ರಾಯಚೂರು | ದರ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲ : ಸಿಪಿಐಎಂಎಲ್

ರಾಯಚೂರು : ದರ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಬಡಮಧ್ಯಮ ವರ್ಗದವರ ಜೀವನ ದುಸ್ತರವಾಗಿದೆ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಸಿಪಿಐಎಂಎಲ್ ಲಿಬರೇಶನ್ ಸಂಘಟನೆ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರದ ಎನ್ ಡಿ ಎ ಮತ್ತು ರಾಜ್ಯ ಕಾಂಗ್ರೆಸ್ ಸರಕಾರ ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ನೋಡಿದರೆ ಜನರನ್ನು ಒಕ್ಕಲೆಬ್ಬಿಸುವ ಸರ್ಕಾರಗಳ ಹುನ್ನಾರವಾಗಿದೆ ಎಂದು ಕಿಡಿಕಾರಿದರು.
ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆಯಾಗಿದ್ದು, ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರ ಇಂಧನದ ಬೆಲೆ ಏರಿಕೆ ಮೂಲಕ ಮತ್ತೊಮ್ಮೆ ಬರೆ ಎಳೆದಿದೆ. ಇಷ್ಟು ಪ್ರಮಾಣದ ಬೆಲೆ ಏರಿಕೆಯಾಗಿರುವುದು ಇದುವರೆಗಿನ ಇತಿಹಾಸದಲ್ಲಿಯೇ ಇಲ್ಲ.ಎರಡು ಸರ್ಕಾರಗಳು ಸೇರಿ ಮನಬಂದಂತೆ ಇಂಧನ ಬೆಲೆ ಹೆಚ್ಚಿಸುವುದರಿಂದ ಸಾರಿಗೆ, ಸರಕು ಸಾಗಣೆ, ವ್ಯಾಪಾರ ವಹಿವಾಟು, ಕೃಷಿ, ಕೈಗಾರಿಕೆ ಸೇರಿ ಇನ್ನಿತರೆ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಜನಸಾಮಾನ್ಯರು ಮತ್ತಷ್ಟು ಸಂಕಷ್ಟ ಎದುರಿಸಬೇಕಿದೆ ಎಂದು ಆಪಾದಿಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಹಾಲು, ನೀರು, ವಿದ್ಯುತ್, ಡೀಸೆಲ್ ಮತ್ತು ಮೆಟ್ರೋ ದರ ಸೇರಿದಂತೆ ಹಲವಾರು ಅಗತ್ಯ ಸೇವೆಗಳ ಬೆಲೆ ಏರಿಕೆ ಮಾಡಿದೆ. ಜೊತೆಗೆ, ತ್ಯಾಜ್ಯ ಸಂಗ್ರಹ, ಟೋಲ್ ಶುಲ್ಕ ಮತ್ತು ಆಸ್ತಿ ತೆರಿಗೆಯ ಮೇಲಿನ ತೆರಿಗೆಗಳನ್ನೂ ಸಹ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯಿಂದ ಸರ್ಕಾರಗಳು ಬಡವರು ಮತ್ತು ಮಧ್ಯಮ ವರ್ಗದವರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಆರ್ಥಿಕ ನೀತಿಗಳು ಜಾರಿ ಮಾಡುವ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು"ಎಂದರು.
ಈ ಸಂದರ್ಭದಲ್ಲಿ ಅಜೀಜ್ ಜಾಗೀರ್ದಾರ್, ರವಿಚಂದ್ರನ, ಆರ್.ಎಚ್ ಕಲಮಂಗಿ, ಬಸವರಾಜ ಎಕ್ಕಿ, ಶ್ರೀ ನಿವಾಸ ಬುಕ್ಕನ್ನಟ್ಟಿ, ಅನೀಫ್ ಅಬಕಾರಿ, ಜಿಲಾನಿ, ಮೊಹಮ್ಮದ್ ಶಾಲಂ, ಪ್ರಕಾಶ್,ಬಸವರಾಜ ದೇವದುರ್ಗ ಇದ್ದರು.