ಪ್ಲಾಸ್ಟಿಕ್ ದುಷ್ಪರಿಣಾಮದ ಗಂಭೀರತೆ ಅರಿಯುವವರೆಗೆ ಸಂಪೂರ್ಣ ನಿಷೇಧ ಕಷ್ಟ: ಎಂ.ಸಿ.ಸುಧಾಕರ್
Update: 2025-03-19 18:33 IST

ಬೆಂಗಳೂರು: ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ, ಅಲ್ಲಲ್ಲಿ ಬಳಕೆಯಾಗುತ್ತಲೇ ಇದೆ. ಜನರಿಗೆ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಗಂಭೀರತೆ ತಿಳಿಯುವವರೆಗೂ ಸಂಪೂರ್ಣವಾಗಿ ನಿಷೇಧಿಸುವುದು ಕಷ್ಟ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ನಲ್ಲಿ 2025-26ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧವಿದೆ. ಬಳಸುವವರಿಗೆ ಮತ್ತು ನಿಷೇಧಿತ ಪ್ಲಾಸ್ಟಿಕ್ ಉತ್ಪಾದಿಸುವವರಿಗೆ ದಂಡ ಹಾಕುತ್ತಿದ್ದೇವೆ ಎಂದರು.
ಪ್ಲಾಸ್ಟಿಕ್ ಲೋಟ, ತಟ್ಟೆ, ಹಾರ ಇತ್ಯಾದಿಗಳು ಬಳಕೆಯಾಗುತ್ತಿವೆ. ಇದನ್ನು ನಿಷೇಧಿಸಲಾಗಿದೆ. ಆದರೂ, ಒಂದಲ್ಲ ಒಂದು ರೀತಿಯಲ್ಲಿ ಪ್ಲಾಸ್ಟಿಕ್ ಬಳಕೆಯಲ್ಲಿವೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಕಷ್ಟ ಸಾಧ್ಯ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು.