‘ಆದಿಲ್ ಮತ್ತು ಹರೀಶ’ರ ಭಾರತ ಮತ್ತು ಭಯೋತ್ಪಾದನೆಯ ಚರಿತ್ರೆ

ಎರಡೂ ಗುಂಪುಗಳ ಉದ್ದೇಶ ಭಯೋತ್ಪಾದನೆಯೇ ಆಗಿದೆ. ಹರೀಶ ಮತ್ತು ಆದಿಲ್ ಉದ್ದೇಶ ಮಾನವೀಯತೆಯ ರಕ್ಷಣೆಯೇ ಆಗಿದೆ. ಎರಡು ಭಯೋತ್ಪಾದಕರ ಗುಂಪುಗಳ ನಡುವಿನ ವ್ಯತ್ಯಾಸ ಏನೆಂದರೆ, ಕಾಶ್ಮೀರದ ಭಯೋತ್ಪಾದಕರು ‘ಮಹಿಳೆಯರು ಮತ್ತು ಮಕ್ಕಳಿಗೆ ರಿಯಾಯಿತಿ’ ನೀಡಿದ್ದರು. ಆದರೆ ದೇಶದೊಳಗಿನ ಧಾರ್ಮಿಕ ಭಯೋತ್ಪಾದಕರು ಮಹಿಳೆ ಮತ್ತು ಮಕ್ಕಳನ್ನು ಗುರಿಯಾಗಿಸಿಯೇ ದಾಳಿ ನಡೆಸುತ್ತಾರೆ.;

Update: 2025-04-25 11:28 IST
‘ಆದಿಲ್ ಮತ್ತು ಹರೀಶ’ರ ಭಾರತ ಮತ್ತು ಭಯೋತ್ಪಾದನೆಯ ಚರಿತ್ರೆ
  • whatsapp icon

ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಗಿರಿಧಾಮದ ಬೈಸರನ್‌ನಲ್ಲಿ ‘ಗಡಿ/ಪ್ರತ್ಯೇಕತಾವಾದಿ ಭಯೋತ್ಪಾದಕರು’ ನಡೆಸಿದ ದಾಳಿಯನ್ನು ತಡೆದ ಸೈಯದ್ ಆದಿಲ್ ಹುಸೇನ್‌ರಿಗೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ನಾವೂರಿನ ಹರೀಶ್‌ಗೂ ಸಂಬಂಧ ಇದೆ. ಇದು ನಮ್ಮ ಭಾರತ! ಪಹಲ್ಗಾಮ್ ದುರಂತಕ್ಕೆ ಲೊಚಗುಟ್ಟಿದರೆ, ಆಕ್ರೋಶ ವ್ಯಕ್ತಪಡಿಸಿದರೆ ಸಾಲಲ್ಲ, ನಿಜವಾದ ದೇಶಪ್ರೇಮಿಗಳು ‘ಹರೀಶ್-ಆದಿಲ್ ಕರ್ತವ್ಯ’ವನ್ನೂ ನಿರ್ವಹಿಸಬೇಕಾಗುತ್ತದೆ.

ಸೈಯದ್ ಆದಿಲ್ ತನ್ನ ಜೊತೆ ಇದ್ದ ಹಿಂದೂಗಳ ಪ್ರಾಣ ರಕ್ಷಣೆಗಾಗಿ ಭಯೋತ್ಪಾ ದಕರ ಗನ್ ಕಸಿಯಲು ಹೋಗಿ ಹತನಾದರು. ನಾವೂರಿನ ಹರೀಶ್ ತನ್ನ ಜೊತೆ ಇದ್ದ ಮುಸ್ಲಿಮನ ರಕ್ಷಣೆಗಾಗಿ ಹಿಂದುತ್ವವಾದಿಗಳ ಕೈಯಲ್ಲಿದ್ದ ಚೂರಿ ಕಸಿಯಲು ಹೋಗಿ ಹತನಾಗಿ ದ್ದರು. ಇಬ್ಬರೂ ಬಡ ಕುಟುಂಬಕ್ಕೆ ಸೇರಿದವರು.

