‘ಜಾತಿ ಗಣತಿ ವರದಿ’ ಬಹಿರಂಗಗೊಳ್ಳದೆ ಟೀಕೆ ಮಾಡುವುದು ಸರಿಯಲ್ಲ: ಸಚಿವ ಸತೀಶ್ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು: ಸುಮಾರು 169 ಕೋಟಿ ರೂ. ಖರ್ಚು ಮಾಡಿ ಸಿದ್ದಪಡಿಸಲಾಗಿರುವ ಜಾತಿಗಣತಿ ವರದಿಯು ಬಹಿರಂಗಗೊಳ್ಳದೆ, ಅವೈಜ್ಞಾನಿಕ ಎಂದೆಲ್ಲ ಟೀಕೆ ಮಾಡುವುದು ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಕ್ಷೇಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಯಲ್ಲಿ ಏನಿದೆ, ಏನಿಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಮೊದಲು ಬಹಿರಂಗವಾಗಲಿ. ಆ ನಂತರದಲ್ಲಿ ಎಲ್ಲರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ಯಾವ ನಿರ್ಧಾರ ಎಂದು ಮೊದಲೇ ಹೇಳಲು ಸಾಧ್ಯವಿಲ್ಲ ಎಂದರು.
ಸುಮಾರು 169 ಕೋಟಿ ರೂ. ಖರ್ಚು ಮಾಡಿ ಸಿದ್ದಪಡಿಸಲಾದ ಜಾತಿಗಣತಿ ವರದಿಯು ಬಹಿರಂಗಗೊಳ್ಳದೆ, ಅವೈಜ್ಞಾನಿಕ ಎಂದೆಲ್ಲ ಟೀಕೆ ಮಾಡಿರುವುದು ಸರಿಯಲ್ಲ. ಮೊದಲು ವರದಿಯಲ್ಲಿನ ಅಂಶಗಳನ್ನು ಹಿಡಿದು ಅದರ ಮೇಲೆ ಚರ್ಚೆ ಮಾಡಲಿ. ಆಗ ಅದರಲ್ಲಿನ ಸರಿ ತಪ್ಪುಗಳು ಚರ್ಚೆಯಾಗಲಿ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಜಾತಿಗಣತಿ ವರದಿಯಲ್ಲಿ ಇರುವ ಅಂಶಗಳು ಬಹಿರಂಗಗೊಂಡ ಬಳಿಕ ವಿಧಾನಮಂಡಲದ ಅಧಿವೇಶನ ಕರೆದು ಚರ್ಚೆ ಮಾಡಲು ಸಾಧ್ಯವಾಗುತ್ತದೆ. ಅಧಿವೇಶನದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಹೇಳಲು ಮುಕ್ತ ಅವಕಾಶವಿದೆ. ಅನಂತರದಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಮ್ಮತದ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.