ರಾಯಚೂರು | ಮಕ್ಕಳನ್ನು ಮೊಬೈಲ್ ಜಗತ್ತಿನಿಂದ ದೂರವಿಡಲು ರಂಗ ಶಿಬಿರ ಅತ್ಯವಶ್ಯಕ : ರಝಾಕ್ ಉಸ್ತಾದ್

ರಾಯಚೂರು : ಇವತ್ತಿನ ತಾಂತ್ರಿಕ ಜಗತ್ತಿನಲ್ಲಿ ಮಕ್ಕಳು ಮೊಬೈಲ್ ನಲ್ಲಿ ಮುಳುಗಿದ್ದು, ಅದರಿಂದ ಅವರನ್ನು ದೂರ ಉಳಿಸಲು ಈ ರಂಗ ಶಿಬಿರ ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಹೈ.ಕ. ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಅಭಿನಂದಿಸಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ರಂಗ ಕನಸು ರಂಗ ಕೇಂದ್ರ ಸಂಸ್ಥೆಯಿಂದ ಆಯೋಜಿಸಿದ ಮಕ್ಕಳ ಬೇಸಿಗೆ ರಂಗ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ರಂಗಕ್ಕೂ, ನಾಟಕ ರಂಗಕ್ಕೂ ಬಹಳ ವ್ಯತ್ಯಾಸ ಇದೆ. ರಂಗದ ಮೇಲೆ ಕಲಾವಿದ ನಿಜವಾಗಿ ಬದುಕಬೇಕು, ಆದರೆ ಸಿನಿಮಾದಲ್ಲಿ ರೆಕಾರ್ಡಿಂಗ್ ಇರುತ್ತೆ, ಆದರೆ ಸಣ್ಣ ಮಕ್ಕಳಿಗೆ 15 ದಿನದಲ್ಲಿ ನಾಟಕ ಕಲಿಸಿ ಅ ವಿಷಯವನ್ನು ಅರ್ಥೈಸುವುದು ದೊಡ್ಡ ಸಾಹಸದ ಕೆಲಸವಾಗಿದೆ. ಇಂತಹ ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ಲಕ್ಷಣ ಮಂಡಲಗೇರಾ ಅವರಿಗೆ ಅಭಿನಂದನೆ ಎಂದರು.
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀದೇವಿ ನಾಯಕ ಅವರು ಮಾತನಾಡಿ, ಬೇಸಿಗೆ ರಜೆ ಬಂತೆಂದರೆ ಪಾಲಕರು ಮಕ್ಕಳಿಗೆ ಎಲ್ಲಿಯಾದರೂ ತರಬೇತಿಗೆ ಹಾಕಬೇಕೆಂದು ಯೋಚಿಸುತ್ತಾರೆ. ಇಂಥ ಸಂದರ್ಭದಲ್ಲಿ ರಂಗ ಕನಸು ಸಂಸ್ಥೆ ಶಿಬಿರದ ಮೂಲಕ ನಾಟಕ, ಕಲೆ, ಸಾಹಿತ್ಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿ ಕಲಾ ಕ್ಷೇತ್ರದಲ್ಲಿ ಮಕ್ಕಳನ್ನು ಬೆಳೆಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತರಾದ ಭೀಮರಾಯ ಹದ್ದಿನಾಳ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಬಿರದ ಮಕ್ಕಳಿಂದ ಕಾಡಿನ ಮಕ್ಕಳು ಎನ್ನುವ ನಾಟಕ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಪ್ರವೀಣ್ ರೆಡ್ಡಿ ಗುಂಜಹಳ್ಳಿ, ಭೀಮರಾಯ ಹದ್ದಿನಾಳ, ಶ್ರೀಮತಿ ಧನಲಕ್ಷ್ಮಿ, ಲಕ್ಷ್ಮಣ ಮಂಡಲಗೇರಾ ಸೇರಿದಂತೆ ಅನೇಕರಿದ್ದರು.