ಆದಿಲ್ ಮತ್ತು ಹರೀಶನ ತಾಯಿಯ ಹೇಳಿಕೆಗಳೂ ಒಂದೇ ಆಗಿದೆ. ‘‘ನಮ್ಮ ಕುಟುಂಬಕ್ಕೆ ಆತನೇ ಆಧಾರವಾಗಿದ್ದ. ಆತ ಕುದುರೆ ಸವಾರಿಯ ಕೆಲಸ ಮಾಡಿ ತರುತ್ತಿದ್ದ ಹಣದ ಮೇಲೆಯೇ ಕುಟುಂಬ ನಡೆಯುತ್ತಿತ್ತು. ಈಗ ಮಗನಿಲ್ಲ. ಬದುಕಿಗೆ ದಿಕ್ಕು ತೋಚುತ್ತಿಲ್ಲ. ಆದರೆ ನನ್ನ ಮಗ ದೇವರು ಮೆಚ್ಚುವ ಕೆಲಸ ಮಾಡಿದ್ದಾನೆ’’ ಎಂದು ಮೃತ ಆದಿಲ್ ತಾಯಿ ಹೇಳುತ್ತಾರೆ. ‘‘ಹರೀಶನ ದುಡಿಮೆಯಿಂದಲೇ ಕುಟುಂಬದ ಬದುಕು ಸಾಗಬೇಕಿತ್ತು. ಕ್ಯಾನ್ಸರ್ ರೋಗದಿಂದ ಹಾಸಿಗೆ ಹಿಡಿದಿರುವ ತಂದೆಯ ಆರೈಕೆ ಮಾಡಲು ನಾನು ಮನೆಯಲ್ಲೇ ಇದ್ದೇನೆ. ನನಗೂ ಅನಾರೋಗ್ಯ ಶುರುವಾಗಿದೆ. ಹರೀಶ್ ಬಡತನದ ಕಾರಣದಿಂದ ಸಣ್ಣ ವಯಸ್ಸಲ್ಲೇ ಕೆಲಸ ಮಾಡುತ್ತಿದ್ದ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡಿ ತರುತ್ತಿದ್ದ ಸಂಬಳದಲ್ಲೇ ನಮ್ಮನ್ನು ಸಾಕಬೇಕಿತ್ತು’’ ಎಂದು ಹರೀಶ್ ತಾಯಿ ಸೀತಮ್ಮ 2015 ನವೆಂಬರ್ 13 ರಂದು ಹೇಳಿದ್ದರು.

