"ಹತ್ಯೆ ಪ್ರಕರಣದಲ್ಲಿ ಸತ್ಯಾಂಶವನ್ನು ಮರೆಮಾಚಿದ್ದಾರೆ": ಡಿಐಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಮಧ್ಯಪ್ರದೇಶ ಹೈಕೋರ್ಟ್

Update: 2025-04-18 15:11 IST
"ಹತ್ಯೆ ಪ್ರಕರಣದಲ್ಲಿ ಸತ್ಯಾಂಶವನ್ನು ಮರೆಮಾಚಿದ್ದಾರೆ": ಡಿಐಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಮಧ್ಯಪ್ರದೇಶ ಹೈಕೋರ್ಟ್

ಸಾಂದರ್ಭಿಕ ಚಿತ್ರ

  • whatsapp icon

ಭೋಪಾಲ್: ಹತ್ಯೆ ಪ್ರಕರಣವೊಂರಲ್ಲಿ ಸತ್ಯಾಂಶವನ್ನು ಮರೆಮಾಚಲಾಗಿದೆ ಎಂದು ಭೋಪಾಲ್ ವಲಯದ ಉಪ ಪೊಲೀಸ್ ಮಹಾ ನಿರೀಕ್ಷಕ ಮಯಾಂಕ್ ಅವಸ್ಥಿಯನ್ನು ತರಾಟೆಗೆ ತೆಗೆದುಕೊಂಡ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ 5 ಲಕ್ಷ ರೂ. ದಂಡವನ್ನೂ ವಿಧಿಸಿದೆ.

ಭೋಪಾಲ್ ವಲಯದ ಡಿಐಜಿ ಮಯಾಂಕ್ ಅವಸ್ಥಿಗೆ ನೆಲದ ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲ ಎಂಬ ಸಂಗತಿಯನ್ನು ಬುಧವಾರದ ವಿಚಾರಣೆಯ ವೇಳೆ ಗಂಭೀರವಾಗಿ ಪರಿಗಣಿಸಿದ ನ್ಯಾ. ಜಿ.ಎಸ್.ಅಹ್ಲುವಾಲಿಯಾ, "ಅವಸ್ಥಿ ಅವರು ತಮ್ಮ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತಿರುವ ಓರ್ವ ಪೊಲೀಸ್ ಅಧಿಕಾರಿಯಾಗಿದ್ದಾರೆ" ಎಂದು ಚಾಟಿ ಬೀಸಿದರು.

ದಾತಿಯಾ ಜಿಲ್ಲೆಯಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮನ್ವೇಂದರ್ ಸಿಂಗ್ ಗುರ್ಜಾರ್ ಎಂಬ ಅರ್ಜಿದಾರರು ಪ್ರಾಸಿಕ್ಯೂಷನ್ ಉಲ್ಲೇಖಿಸಿರುವ ಘಟನೆಯ ದಿನಾಂಕ ಹಾಗೂ ಸ್ಥಳವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಹತ್ಯೆಗೀಡಾಗಿದ್ದ ವ್ಯಕ್ತಿ ಹಾಗೂ ಸಾಕ್ಷಿದಾರರು ಉಪಸ್ಥಿತರಿರಲಿಲ್ಲ ಎಂಬುದನ್ನು ನಿರೂಪಿಸುವ ಪ್ರಯತ್ನದ ಭಾಗವಾಗಿ ಕರೆ ವಿವರ ದಾಖಲೆಗಳನ್ನು ಸಂರಕ್ಷಿಸಿಡಬೇಕು ಎಂದು ಅರ್ಜಿದಾರ ಮನ್ವೇಂದರ್ ಸಿಂಗ್ ಗುರ್ಜಾರ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಪ್ರತಿವಾದ ಮಂಡಿಸಿದ ಅವಸ್ಥಿ, ಈ ಅರ್ಜಿ ತೀರ್ಮಾನವಾಗುವ ಹೊತ್ತಿಗೆ ನಾನು ನನ್ನ ಹುದ್ದೆಯಿಂದ ವರ್ಗಾವಣೆಗೊಂಡಿದ್ದೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸುವ ಯಾವ ಅಧಿಕಾರವೂ ನನಗಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ನಿರ್ದಿಷ್ಟ ಮೊಬೈಲ್ ಸಂಖ್ಯೆಗಳ ಕರೆ ವಿವರಗಳು, ಸ್ಥಳಗಳು ಮತ್ತು ಸಿಮ್ ಅನ್ನು ಸಂರಕ್ಷಿಸಿಡಬೇಕು ಎಂದು ವಿಚಾರಣಾ ನ್ಯಾಯಾಲಯ ಆದೇಶಿಸಿರುವುದು ಹಾಗೂ ಈ ವಿವರಗಳನ್ನು ಸೆಪ್ಟೆಂಬರ್ 17, 2018ರಂದು ಅವಸ್ಥಿಗೆ ಇಮೇಲ್ ಮೂಲಕ ರವಾನಿಸಿರುವುದನ್ನು ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿತು.

ಅವಸ್ಥಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿರುವುದು ನ್ಯಾಯಾಲಯ ಗಮನಿಸಿತು.

ಇಂತಹ ವ್ಯಕ್ತಿಗಳನ್ನು ಪೊಲೀಸ್ ಇಲಾಖೆಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಕುರಿತು ತೀರ್ಮಾನಿಸಬೇಕು ಎಂದು ಮಧ್ಯಪ್ರದೇಶ ಪೊಲೀಸ್ ಮಹಾ ನಿರ್ದೇಶಕರಿಗೂ ನ್ಯಾಯಾಲಯ ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News