ಮೈಸೂರು | ಫೆಲೆಸ್ತೀನಿನಲ್ಲಿ ಶಾಂತಿ ಸ್ಥಾಪನೆಗೆ ಆಗ್ರಹ : ವಿಶ್ವಶಾಂತಿಗೆ ಒತ್ತಾಯಿಸಿ ಎಡಪಕ್ಷಗಳ ಜಂಟಿ ಸಮಿತಿ ಪ್ರತಿಭಟನೆ

Update: 2024-11-09 23:33 IST
Photo of protest
  • whatsapp icon

ಮೈಸೂರು : ಯುದ್ದ ವಿರೋಧಿಸಿ, ವಿಶ್ವಶಾಂತಿಗೆ ಒತ್ತಾಯಿಸಿ, ಫೆಲೆಸ್ತೀನ್‌ನಲ್ಲಿ ಶಾಂತಿ ಮರುಸ್ಥಾಪಿಸಲು ಆಗ್ರಹಿಸಿ, ಲಿಬರೇಶನ್ ಎಡಪಕ್ಷಗಳ ಜಂಟಿ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ಗಾಂಧಿ ಚೌಕ್‌ನಲ್ಲಿ ಸಮಾವೇಶಗೊಂಡು ಶಾಂತಿ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನಾ ನಿರತರು ವಿವಿಧ ಘೋಷಣೆಗಳನ್ನು ಕೂಗಿದರು. ಫೆಲೆಸ್ತೀನ್ ಸ್ವತಂತ್ರ ದೇಶವಾಗಬೇಕು. ಇಸ್ರೇಲ್ ಅಕ್ರಮಣ ನಿಲ್ಲಿಸಬೇಕು. ಶಾಂತಿ ಸಮಾಧಾನ ನೆಲೆಗೊಳ್ಳಬೇಕೆಂದು ಆಗ್ರಹಿಸಿದರು.

2023ರ ಅಕ್ಟೋಬರ್ 7ರ ಘಟನೆಗೆ ಪ್ರತಿಕಾರವೆಂದು ಇಸ್ರೇಲ್ ಈಗ ಗಾಝಾದ ಮೇಲೆ ಆಕ್ರಮಣ ನಡೆಸಿ ಅವರ ಮನೆ, ಆಸ್ಪತ್ರೆ, ಶಾಲೆ, ವಾಣಿಜ್ಯ ಕಟ್ಟಡಗಳೆಲ್ಲವನ್ನೂ ಧ್ವಂಸ ಮಾಡಿದೆ. 42 ಸಾವಿರ ಜನರಲ್ಲಿ 16 ಸಾವಿರ ಮಕ್ಕಳು ಮತ್ತು ಮಹಿಳೆಯರ ಹತ್ಯೆ ಮಾತ್ರವಲ್ಲದೇ, ಇಸ್ರೇಲ್‌ಗೆ ಪ್ರತಿರೋಧ ಒಡ್ಡುವ ಗುಂಪುಗಳಾದ ಹಮಾಸ್, ಹಿಝ್ಬುಲ್ಲಾ, ಹೌದಿಗಳಿಗೆ ಇರಾನ್, ಲೆಬನಾನ್, ಜೋರ್ಡಾನ್‌, ಇರಾಕ್ ದೇಶಗಳು ಬೆಂಬಲ ನೀಡುತ್ತಿವೆ ಎಂದು ಆ ದೇಶಗಳ ಮೇಲೆ ಅಕ್ರಮಣ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಇದು ಜಗತ್ತಿನಲ್ಲಿ 3ನೇ ಮಹಾಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ಮದ್ಯ ಪ್ರಾಚ್ಯದಲ್ಲಿ ಅರಬ್ ದೇಶಗಳನ್ನು ಹೆದರಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಲು ಅಮೆರಿಕ-ಬ್ರಿಟನ್ ಮತ್ತಿತರ ಸಾಮಾಜ್ಯಶಾಹಿಗಳು ಈ ಯುದ್ಧದಲ್ಲಿ ಇಸ್ರೇಲ್ ಸೋಲದಂತೆ ತನ್ನ ಬೆಂಬಲ ಮುಂದುವರಿಸಿದೆ. ಅಮೆರಿಕ ನೇರವಾಗಿ ತನ್ನ ವಿಮಾನ ವಾಹಕ ಯುದ್ಧ ಹಡಗುಗಳನ್ನು ಇಸ್ರೇಲ್ ಹತ್ತಿರ ತಂದು ನಿಲ್ಲಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ತೀರಾ ಬಲಪಂಥೀಯ ಇಸ್ರೇಲ್ ಸರಕಾರಕ್ಕೆ ಮೋದಿ ಸರಕಾರ ಬೆಂಬಲ ನೀಡುತ್ತಿದೆ. ಫೆಲೆಸ್ತೀನ್ ಬೆಂಬಲಿಸಿದ ಚಾರಿತ್ರಿಕ ನಿರ್ಣಯವನ್ನು ಮೋದಿ ಸರಕಾರ ಬದಲಾಯಿಸಲು ಹೊರಟಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕೂಡಲೇ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ನರಹತ್ಯೆಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಎನ್.ವಿಜಯ್ ಕುಮಾರ್, ಜಿ.ಜಯರಾಂ, ಜಗನ್ನಾಥ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಚ್.ಆರ್.ಶ್ರೇಷಾದ್ರಿ, ದೇವದಾಸ್, ಬೆಲವತ್ತ ರಾಜು, ಡಿ.ಜಗನ್ನಾಥ್, ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಇನ್ಸಾಫ್ ಮುಖಂಡರಾದ ನೂರ್ ಮರ್ಚೆಂಟ್ ಮೆಹಬೂಬ್, ಸುಬ್ರಮಣ್ಯ, ರಾಜೀಂದ್ರ, ಅಣ್ಣಪ್ಪ, ಅಭಿ, ಭರತ್, ಉಗ್ರನರಸಿಂಹೇಗೌಡ ಮುಂತಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News