2015 ನವೆಂಬರ್ 12ರಂದು ಮಂಗಳೂರಿನ ಹಲವೆಡೆ ಕೋಮುಗಲಭೆ ನಡೆಯುತ್ತಿತ್ತು. ಬಿ.ಸಿ. ರೋಡಿನ ಮಣಿಹಳ್ಳ ನಿವಾಸಿ ಸಮೀವುಲ್ಲಾ ಹಲವು ವರ್ಷಗಳಿಂದ ತನ್ನ ಮನೆಗೆ ಹತ್ತಿರವೇ ಇರುವ ವಿಜಯಲಕ್ಷ್ಮಿ ಸ್ಟೀಲ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋಮುಗಲಭೆಯಿಂದಾಗಿ ಸಮೀವುಲ್ಲಾ ಕೆಲಸ ಮಾಡುತ್ತಿದ್ದ ವಿಜಯಲಕ್ಷ್ಮೀ ಸ್ಟೀಲ್ ಕಂಪೆನಿಗೂ ಕಲ್ಲೂ ತೂರಾಟ ನಡೆದಿತ್ತು. ಹಾಗಾಗಿ ಮಾಲಕರು ಕಂಪೆನಿಯ ಬಾಗಿಲು ಮುಚ್ಚಿ ಕೆಲಸಗಾರರನ್ನು ಮನೆಗೆ ಕಳುಹಿಸಿದ್ದರು. ಮಂಗಳೂರಿನ ಕಾಲೇಜೊಂದರಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಹರೀಶ್ ಪೂಜಾರಿಗೂ ಕೋಮುಗಲಭೆಯ ಕಾರಣಕ್ಕಾಗಿ ರಜೆ ನೀಡಿದ್ದರು. ಸಮೀವುಲ್ಲಾ ಮತ್ತು ಹರೀಶ್ ಇಬ್ಬರೂ ಕ್ರಿಕೆಟ್ ಆಡಲು ಪಕ್ಕದ ಮೈದಾನಕ್ಕೆ ಬೈಕ್‌ನಲ್ಲಿ ಹೊರಟರು. ಈ ವೇಳೆ ಬಂದ ಕೋಮುಗಲಭೆಯಲ್ಲಿ ನಿರತವಾಗಿದ್ದ ಹಿಂದುತ್ವವಾದಿಗಳ ಗುಂಪು ಇಬ್ಬರ ಹೆಸರು ಕೇಳಿತ್ತು. ಸಮೀವುಲ್ಲಾರ ಹೆಸರು ಕೇಳುತ್ತಿದ್ದಂತೆ ಹಿಂದುತ್ವವಾದಿಗಳು ಸಮೀವುಲ್ಲಾರಿಗೆ ಚೂರಿ ಇರಿಯಲು ಮುಂದಾದರು. ಸಮೀವುಲ್ಲಾ ಜೋರಾಗಿ ಬೊಬ್ಬೆ ಹೊಡೆದು ‘‘ಹರೀಶ ನೀನು ಓಡು’’ ಅನ್ನುತ್ತಾರೆ. ಆದರೆ ಹರೀಶ ತನ್ನ ಪ್ರಾಣ ಉಳಿಸಿಕೊಳ್ಳಲು ಓಡುವುದಿಲ್ಲ. ಸಮೀವುಲ್ಲಾರಿಗಾಗಿ ಹಿಂದುತ್ವವಾದಿಗಳ ಗುಂಪಿನ ಜೊತೆ ಸೆಣಸಾಡುತ್ತಾರೆ. ಸಮೀವುಲ್ಲಾರ ಹೊಟ್ಟೆ ಬಗೆಯಲು ಮುಂದಾಗುತ್ತಿದ್ದ ಹಿಂದುತ್ವವಾದಿಗಳ ಚೂರಿಗೆ ಕೈ ಹಾಕುತ್ತಾರೆೆ. ಹಿಂದುತ್ವವಾದಿಗಳು ಹರೀಶರಿಗೇ ಚೂರಿ ಹಾಕಿ ಸಮೀವುಲ್ಲಾರನ್ನು ಬಿಟ್ಟು ಬಿಡುತ್ತಾರೆ.

ಹಿಂದುತ್ವವಾದಿಗಳ ಕೈಯಲ್ಲಿ ಚೂರಿ, ತಲವಾರಿತ್ತು. ಭಯೋತ್ಪಾದಕರ ಕೈಯಲ್ಲಿ ಬಂದೂಕಿತ್ತು. ಒಬ್ಬರು ಧರ್ಮಕ್ಕಾಗಿ ಚೂರಿ ಹಿಡಿದಿದ್ದರು, ಇನ್ನೊಬ್ಬರು ಪ್ರತ್ಯೇಕತಾವಾದ ಮತ್ತು ಗಡಿಗಾಗಿ ಬಂದೂಕು ಹಿಡಿದಿದ್ದರು. ಸೈಯದ್ ಆದಿಲ್ ಹುಸೇನ್ ಭಯೋತ್ಪಾದಕರ ಬಂದೂಕು ಕಸಿದು ಹಿಂದೂ ಪ್ರವಾಸಿಗರನ್ನು ರಕ್ಷಿಸಲು ಪ್ರಯತ್ನಿಸಿ ಹತರಾದರು.

