ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ

ಶಿವಮೊಗ್ಗ : ಮಾಜಿ ಸಚಿವ ಹಾಗೂ ಹಿರಿಯ ಮುತ್ಸದ್ದಿ ಬೇಗಾನೆ ರಾಮಯ್ಯ(89) ಅವರು ಗುರುವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಬೇಗಾನೆ ರಾಮಯ್ಯ ಅವರು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಅವರ ತಂದೆ. ಬೇಗಾನೆ ರಾಮಯ್ಯ ಅವರ ಅಂತ್ಯ ಸಂಸ್ಕಾರ ಎ.25ರಂದು ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯ ಸೀತಾಫಾರಂನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ.
ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಬೇಗಾನೆ ರಾಮಯ್ಯ ಅವರು 1978ರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಧಾನಸೌಧದ ಮೆಟ್ಟಿಲೇರಿದರು. ಪಕ್ಷ ಸಂಘಟನೆ, ಜನಪರ ಕಾಳಜಿ ಹಾಗೂ ಕ್ರಿಯಾಶೀಲ ಮನೋಭಾವದಿಂದ ರಾಜಕೀಯದಲ್ಲಿ ಬೇಗನೆ ತಮ್ಮ ಛಾಪನ್ನು ಮೂಡಿಸಿದ ರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಲೆನಾಡು ಭಾಗಕ್ಕೆ ಕುಡಿಯುವ ನೀರು ತರುವಲ್ಲಿ ಇವರ ಶ್ರಮ ಹಾಗೂ ಕಾಳಜಿ ಅವಿಸ್ಮರಣೀಯ. ಅಂದು 250 ಮನೆಗಳಿದ್ದ ಗ್ರಾಮಗಳಲ್ಲಿ ಮಾತ್ರ ಬೋರ್ವೆಲ್ ಕೊರೆಸಲು ಅನುಮತಿಯಿದ್ದ ಸರಕಾರದ ನಿಯಮಕ್ಕೆ ತಿದ್ದುಪಡಿ ತಂದು ಆ ಮೂಲಕ ಮಲೆನಾಡಿನ ಭಾಗದಲ್ಲಿ ನೀರಿನ ಅಭಾವಕ್ಕೆ ಇತಿಶ್ರೀ ಹಾಡಿದ್ದರು. ಹೀಗಾಗಿ ಅವರನ್ನು ‘ಮಲೆನಾಡಿನ ಭಗೀರಥ’, ‘ಬೋರ್ವೆಲ್ ರಾಮಯ್ಯ’ ಎಂದು ಕರೆಯಲಾಗುತ್ತಿದೆ.
ಅಧ್ಯಯನ ಶೀಲತೆ ಹಾಗೂ ವಿಚಾರ ಮಂಡನೆ ಚಾಕಚಕ್ಯತೆಯಿಂದಾಗಿಯೇ ಬೇಗಾನೆ ರಾಮಯ್ಯ ಅವರು ಅತ್ಯುತ್ತಮ ಸಂಸದೀಯ ಪಟು ಎಂದು ಗುರುತಿಸಲ್ಪಟ್ಟಿದ್ದರು. ಅಪಾರ ಭಾಷಾ ಜ್ಞಾನ ಹಾಗೂ ಇಂಗ್ಲಿಷ್ ಪ್ರಾವಿಣ್ಯತೆ ಬೇಗಾನೆ ರಾಮಯ್ಯ ಅವರಲ್ಲಿತ್ತು. ಈ ಕಾರಣಕ್ಕೆ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ವರಿಷ್ಠರ ಒಡನಾಟ ಗಳಿಸುವ ಮೂಲಕ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾಷಣಗಳನ್ನ ಸುಲಭವಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಜನರಿಗೆ ಮನಮುಟ್ಟುವಂತೆ ತಲುಪಿಸುತ್ತಿದ್ದರು.
ಸ್ವಾರ್ಥ ಹಾಗೂ ಅಧಿಕಾರ ದಾಹದ ರಾಜಕಾರಣವನ್ನು ಯಾವತ್ತೂ ಮಾಡದೆ, ಜನಪರ ಚಿಂತನೆ, ಗ್ರಾಮೀಣಾಭಿವೃದ್ಧಿ, ನಿಸ್ವಾರ್ಥ ಸೇವೆಯ ಮೂಲಕ ಮಾದರಿ ವ್ಯಕ್ತಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಆದರ್ಶಗಳು ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳಿಗೆ ಪ್ರೇರಣೆಯಾಗಿವೆ.