ವಿಮಾನ ನಿಲ್ದಾಣ, ಏರ್ ಸ್ಟ್ರಿಪ್ ಪ್ರಗತಿ ಪರಿಶೀಲನೆ | ತಾಂತ್ರಿಕ ಅಡಚಣೆಗಳ ನಿವಾರಣೆಗೆ ಎಂ.ಬಿ.ಪಾಟೀಲ್ ಸೂಚನೆ

Update: 2024-08-24 13:48 GMT

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಜಯಪುರ, ಹಾಸನ ಸೇರಿ ವಿವಿಧ ವಿಮಾನ ನಿಲ್ದಾಣಗಳು ಮತ್ತು ಏರ್-ಸ್ಟ್ರಿಪ್ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ನಡೆಸಿದರು.

ಹಲವು ಯೋಜನೆಗಳಿಗೆ ತಾಂತ್ರಿಕ ಅಡಚಣೆಗಳು ಎದುರಾಗಿವೆ. ಇನ್ನು ಕೆಲ ಯೋಜನೆಗಳಿಗೆ ಅಗತ್ಯ ಪ್ರಮಾಣದ ಭೂಮಿ ಸಿಕ್ಕಿಲ್ಲ. ಇವೆಲ್ಲವನ್ನೂ ತ್ವರಿತವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

219 ಕೋಟಿ ರೂ.ವೆಚ್ಚದಲ್ಲಿ, 322 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಯಚೂರು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಅಡಚಣೆಗಳಿದ್ದು ತಕ್ಷಣ ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಅಗತ್ಯ ಬಿದ್ದರೆ ದಿಲ್ಲಿಗೂ ಹೋಗಿ ಬರಬೇಕು ಎಂದು ಆದೇಶಿಸಿದರು.

ರಾಯಚೂರು ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಯೋಜನೆಗೆ ಬೇಕಾಗಿರುವ ಪರಿಸರ ಇಲಾಖೆಯ ಅನುಮತಿಯನ್ನು ಕೂಡ ಬೇಗನೆ ಪಡೆಯಬೇಕು. ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಚುರುಕಾಗಿ ಮುಗಿಸಬೇಕು. ಭೂಸ್ವಾಧೀನದ ಸಮಸ್ಯೆ ಇದ್ದು ತಕ್ಷಣ ಬಗೆಹರಿಸಲು ಎಂ.ಬಿ.ಪಾಟೀಲ್ ಸೂಚಿಸಿದರು.

ಉಡಾನ್ ಯೋಜನೆ ಸ್ಥಗಿತವಾಗಿರುವ ಕಾರಣ ಬೀದರ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸಿ, ಪರ್ಯಾಯ ಕ್ರಮಗಳ ಬಗ್ಗೆ ತೀರ್ಮಾನಿಸಬೇಕು. ಪುನಃ ಉಡಾನ್ ಯೋಜನೆ ಚಾಲನೆಗೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದರು.

ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು ಅಗತ್ಯ ಇರುವ ಅಗ್ನಿಶಾಮಕ ವಾಹನಗಳನ್ನು ಖರೀದಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ ಎಂ.ಬಿ.ಪಾಟೀಲ್, ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೂ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನಿಡೀದರು.

ಏರ್-ಸ್ಟ್ರಿಪ್ಸ್ ಅಭಿವೃದ್ಧಿಗೆ ಭೂಮಿ ಗುರುತಿಸಿ: ಪ್ರವಾಸೋದ್ಯಮವನ್ನು ಪರಿಗಣಿಸಿ ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳ ಮತ್ತು ಹಂಪಿಯಲ್ಲಿ ಏರ್-ಸ್ಟ್ರಿಪ್ ನಿರ್ಮಿಸುವುದಾಗಿ ಘೋಷಿಸಲಾಗಿದೆ. ಈ ಪೈಕಿ ಕೊಡಗು ಮತ್ತು ಧರ್ಮಸ್ಥಳದಲ್ಲಿ 140 ಎಕರೆ ಭೂಮಿ ಅಗತ್ಯವಿದೆ. ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತದ ಜತೆ ವ್ಯವಹರಿಸಿ, ಈ ಪ್ರಕ್ರಿಯೆ ಮುಗಿಸಬೇಕು ಎಂದು ಅವರು ಹೇಳಿದರು.

ಚಿಕ್ಕಮಗಳೂರಿನಲ್ಲಿ ಈ ಯೋಜನೆಗೆ ಈಗಾಗಲೇ 120 ಎಕರೆ ಜಾಗ ಗುರುತಿಸಲಾಗಿದೆ. ಆದರೆ ಇದಕ್ಕೆ ಇನ್ನೂ 17.5 ಎಕರೆ ಅಗತ್ಯವಿದ್ದು, ಇದನ್ನು ಗುರುತಿಸಲು ನಿರ್ದೇಶಿಸಲಾಗಿದೆ. ಜತೆಗೆ ಈ ಸಂಬಂಧ ಡಿಪಿಆರ್ ಸಿದ್ಧ ಪಡಿಸಲು ಪವನ್ ಹನ್ಸ್ ಕಂಪೆನಿಗೆ ಹೇಳಲಾಗಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.

ಕಾರವಾರದಲ್ಲಿ ಸಿವಿಲ್ ಎನ್‍ಕ್ಲೈವ್ ಅಭಿವೃದ್ಧಿಗೆ ಇನ್ನೂ 97 ಎಕರೆ ಭೂಮಿ ಬೇಕಾಗಿದೆ. ಇದಕ್ಕಾಗಿ ಈಗಾಗಲೇ 27.34 ಕೋಟಿ ರೂಪಾಯಿಗೂ ಹೆಚ್ಚು ಹಣ ಕೊಡಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ರಾಯಚೂರು ವಿಮಾನ ನಿಲ್ದಾಣಕ್ಕೆ ಸಂಬಂದಿಸಿದಂತೆ ಆ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು, ರಾಯಚೂರು ಸಂಸದ ಕುಮಾರ್ ನಾಯಕ್, ರಾಯಚೂರು ಜಿಲ್ಲಾಧಿಕಾರಿ ನಿತೇಶ್ ಜೊತೆ ಅವರು ಚರ್ಚೆ ನಡೆಸಿದರು.

ಚಿಕ್ಕಮಗಳೂರು ಏರ್ ಸ್ಟ್ರಿಪ್ ಗೆ ಸಂಬಂಧಿಸಿದಂತೆ ಅಲ್ಲಿನ ಶಾಸಕ ತಮ್ಮಯ್ಯ ಅವರೊಂದಿಗೆ ಎಂ.ಬಿ.ಪಾಟೀಲ್ ಸಭೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, ಮೂಲ ಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಟ್ಟಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News