ಎರಡೂ ಗುಂಪುಗಳ ಉದ್ದೇಶ ಭಯೋತ್ಪಾದನೆಯೇ ಆಗಿದೆ. ಹರೀಶ ಮತ್ತು ಆದಿಲ್ ಉದ್ದೇಶ ಮಾನವೀಯತೆಯ ರಕ್ಷಣೆಯೇ ಆಗಿದೆ. ಎರಡು ಭಯೋತ್ಪಾದಕರ ಗುಂಪುಗಳ ನಡುವಿನ ವ್ಯತ್ಯಾಸ ಏನೆಂದರೆ, ಕಾಶ್ಮೀರದ ಭಯೋತ್ಪಾದಕರು ‘ಮಹಿಳೆಯರು ಮತ್ತು ಮಕ್ಕಳಿಗೆ ರಿಯಾಯಿತಿ’ ನೀಡಿದ್ದರು. ಆದರೆ ದೇಶದೊಳಗಿನ ಧಾರ್ಮಿಕ ಭಯೋತ್ಪಾದಕರು ಮಹಿಳೆ ಮತ್ತು ಮಕ್ಕಳನ್ನು ಗುರಿಯಾಗಿಸಿಯೇ ದಾಳಿ ನಡೆಸುತ್ತಾರೆ.

2002ರ ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಬದುಕುಳಿದವರ ಸಾಕ್ಷ್ಯಗಳನ್ನೊಮ್ಮೆ ಓದಬೇಕು. ‘‘ಅದು ಭಯಾನಕ ದಿನ. ಅವರು ನನ್ನ ಸ್ನೇಹಿತೆಯಾಗಿದ್ದ ಗರ್ಭಿಣಿಯನ್ನು ಅತ್ಯಾಚಾರ ಮಾಡಿದರು. ಅವಳ ಹೊಟ್ಟೆಯನ್ನು ಬಗೆದು ಮಗುವನ್ನು ಹೊರತೆಗೆದರು. ಬಳಿಕ ಆಕೆಯನ್ನು ಬೆಂಕಿಗೆ ಬಿಸಾಡಿದರು. ಹುಸೇನ್ ನಗರದ ನಿವಾಸಿಗಳಲ್ಲಿ ಬಹುತೇಕ ಮಹಿಳೆಯರನ್ನು ಅತ್ಯಾಚಾರ ಮಾಡಿ, ತುಂಡುಗಳಾಗಿ ಕತ್ತರಿಸಿ ಸುಟ್ಟು ಹಾಕಲಾಯಿತು’’ ಎಂದು ಹುಸೇನ್ ನಗರದ ಆಮಿನಾ ಆಪಾ ಮಾರ್ಚ್ 4 ಮತ್ತು ಮಾರ್ಚ್ 22ರಂದು ಪರಿಹಾರ ಶಿಬಿರದಲ್ಲಿ ಸಂದರ್ಶನ ನೀಡುತ್ತಾರೆ.

‘‘ಕಾಣೆಯಾದ ನಮ್ಮ ಮೂವರು ಮಕ್ಕಳು ರುಕ್ಸಾನಾ(10), ಕನೀಜ್(8), ನಜ್ನೀನ್(4), ಇತರ ಮಹಿಳೆಯರು ಮತ್ತು ಹುಡುಗಿಯರಿಗೆ ಏನಾಯಿತು ಎಂದು ನಾನು ನೋಡಿದ ನಂತರ, ಅವರಿಗೆ ಏನಾಗಿರಬಹುದು ಎಂದು ಯೋಚಿಸಲು ನನಗೆ ನಡುಕ ಬರುತ್ತದೆ’’ ಎಂದು ಗುಜರಾತ್ ಹಿಂಸಾಚಾರದ ಸಾಕ್ಷಿ ನರೋಡಾ ಪಾಟಿಯಾದ ಆರಿಫ್ ಖಾನ್ ಹೇಳುತ್ತಾರೆ.

