ಬೆಟ್ಟಕೋಟೆ ರೈತನ ಹೊಸ ಪ್ರಯತ್ನಕ್ಕೆ ಒಲಿದ ಪಿಂಕ್ ತಳಿ

Update: 2024-01-29 07:23 GMT

ಹೊಸಕೋಟೆ, ಜ.28: ಕೃಷಿಯಲ್ಲಿ ಹೊಸ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತನೊಬ್ಬರು ಎಲ್ಲೋ ದೂರದ ತೈವಾನ್ ತಂತ್ರಜ್ಞಾನದ ಸೀಬೆಹಣ್ಣು ಬೆಳೆಯಲ್ಲಿ ಭರ್ಜರಿ ಇಳುವರಿ ಪಡೆದು ಗಮನ ಸೆಳೆದಿದ್ದಾರೆ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಚನ್ನೇಗೌಡ ಎಂಬವರಿಗೆ ಭರ್ಜರಿ ಇಳುವರಿ ಪಡೆಯಲು ನರೇಗಾ ಯೋಜನೆ ಸಾಥ್ ನೀಡಿತ್ತು ಎಂಬುದು ವಿಶೇಷ.

ಕೃಷಿ ಭೂಮಿ ರೈತರ ಪ್ರಯೋಗ ಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಾದಿಯಲ್ಲಿ ಸಾಗಿದ ಚನ್ನೇಗೌಡ ಅವರು, ತಮ್ಮ 2 ಎಕರೆ ಜಮೀನಿನಲ್ಲಿ ತೈವಾನ್ ಪಿಂಕ್ ತಳಿಯ ಸೀಬೆ(ಚೇಪೆ ಹಣ್ಣು) ಬೆಳೆದು ಆದಾಯ ಕಂಡುಕೊಂಡಿದ್ದಾರೆ. ಹೆಚ್ಚು ನೀರು ಬಯಸದ ಸೀಬೆ ಬಯಲು ಸೀಮೆಗೆ ಹೇಳಿ ಮಾಡಿಸಿದ ಬೆಳೆ. ದೇವನಹಳ್ಳಿ ತಾಲೂಕಿನಲ್ಲಿ ರೇಷ್ಮೆ, ಗುಲಾಬಿ, ದ್ರಾಕ್ಷಿ ದಾಳಿಂಬೆ ಸೇರಿದಂತೆ ಇತರ ತೋಟಗಾರಿಕೆ ಬೆಳೆ ಬೆಳೆಯುವವರೇ ಹೆಚ್ಚು. ಆದರೆ, ಸೀಬೆ ಬೆಳೆಯುವವರ ಸಂಖ್ಯೆ ತೀರಾ ಕಡಿಮೆ. ನರೇಗಾ ಸಹಕಾರದೊಂದಿಗೆ ತೈವಾನ್ ಸೀಬೆ ಬೆಳೆದ ಈ ರೈತನ ತೋಟದ ಇಳುವರಿ ಕಂಡು ಅಕ್ಕಪಕ್ಕ ತೋಟದವರು ಈ ಬೆಳೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ನರೇಗಾ ಯೋಜನೆಯಡಿ ಸೌಲಭ್ಯ ಪಡೆದ ಈ ರೈತ, ತೈವಾನ್ ಪಿಂಕ್ ತಳಿಯ ಸೀಬೆ ಸಸಿಗಳನ್ನು ಕೋಲ್ಕತಾ ನಗರದಿಂದ ಪ್ರತೀ ಸಸಿಗೆ 120 ರೂ.ನಂತೆ ಹಣ ಪಾವತಿಸಿ ಡೋರ್ ಡೆಲಿವರಿ ಪಡೆದು, ತನ್ನ 2 ಎಕರೆಯಲ್ಲಿ ಈ ತಳಿ ನೆಟ್ಟು ಬೆಳೆದಿದ್ದು, ಭರ್ಜರಿ ಫಸಲು ಕೈಗೆ ಸಿಕ್ಕಿದೆ.

ನರೇಗಾ ಯೋಜನೆ ರೈತರ ಆರ್ಥಿಕ ಪ್ರಗತಿಗೆ ಆಶಾಕಿರಣವಾಗಿದೆ. ಅಧಿಕ ಸಾಂದ್ರ ಪದ್ಧತಿಯಲ್ಲಿ ನಾಟಿ ಮಾಡಿದ್ದು, ತೈವಾನ್ ಪಿಂಕ್ ತಳಿಯ 1,500

