ಹೊಸದಿಲ್ಲಿ | 231 ಬಾರಿ ಹೆಡ್ಲಿಯನ್ನು ಸಂಪರ್ಕಿಸಿದ್ದ ತಹವ್ವೂರ್ ರಾಣಾ!

ತಹವ್ವುರ್ ರಾಣಾ (Photo credit: ANI)
ಹೊಸದಿಲ್ಲಿ: ಮುಂಬೈ ದಾಳಿ ಪ್ರಕರಣದ ಪ್ರಮುಖ ಸೂತ್ರದಾರರಲ್ಲೊಬ್ಬನಾದ ತಹವ್ವೂರ್ ರಾಣಾ 26/11 ನರಮೇಧಕ್ಕೆ ಮುನ್ನ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 231 ಬಾರಿ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಸಂಪರ್ಕಿಸಿದ್ದ ಎಂದು ಆತನ ಬಗೆಗಿನ ಭಾರತೀಯ ದಾಖಲೆಗಳಿಂದ ತಿಳಿದುಬಂದಿದೆ. ಎಂಟು ಬಾರಿ ಭೇಟಿ ನೀಡಿದ್ದ ರಾಣಾ ದಾಳಿಗೆ ಮುನ್ನ ಅಂತಿಮ ಭೇಟಿ ವೇಳೆ 66 ಕರೆಗಳನ್ನು ಮಾಡಿದ್ದ ಎನ್ನುವುದನ್ನೂ ದಾಖಲೆ ಉಲ್ಲೇಖಿಸಿದೆ.
ರಾಣಾ ಹಾಗೂ ಹೆಡ್ಲಿ ಇತರ ಆರೋಪಿಗಳ ಜತೆ ನ್ಯಾಷನಲ್ ಡಿಫೆನ್ಸ್ ಕಾಲೇಜು ಮತ್ತು ದೆಹಲಿಯ ಇಂಡಿಯಾಗೇಟ್, ಹಲವು ಯಹೂದಿ ಕೇಂದ್ರಗಳು ಸೇರಿದಂತೆ ದಾಳಿ ನಡೆಸಲು ಭಾರತದಲ್ಲಿ ಇತರ ಗುರಿಗಳನ್ನು ಕೂಡಾ ನಿರ್ಧರಿಸಿದ್ದರು ಎಂದು ಎನ್ಐಎ ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ರಾಣಾ, ಹೆಡ್ಲಿ, ಹಫೀಜ್ ಸಯೀದ್, ಝಕಿಯೂರ್ ರೆಹಮಾನ್ ಲಖ್ವಿ, ಇಲಿಯಾಸ್ ಕಾಶ್ಮೀರಿ, ಸಾಜಿದ್ ಮಿರ್ ಮತ್ತು ಮೇಝರ್ ಇಕ್ಬಾಲ್ ಅವರನ್ನು ಪ್ರಮುಖ ಸಂಚುಕಾರರನ್ನಾಗಿ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.
ರಾಣಾಗೆ ಸೇರಿದ ಚಿಕಾಗೋ ಮೂಲದ ಫಸ್ಟ್ ವಲ್ರ್ಡ್ ಇಮಿಗ್ರೇಷನ್ ಸರ್ವೀಸಸ್ ಸಂಸ್ಥೆಯನ್ನು ಹೆಡ್ಲಿ ಭಾರತಕ್ಕೆ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ. ರಾಣಾ ಹಾಗೂ ಹೆಡ್ಲಿ ಅಮೆರಿಕದಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲಿ ಕೂಡಾ ಮುಂದಿನ ಯೋಜನೆಗಳ ಬಗ್ಗೆ ಸುಧೀರ್ಘ ಚರ್ಚೆಗಳನ್ನು ನಡೆಸಿದ್ದರು ಎಂದು ಭಾರತ ಹಾಗೂ ಅಮೆರಿಕ ನಡೆಸಿದ ತನಿಖೆಯಿಂದ ದೃಢಪಟ್ಟಿದೆ. ರಾಣಾ ಸೇನೆಯಿಂದ ಹೊರಬಂದವರಾಗಿದ್ದು, ಮೇಜರ್ ಇಕ್ಬಾಲ್ ಜತೆಗಿನ ಸಂಪರ್ಕದ ಮೂಲಕ ನೆರವು ಒದಗಿಸಲು ಹೆಡ್ಲಿ ಮುಂದಾಗಿದ್ದ ಎಂದು ವಿವರಿಸಲಾಗಿದೆ.
ಐಎಸ್ಐ ಬೆಂಬಲದೊಂದಿಗೆ ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಲು ಲಭ್ಯವಿರುವ ಎಲ್ಲ ಅವಕಾಶಗಳನ್ನೂ ರಾಣಾ ಪರಿಶೀಲಿಸಿದ್ದ ಎನ್ನಲಾಗಿದೆ.