ಬಿಲ್ಕಿಸ್ ಬಾನು ದೂರಿನ ಮೂಲ ಎಫ್‌ಐಆರ್ ಓದಿದರೆ ದೇಶದೊಳಗಿನ ಭಯೋತ್ಪಾದನೆಯ ಕರಾಳ ರೂಪ ಗೊತ್ತಾಗುತ್ತದೆ. ‘‘ಎಲ್ಲರ ಕೈಯಲ್ಲೂ ಮಾರಕ ಆಯುಧಗಳಿದ್ದವು-ಕತ್ತಿಗಳು, ಈಟಿಗಳು, ಕುಡುಗೋಲು ಗಳು, ಕೋಲುಗಳು, ಕಠಾರಿಗಳು, ಬಿಲ್ಲುಗಳು ಮತ್ತು ಬಾಣಗಳು. ಅವರು ‘ಅವರನ್ನು ಕೊಲ್ಲು, ಕತ್ತರಿಸಿ ಹಾಕು!’ ಎಂದು ಕಿರುಚಲು ಪ್ರಾರಂಭಿಸಿದರು. ಅವರು ನನ್ನ ಇಬ್ಬರು ಸಹೋದರಿಯರು ಮತ್ತು ನನ್ನ ಮೇಲೆ ಅತ್ಯಾಚಾರ ಮಾಡಿದರು ಮತ್ತು ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಹೆಣ್ಣುಮಕ್ಕಳೊಂದಿಗೆ ಅಮಾನವೀಯ ರೀತಿಯಲ್ಲಿ ವರ್ತಿಸಿದರು. ಅವರು ನಮ್ಮಲ್ಲಿ ಎಂಟು ಮಂದಿಯನ್ನು ಅತ್ಯಾಚಾರ ಮಾಡಿದರು. ನನ್ನ ಕಣ್ಣೆದುರೇ ಅವರು ನನ್ನ ಮೂರುವರೆ ವರ್ಷದ ಮಗಳನ್ನು ಕೊಂದರು. ನನ್ನ ಮೇಲೆ ಅತ್ಯಾಚಾರ ಮಾಡಿದವರು ಶೈಲೇಶ್ ಭಟ್, ಲಾಲಾ ವೈದ್ಯ, ಲಾಲಾ ವಕೀಲ್ ಮತ್ತು ಗೋವಿಂದ್ ನವಿ. ಇವರೆಲ್ಲರೂ ನನಗೆ ಚೆನ್ನಾಗಿ ಪರಿಚಿತರು. ನನ್ನ ಮೇಲೆ ಅತ್ಯಾಚಾರ ಮಾಡಿದ ನಂತರ ಅವರು ನನ್ನನ್ನು ಹೊಡೆದರು. ತಲೆಗೆ ಗಾಯವಾಗಿದ್ದರಿಂದ ನಾನು ಮೂರ್ಛೆ ಹೋದೆ. ನಾನು ಸತ್ತಿದ್ದೇನೆಂದು ಭಾವಿಸಿ ಅವರು ಹೊರಟುಹೋದರು’’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಕರಾವಳಿಯಲ್ಲಿ ನಡೆದ ಕೋಮುಗಲಭೆಗಳ ವೇಳೆ ಮುಸ್ಲಿಮರ ಮನೆಯ ಬಾಗಿಲುಗಳನ್ನು ಮುರಿದು ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಜೊತೆ ಅಮಾನುಷವಾಗಿ ನಡೆದುಕೊಂಡಿದ್ದನ್ನು ನೋಡಿದ್ದೇವೆ. ಚರ್ಚ್ ದಾಳಿಯ ವೇಳೆ ಅಮಾಯಕ ನನ್ (ಸಿಸ್ಟರ್) ಗಳ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದನ್ನು ಇಡೀ ಜಗತ್ತು ನೋಡಿದೆ. ಇವೆಲ್ಲವೂ ಕಣ್ಣಿಗೆ ಕಟ್ಟಿದಂತಿರುವಾಗ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕರು ಮಹಿಳೆಯರು ಮತ್ತು ಮಕ್ಕಳಿಗೆ ರಿಯಾಯಿತಿ ನೀಡಿದ್ದಾರೆ.

