ದೇಶದ ಭವಿಷ್ಯದ ಬಜೆಟ್: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Update: 2025-02-02 10:15 IST
ದೇಶದ ಭವಿಷ್ಯದ ಬಜೆಟ್: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

PC: x.com/JoshiPralhad

  • whatsapp icon

ನವದೆಹಲಿ: ಕೇಂದ್ರ ಸರ್ಕಾರ ಪ್ರಸಕ್ತ ಮಂಡಿಸಿರುವ ಬಜೆಟ್ ಯುವ ಸಮುದಾಯ, ಮಹಿಳೆಯರು, ರೈತರು ಸೇರಿದಂತೆ ಸರ್ವರ ಪ್ರಗತಿಪರ ಬಜೆಟ್ ಆಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳಿಗೆ ಬಜೆಟ್ ನ ಪ್ರಮುಖ ಅಂಶಗಳನ್ನು ಹಂಚಿಕೊಂಡು ರೈತರಿಗೆ, ಬಡ ಮತ್ತು ಮಧ್ಯಮ ವರ್ಗ, ಆರೋಗ್ಯ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಲಾಗಿದೆ ಎಂದು ಹೇಳಿದರು.

ಪರಿಶಿಷ್ಟರಿಗೆ ಹೊಸ ಉದ್ಯಮ ಯೋಜನೆ: ಪರಿಶಿಷ್ಟ ಸಮುದಾಯದ ನವೋದ್ಯಮಿಗಳಿಗಾಗಿ ಇದೇ ಮೊದಲ ಬಾರಿ ಹೊಸ ಯೋಜನೆಯೊಂದನ್ನು ಪ್ರಾರಂಭಿಸಲಾಗುತ್ತಿದೆ. 5 ಲಕ್ಷ ಮಹಿಳೆಯರೂ ಇದರಡಿ ನವೋದ್ಯಮಿಗಳಾಗಿ ಹೊರ ಹೊಮ್ಮಲಿದ್ದಾರೆ ಎಂದು ತಿಳಿಸಿದರು.

7.7 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಸಾಲ: ದೇಶದ 7.7 ಕೋಟಿ ರೈತರು, ಮೀನುಗಾರರು ಮತ್ತು ಹೈನುಗಾರರಿಗೆ ಅಲ್ಪಾವಧಿ ಸಾಲವನ್ನು ಒದಗಿಸುತ್ತಿದ್ದು, ಕೆಸಿಸಿ ಸಾಲದ ಮಿತಿಯನ್ನು ₹ 3 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ ಎಂದರು.

1.7 ಕೋಟಿ ರೈತರಿಗೆ ಧನ-ಧಾನ್ಯ ಯೋಜನೆ ಪ್ರಯೋಜನ: ಆಯಾ ರಾಜ್ಯಗಳ ಸಹಭಾಗಿತ್ವದಲ್ಲಿ ‘ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ’ ಕೈಗೊಳ್ಳುತ್ತಿದ್ದು, ಈ ಯೋಜನೆ ಕಡಿಮೆ ಇಳುವರಿ ಇರುವಂತಹ 100 ಜಿಲ್ಲೆಗಳನ್ನು ಒಳಗೊಂಡಿದೆ. 1.7 ಕೋಟಿ ರೈತರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಮಿಷನ್ ಆರಂಭ: ರೈತರಿಗಾಗಿ ಅಧಿಕ ಇಳುವರಿ ಬೀಜಗಳ ರಾಷ್ಟ್ರೀಯ ಮಿಷನ್ ಪ್ರಾರಂಭಿಸಲಾಗುತ್ತಿದೆ. ಇದರಡಿ ದ್ವಿದಳ ಧಾನ್ಯ ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟಿದೆ. ಈ ರಾಷ್ಟ್ರೀಯ ಮಿಷನ್ ದ್ವಿದಳ ಧಾನ್ಯ ಉತ್ಪಾದಕತೆ ಹೆಚ್ಚಳ ಮತ್ತು ದೇಶೀಯ ಬೇಳೆ-ಕಾಳುಗಳ ಉತ್ಪಾದನೆ, ರೈತರಿಗೆ ಲಾಭದಾಯಕ ಬೆಲೆ ಖಾತರಿಪಡಿಸುವುದು ಮತ್ತು ಹವಾಮಾನ ಸ್ಥಿತಿಸ್ಥಾಪಕ ಬೀಜಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸುತ್ತದೆ ಎಂದು ಹೇಳಿದರು.

