ರಾಯರೆಡ್ಡಿ ಯು ಟರ್ನ್ ಹೊಡೆಯುವ ಅಗತ್ಯವಿಲ್ಲ, ಸತ್ಯವನ್ನೇ ಹೇಳಿದ್ದಾರೆ : ಎಚ್ಡಿಕೆ ಟೀಕೆ
ಬೆಂಗಳೂರು : ‘ಕರ್ನಾಟಕ ರಾಜ್ಯವು ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ನಂಬರ್ ಒನ್ ಆಗಿದೆ ಎಂದು ಹೇಳಿಕೆ ನೀಡಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ‘ಯೂ ಟರ್ನ್’ ಹೊಡೆಯುವ ಅಗತ್ಯವೇ ಇಲ್ಲ. ಅವರು ಸತ್ಯವನ್ನೇ ನುಡಿದಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಹಾತ್ಮ ಗಾಂಧೀಜಿ ಅವರ ಸತ್ಯಮೇವ ಜಯತೇ ಘೋಷ ವಾಕ್ಯವನ್ನು ಕಾಂಗ್ರೆಸ್ ನಾಯಕರು ಅದೆಷ್ಟು ಶ್ರದ್ಧಾಭಕ್ತಿಯಿಂದ ಪರಿಪಾಲನೆ ಮಾಡುತ್ತಿದ್ದಾರೆ ಎಂಬುದಕ್ಕೆ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯೇ ಸಾಕ್ಷಿ. ಗುತ್ತಿಗೆಯಲ್ಲಿ ಪರ್ಸಂಟೇಜ್, ಕಮಿಷನ್ ದಂಧೆ ಆರಂಭಿಸಿದ್ದು ಅನ್ಯಪಕ್ಷಗಳ ಸರಕಾರಗಳೇ ಹೊರತು ಜೆಡಿಎಸ್ ಸರಕಾರವಲ್ಲ ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಗುತ್ತಿಗೆದಾರರಿಗೆ ನಿಯಮಿತವಾಗಿ ಹಣ ಪಾವತಿ ಆಗುತ್ತಿತ್ತು, ವಿಳಂಬ ಎನ್ನುವ ಪ್ರಶ್ನೆಯೇ ಇರಲಿಲ್ಲ. ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ. ಸೋಕಾಲ್ಡ್ ಸತ್ಯಸಂಧರಾದ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆಂದು ರಾಯರೆಡ್ಡಿ ಹೇಳಿದ್ದಾರೆ. ಪಾಪ ಅವರು ಏಕಿಷ್ಟು ಹೆದರಿದರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಧಿಕಾರ ಮತ್ತು ಆಸರೆ ನಾಲಿಗೆಯ ಶಕ್ತಿಯನ್ನು ಕುಂದಿಸುತ್ತವೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಸಿಎಂ ಸಾಹೇಬರ ಸರಣಿ ಹಗರಣಗಳ ಸಿದ್ವಿಲಾಸದ ಬಗ್ಗೆ ಅರಿಯದಷ್ಟು ಮುಗ್ಧರೇ ರಾಯರೆಡ್ಡಿ. ಕರ್ನಾಟಕವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪೆನಿ ಸರಕಾರದ ಭಾಗವಾಗಿರುವ ಅವರಿಗೆ ಜೆಡಿಎಸ್ ಕುರಿತು ಟೀಕಿಸುವ ನೈತಿಕತೆ ಎಲ್ಲಿದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.