ಗಡಿ ಭಯೋತ್ಪಾದನೆಗೆ ಧರ್ಮವಿಲ್ಲ. ಹಾಗಾಗಿಯೇ ಇಡೀ ಕಾಶ್ಮೀರದ ಮುಸ್ಲಿಮರು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ಸಂತ್ರಸ್ತರ ನೆರವಿಗೆ ತಕ್ಷಣ ಧಾವಿಸಿದ್ದು ಕಾಶ್ಮೀರದ ಸ್ಥಳೀಯ ಮುಸ್ಲಿಮರೇ ಹೊರತು ಇನ್ಯಾರೂ ಅಲ್ಲ. ಹಾಗಿದ್ದರೂ ಭಯೋತ್ಪಾದಕರ ಕೃತ್ಯವನ್ನು ಮುಸ್ಲಿಮ್ ಸಮುದಾಯದ ತಲೆಗೆ ಕಟ್ಟಲು ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ, ಹಿಂದುತ್ವದ ನಾಯಕರು, ಕೆಲ ಪತ್ರಕರ್ತರು ಪ್ರಯತ್ನಿಸುತ್ತಿದ್ದಾರೆ. ‘ಕೋಮು ಭಯೋತ್ಪಾದನೆ’ಗೆ ಸರಕಾರ ಮಾತ್ರವಲ್ಲದೆ ನಾಗರಿಕ ಸಮಾಜವಾದ ನಾವೆಲ್ಲರೂ ಹೊಣೆ. ಗಡಿ/ಪ್ರತ್ಯೇಕತಾವಾದದ ಭಯೋತ್ಪಾದನೆಗೆ ಆಳುವ ಸರಕಾರಗಳು ಹೊಣೆ. ನಾಗರಿಕರು ‘ಆಂತರಿಕ ಕೋಮು ಭಯೋತ್ಪಾದನೆ’ ಬಗ್ಗೆ ನಮ್ಮೊಳಗೆ ಆರೋಗ್ಯಕರ ಚರ್ಚೆ ಮಾಡುತ್ತಾ, ಗಡಿ ಭಯೋತ್ಪಾದನೆಯ ಬಗ್ಗೆ ಸರಕಾರವನ್ನು ಪ್ರಶ್ನಿಸಬೇಕು ಎಂಬ ಸ್ಪಷ್ಟತೆಯನ್ನು ಹೊಂದಿರಬೇಕು.

ದೇಶದ ಆಂತರಿಕ ಕೋಮು ಭಯೋತ್ಪಾದನೆ ಮತ್ತು ಗಡಿಯಲ್ಲಿರುವ ಭಯೋತ್ಪಾದನೆಗಳೆರಡನ್ನೂ ವಿರೋಧಿಸುವವನು ಮಾತ್ರ ನಿಜವಾದ ದೇಶಪ್ರೇಮಿ ಎನ್ನಿಸಿಕೊಳ್ಳುತ್ತಾನೆ. ಅಷ್ಟು ಮಾತ್ರವಲ್ಲದೆ, ನಿಜವಾದ ದೇಶಪ್ರೇಮಿಯೊಬ್ಬ ವರ್ತಮಾನದಲ್ಲಿ ‘ಆದಿಲ್ ಮತ್ತು ಹರೀಶರ ಕರ್ತವ್ಯ’ಗಳನ್ನೂ ನಿರ್ವಹಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನವೀನ್ ಸೂರಿಂಜೆ

contributor

Similar News