10 ಲಕ್ಷ ಕಸ್ಟಮೈಸ್ಡ್ ಕ್ರೆಡಿಟ್ ಕಾರ್ಡ್: MSME, ಉದ್ಯಮಶೀಲತೆ ಮತ್ತು ಉದ್ಯೋಗ, Udyam ಪೋರ್ಟಲ್‌ನಲ್ಲಿ ನೋಂದಾಯಿಸಿದ ಮೈಕ್ರೋ ಎಂಟರ್‌ಪ್ರೈಸ್‌ಗಳಿಗೆ ₹5 ಲಕ್ಷ ಮಿತಿಯೊಂದಿಗೆ ‘ಕಸ್ಟಮೈಸ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು’ ಪರಿಚಯಿಸುತ್ತಿದ್ದು, ಮೊದಲ ವರ್ಷದಲ್ಲಿ 10 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಸ್ಟಾರ್ಟ್ ಅಪ್ ಗಳಿಗೆ 10000 ಕೋಟಿ: ಸ್ಟಾರ್ಟ್‌ಅಪ್‌ಗಳಿಗಾಗಿ ₹10,000 ಕೋಟಿ ರೂಪಾಯಿ ಹೊಸ ನಿಧಿಯನ್ನು ಸ್ಥಾಪಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಮಹಿಳೆಯರಿಗೆ ₹ 2 ಕೋಟಿವರೆಗೆ ಸಾಲ ಸೌಲಭ್ಯ ಒದಗಿಸುತ್ತದೆ ಎಂದರು.

ಆಟಿಕೆಗಳ ಜಾಗತಿಕ ಕೇಂದ್ರ: ಕ್ಲಸ್ಟರ್ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ಮೂಲಕ ಭಾರತವನ್ನು ಆಟಿಕೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು "ಗ್ಲೋಬಲ್ ಹಬ್ ಫಾರ್ ಟಾಯ್ಸ್ " ಯೋಜನೆ ಜಾರಿಗೊಳ್ಳಲಿದೆ ಎಂದರು.

ನವಜಾತ ಶಿಶು ಮತ್ತು ಮಹಿಳೆಯರಿಗಾಗಿ ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಕಾರ್ಯಕ್ರಮ ರೂಪಿಸಲಾಗುತ್ತಿದೆ. ದೇಶಾದ್ಯಂತ 8 ಕೋಟಿಗೂ ಹೆಚ್ಚು ಮಕ್ಕಳು, 1 ಕೋಟಿ ಗರ್ಭಿಣಿಯರು ಮತ್ತು ತಾಯಂದಿರು ಹಾಗೂ ಈಶಾನ್ಯ ಪ್ರದೇಶದ ಸುಮಾರು 20 ಲಕ್ಷ ಹದಿಹರೆಯದ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ಕಲ್ಪಿಸಲಾಗುತ್ತದೆ.

ಬಡ ರೋಗಿಗಳಿಗೆ ನೆರವು: ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗುವಂತೆ ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್ ಮತ್ತು ನಾನಾ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗುವಂತೆ ಮೂಲ ಕಸ್ಟಮ್ಸ್ ಡ್ಯೂಟಿ (ಬಿಸಿಡಿ) ಯಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತಿದೆ. ಇದರಡಿ 36 ಜೀವರಕ್ಷಕ ಔಷಧಗಳನ್ನು ಸೇರಿಸಲು ಸರ್ಕಾರ ಮುಂದಾಗಿದೆ ಎಂದರು.

ಹೊಸ ಆದಾಯ ಮಸೂದೆ ಮಂಡನೆ: ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಲಾಗುವುದು. ಅದರಂತೆ ಇನ್ನು ಮುಂದೆ 12 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಟಿಡಿಎಸ್ ಮಿತಿ ಹೆಚ್ಚಳ: ಬಾಡಿಗೆ ಮೇಲಿನ ಟಿಡಿಎಸ್‌ಗೆ ವಾರ್ಷಿಕ ಮಿತಿಯನ್ನು ₹2.40 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ. ಆರ್‌ಬಿಐನ ಉದಾರೀಕೃತ ರವಾನೆ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ ಹಣ ರವಾನೆ ಮೇಲೆ ತೆರಿಗೆ ಸಂಗ್ರಹಿಸಲು (ಟಿಸಿಎಸ್) ಮಿತಿಯನ್ನು ₹ 7 ಲಕ್ಷದಿಂದ ₹ 10 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಶಿಕ್ಷಣ ಉದ್ದೇಶಿತ ಹಣ ರವಾನೆ ಮೇಲಿನ TCS ಅನ್ನು ತೆಗೆದುಹಾಕಲು ಸರ್ಕಾರವು ಪ್ರಸ್ತಾಪಿಸಿದೆ ಎಂದು ವಿವರಿಸಿದರು.

75 ಸಾವಿರ ಮೆಡಿಕಲ್ ಸೀಟ್ ಗುರಿ: ಒಟ್ಟು ₹ 500 ಕೋಟಿ ವೆಚ್ಚದಲ್ಲಿ ಶಿಕ್ಷಣಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಮುಂದಿನ ವರ್ಷದಲ್ಲಿ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ 10,000 ಹೆಚ್ಚುವರಿ ಮೆಡಿಕಲ್ ಸೀಟುಗಳನ್ನು ಸೇರಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸರ್ಕಾರದ ಪ್ರಸಕ್ತ ಬಜೆಟ್ ನಲ್ಲಿ ಇರುವಂಥ ಪ್ರಮುಖ ಅಂಶಗಳ ಮೇಲೆ ಸಚಿವ ಪ್ರಲ್ಹಾದ ಜೋಶಿ ಬೆಳಕು ಚೆಲ್ಲಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News