ಪ್ರಸಕ್ತ ಸಾಲಿನ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿ ರಚನೆ

Update: 2024-09-29 15:33 GMT

ಬೆಂಗಳೂರು : 2024-25ನೆ ಸಾಲಿನ ಕರ್ನಾಟಕ ವಿಧಾನಮಂಡಲದ 9 ವಿವಿಧ ಜಂಟಿ ಸ್ಥಾಯಿ ಸಮಿತಿ ಹಾಗೂ 6 ಸ್ಥಾಯಿ ಸಮಿತಿಗಳನ್ನು ಸ್ವೀಕರ್ ಯು.ಟಿ. ಖಾದರ್ ರಚಿಸಿದ್ದು, ಸಮಿತಿಗಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರಾಗಿ ಶಾಸಕ ಸಿ.ಸಿ. ಪಾಟೀಲ್ ನೇಮಕ ಮಾಡಲಾಗಿದ್ದು, ಶಾಸಕ ತನ್ವೀರ್ ಸೇಠ್, ಆರ್.ವಿ. ದೇಶಪಾಂಡೆ ಸೇರಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ ನಾಲ್ವರು ಸದಸ್ಯರು ಸಮಿತಿಯ ಸದಸ್ಯರಾಗಿದ್ದಾರೆ.

ಶಾಸಕ ಬಸವರಾಜ್ ನೀಲಪ್ಪ ಶಿವಣ್ಣನವರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಉದ್ದಿಮೆಗಳ ಸಮಿತಿಯನ್ನು ರಚಿಸಿದ್ದು, ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರ ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.

ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕವಾಗಿದ್ದಾರೆ. ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನೇಮಕವಾಗಿದ್ದು, ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.

ಅಧೀನ ಶಾಸನ ರಚನಾ ಸಮಿತಿಗೆ ಅಧ್ಯಕ್ಷರಾಗಿ ಶಾಸಕ ಬಿ.ಶಿವಣ್ಣ, ಸದಸ್ಯರಾಗಿ ವಿಧಾನಸಭೆಯ 16 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕವಾಗಿದ್ದಾರೆ. ಶಾಸಕ ಎಚ್.ಡಿ. ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ರಚಿಸಿದ್ದು, ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕವಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಶಾಸಕ ಎನ್.ಎಚ್. ಕೋನರೆಡ್ಡಿ, ಸದಸ್ಯರಾಗಿ ವಿಧಾನಸಭೆಯ 14 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ. ಗ್ರಂಥಾಲಯ ಸಮಿತಿ ಅಧ್ಯಕ್ಷರಾಗಿ ಶಾಸಕ ಯು.ಬಿ.ಬಣಕಾರ್, ಸದಸ್ಯರಾಗಿ ವಿಧಾನಸಭೆಯ 5 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 3 ಸದಸ್ಯರು ನೇಮಕವಾಗಿದ್ದಾರೆ.

ರಿಜ್ವಾನ್ ಅರ್ಷದ್, ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ರಚನೆಯಾಗಿದ್ದು, ಸದಸ್ಯರಾಗಿ ವಿಧಾನಸಭೆಯ 14 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.

ವಿಧಾನಸಭೆಯ ಸಮಿತಿಗಳಾದ ಅಂದಾಜು ಸಮಿತಿ ಅಧ್ಯಕ್ಷರಾಗಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ 18 ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ. ಸರಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ವೈ.ನಂಜೇಗೌಡ ಹಾಗೂ 15 ಶಾಸಕರು ಸದಸ್ಯರಾಗಿದ್ದಾರೆ. ಹಕ್ಕುಬಾಧ್ಯತೆಗಳ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೌಜಲಗಿ ಶಿವಾನಂದ ಮಹಾಂತೇಶ ನೇಮಕವಾಗಿದ್ದು, ಸಮಿತಿಯಲ್ಲಿ 11 ಶಾಸಕರು ಸದಸ್ಯರಾಗಿದ್ದಾರೆ.

ಖಾಸಗಿ ಸದಸ್ಯರ ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ ಅಧ್ಯಕ್ಷರಾಗಿ ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹಾಗೂ 11 ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ. ಅರ್ಜಿಗಳ ಸಮಿತಿಯ ಅಧ್ಯಕ್ಷರಾಗಿ ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹಾಗೂ 16 ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ.

ವಸತಿ ಸೌಕರ್ಯ ಸಮಿತಿ ಅಧ್ಯಕ್ಷರಾಗಿ ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹಾಗೂ 12 ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News