನಿತಾ ಮಾನೆ, ಸೌಮ್ಯ ಪರಿವೀಕ್ಷಕರಾದ ಡಾ.ಶಶಿಕಾಂತ ಕುರೋಡಿ ಕಾರ್ಯಕ್ರಮದ ಸಂಘಟಕರಾದ ಡಾ.ಅಮರೇಶ ಪಾಟೀಲ್, ಶ್ರೀಶೈಲ್ ಪತಾಟೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News