ವಿಧಾನಸೌಧ, ವಿಕಾಸಸೌಧಗಳಲ್ಲಿ ಕನ್ನಡಪರ ಘೋಷಣೆಗಳನ್ನು ಅಳವಡಿಸಿ : ಡಾ.ಪುರುಷೋತ್ತಮ ಬಿಳಿಮಲೆ

Update: 2024-10-16 12:13 GMT

ಬೆಂಗಳೂರು : ವಿಧಾನಸೌಧ, ವಿಕಾಸಸೌಧಗಳ ಪಡಸಾಲೆಗಳು, ವಿಧಾನ ಮಂಡಲದ ಸಭಾಂಗಣಗಳು, ಸಚಿವರು ಮತ್ತು ಅಧಿಕಾರಿಗಳ ಕಚೇರಿಗಳಲ್ಲಿ ಕನ್ನಡ ಭಾಷೆ, ಸಂಸ್ಕೃ ಗಳ ಪರವಾದ ಘೋಷಣೆಗಳ ಫಲಕಗಳನ್ನು ಅಳವಡಿಸುವ ಮೂಲಕ ಸರಕಾರದ ಕನ್ನಡ ಬದ್ಧತೆಯನ್ನು ತೋರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದ್ದಾರೆ.

ಬುಧವಾರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ ಕರ್ನಾಟಕದ ಹೆಮ್ಮೆಯ ಪ್ರತೀಕ. ಸಾರ್ವಜನಿಕರು, ಗಣ್ಯರು, ದೇಶ-ವಿದೇಶಗಳ ಪ್ರತಿನಿಧಿಗಳು ವಿವಿಧ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದು, ಈ ಕಟ್ಟಡಗಳ ವಾಸ್ತುಶಿಲ್ಪಕ್ಕೆ ವಿಶ್ವದಲ್ಲಿನ ಜನರು ಮನಸೋತಿದ್ದಾರೆ ಎಂದು ತಿಳಿಸಿದರು.

ಕನ್ನಡ ಭಾಷೆ, ಸಂಸ್ಕೃತಿಗಳ ಪರವಾದ ಘೋಷಣೆಗಳು, ಉದ್ಧರಣಗಳನ್ನು ಫಲಕಗಳ ಮೂಲಕ ಈ ಎರಡೂ ಕಟ್ಟಡಗಳ ಪಡಸಾಲೆಗಳು, ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣಗಳು, ಸಚಿವರು, ಅಧಿಕಾರಿಗಳ ಕಚೇರಿಗಳಲ್ಲಿ ಅಳವಡಿಸಲು ರಾಜ್ಯ ಸರಕಾರವು ಕ್ರಮ ವಹಿಸಿದ್ದಲ್ಲಿ ಈ ಕಟ್ಟಡಗಳ ವೈಭವದ ಮೂಲಕ ಕನ್ನಡದ ಅಸ್ಮಿತೆ ಇನ್ನಷ್ಟು ವಿಶ್ವಾಸಾತ್ಮಕವಾಗಲಿದೆ ಎಂದು ಅವರು ಹೇಳಿದರು.

‘ರಾಜ್ಯ ಸರಕಾರವು ಸುವರ್ಣ ಕರ್ನಾಟಕ ಸಂಭ್ರಮ-50ರನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸರಕಾರದ ಈ ಕುರಿತಾದ ನಿರ್ಧಾರವು ಅರ್ಥಪೂರ್ಣ ಆಚರಣೆಗೆ ಪೂರಕವಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕುರಿತಂತೆ ನಿರ್ದಿಷ್ಟ ರೂಪುರೇಷೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ಒದಗಿಸಲಿದೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News