ಸೀಬೆ ಸಸಿಗಳನ್ನು ನಾಟಿ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಗಿಡಗಳು ಕಾಯಿ ಬಿಟ್ಟು ತಾಳಿಕೊಳ್ಳುವ ಸಾಮರ್ಥ್ಯ ಬರುವವರೆಗೂ ಅಂದರೆ 9ತಿಂಗಳಿಂದ ಹಿಂದೆಯನ್ನು ಕಿತ್ತು ಹಾಕಿದ್ದರು. 3 ತಿಂಗಳ ಹಿಂದೆಯಷ್ಟೇ ಬೆಳೆದ ಒಂದೆಗಳನ್ನು ಉಳಿಸಿಕೊಂಡಿದ್ದಾರೆ. ಸೀಬೆ ಹಣ್ಣನ್ನು ಊಜಿ ನೊಣ ಹಾಗೂ ಕೀಟಗಳಿಂದ ರಕ್ಷಿಸಿಕೊಳ್ಳಲು ಸ್ಪಾಂಜ್ ಅಳವಡಿಸಿದ್ದಾರೆ. ಇದರಿಂದ ಕಾಯಿ ಹಾಳಾಗುವುದು ಕಡಿಮೆ. ಪಕ್ಷಿಗಳ ಕಾಟದಿಂದಲೂ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಿದೆ.

ಎಲ್ಲೆಲ್ಲಿ ಮಾರಾಟ?

ತೈವಾನ್ ಪಿಂಕ್ ವಾರ್ಷಿಕವಾಗಿ 2 ಬೀಡುಗಳಲ್ಲಿ ಒಟ್ಟಾರೆ 8-10ಟನ್ ಹಣ್ಣನ್ನು ಕಟಾವು ಮಾಡಿ ಬೆಂಗಳೂರು, ಚೆನ್ನೈ, ಹೈದರಾಬಾದ್ ನಗರಗಳಿಗೆ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸೀಬೆ ಹಣ್ಣು 100-250 ಗ್ರಾಂ ತೂಗುವುದೇ ಹೆಚ್ಚು. ಈ ತೈವಾನ್ ತಳಿಯ ಪ್ರತೀ ಹಣ್ಣು ಕನಿಷ್ಟ 600 ಗ್ರಾಂನಿಂದ 1 ಕೆಜಿ ತೂಕವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 85-90 ರೂ. ದರವಿದೆ. ಉತ್ತಮ ಬೇಡಿಕೆ ಇರುವುದರಿಂದ ಹೆಚ್ಚಿನ ಆದಾಯ ಲಭಿಸುತ್ತಿದೆ. ಸೀಬೆ ಬೆಳೆಯಲ್ಲಿ ವರ್ಷಕ್ಕೆ 2 ಫಸಲು ಪಡೆಯಬಹುದು. ಫಸಲು ಬಂದಾಗ ವಾರಕ್ಕೆ 1ಬಾರಿ ಇಳುವರಿ ಕಟಾವಿಗೆ ಸಿಗುತ್ತದೆ.

ಬೇರೆ ಬೆಳೆಗಳಿಗೆ ಹೋಲಿಸಿದರೆ ಸೀಬೆ ಕೃಷಿಯ ನಿರ್ವಹಣೆ ವೆಚ್ಚ ಕಡಿಮೆ ಎಂಬುದು ಅವರ ಅನುಭವ. ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಈ ಗಿಡಕ್ಕೆ ರಸಗೊಬ್ಬರ ಹಾಕಬೇಕು. ಇಲ್ಲವಾದರೆ ಗಿಡಗಳು ಸತ್ತು ಹೋಗುತ್ತವೆ. ಸೀಬೆ ಫಸಲು ಸರಿಯಾಗಿ ಬರುವುದಿಲ್ಲ ಎಂದು ಗಿಡ ಪೂರೈಸಿದವರು ಹೇಳಿದ್ದರು. ಆದರೆ, ನಾನು ಯಾವುದೇ ಕಾರಣಕ್ಕೂ ರಸಗೊಬ್ಬರ ಹಾಕುವುದಿಲ್ಲ ಎಂದು ನಿರ್ಧರಿಸಿ, ಸಾವಯವ ಗೊಬ್ಬರ ಹಾಕುತ್ತಾ ಬಂದಿದ್ದೇನೆ. ಫಸಲು ಚೆನ್ನಾಗಿದೆ.

?ಚನ್ನೇಗೌಡ | ರೈತ

ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಮಾವು, ಗುಲಾಬಿ, ಸೀಬೆ, ದ್ರಾಕ್ಷಿ, ನುಗ್ಗೆ ಉತ್ತೇಜಿಸಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಣ್ಣ ರೈತರಿಗೆ ಜೀವಿತಾವಧಿಯಲ್ಲಿ

5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು.

?ಡಾ. ಅನುರಾಧ ಕೆ.ಎನ್ | ಜಿಪಂ ಸಿಇಒ

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News