ಕರ್ನಾಟಕ-ಅಮೆರಿಕ ವಾಣಿಜ್ಯೋದ್ಯಮ ಸಂಬಂಧ | ಯು.ಎಸ್.ರಾಯಭಾರಿ ಜೊತೆ ಚರ್ಚೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-09-20 13:06 GMT

ಹೊಸದಿಲ್ಲಿ : ಕರ್ನಾಟಕ ಮತ್ತು ಅಮೆರಿಕ ನಡುವೆ ವಾಣಿಜ್ಯೋದ್ಯಮ ಸಂಬಂಧಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ಹೊಸದಿಲ್ಲಿಯಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟಿ ಅವರೊಂದಿಗೆ ಚರ್ಚೆ ನಡೆಸಲಾಯಿತು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶುಕ್ರವಾರ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಕೆಲವು ಸಿಸ್ಟರ್ ಸಿಟಿ ಕಾರಿಡಾರ್ ರೂಪಿಸುವ ಬಗ್ಗೆ ಪ್ರಸ್ತಾವನೆಯನ್ನು ಅವರ ಮುಂದೆ ಇರಿಸಿದ್ದೇನೆ. ಬಹಳ ಪ್ರಮುಖವಾಗಿ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ರ್ಸಿಸ್ಕೊ ನಡುವೆ ನವೋದ್ಯಮಗಳು ಹಾಗೂ ಆವಿಷ್ಕಾರಗಳಲ್ಲಿ ಸಮಾನ ಸಂಗತಿ ಇದೆ ಎಂದು ಹೇಳಿದರು.

ಅಲ್ಲಿನ ಪರಿಸರ, ವಾತಾವರಣ, ಎಕೋಸಿಸ್ಟಂಗಳಲ್ಲಿನ ಆವಿಷ್ಕಾರಗಳನ್ನು ಕರ್ನಾಟಕದಲ್ಲಿ ಅಳವಡಿಸುವುದು, ಇಲ್ಲಿನ ಕಲಿಕೆಗಳನ್ನು ಅಲ್ಲಿ ಬಳಸುವುದು, ವಿಶೇಷವಾಗಿ ಕರ್ನಾಟಕದಲ್ಲಿ ಬೆಳೆಯುತ್ತಿರುವ ನವೋದ್ಯಮಗಳಿಗೆ ಅಮೆರಿಕದಲ್ಲಿ ಮಾರುಕಟ್ಟೆ ಕಲ್ಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವ ಬಗ್ಗೆಯೂ ಚರ್ಚೆ ನಡೆಯಿತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ವಾಷಿಂಗ್ಟನ್ ಜೊತೆ ಫಿಂಟೆಕ್ಸ್ ಹಾಗೂ ಎಐ, ಆಸ್ಟಿನ್ ಜೊತೆ ಸೆಮಿಕಂಡಕ್ಟರ್ ಉತ್ಪಾದನೆ ಸೇರಿದಂತೆ ಮಾರುಕಟ್ಟೆ ಜೊತೆಗೆ ಸ್ಕಿಲ್ ಕಾರಿಡಾರ್ ಮಾಡುವ ಬಗ್ಗೆ ಮಾತುಕತೆ ನಡೆಯಿತು ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.

ಬೆಂಗಳೂರಿನಲ್ಲಿ ಯು.ಎಸ್ ರಾಯಭಾರಿ ಕಚೇರಿಯನ್ನು ಆದ್ಯತೆ ಮೇರೆಗೆ ಆರಂಭಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎರಿಕ್ ಗಾರ್ಸೆಟಿ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ಮಾಡುವುದರಿಂದ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ, ಕನ್ನಡಿಗ ವಿದ್ಯಾರ್ಥಿಗಳಿಗೆ ಹಾಗೂ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ವಿಸಾ ಲಭ್ಯತೆ ಹೆಚ್ಚುತ್ತದೆ ಎಂಬ ರಾಜ್ಯದ ಅಭಿಪ್ರಾಯವನ್ನು ಅವರು ಸಮ್ಮತಿಸಿದರು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅಮೆರಿಕ ರಾಯಭಾರ ಕಚೇರಿ ತೆರೆಯಲು ಕರ್ನಾಟಕ ಹಾಗೂ ಬೆಂಗಳೂರು ನಮಗೆ ನೈಸರ್ಗಿಕ ಆಯ್ಕೆ ಎಂದು ಅವರು ಹೇಳಿದರು. ಕರ್ನಾಟಕ ಈಗ ವಿಶ್ವದ ನಾಲ್ಕನೆ ಅತಿ ದೊಡ್ಡ ತಂತ್ರಜ್ಞಾನ ಕೇಂದ್ರವಾಗಿರುವುದರಿಂದ ಹಾಗೂ ಅಮೆರಿಕ ಹಾಗೂ ಕರ್ನಾಟಕದ ನಡುವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮ್ಯತೆ ಇರುವುದರಿಂದ ಬೆಂಗಳೂರು ನಮಗೆ ಸ್ವಾಭಾವಿಕ ಆಯ್ಕೆ ಎಂಬ ಅಭಿಪ್ರಾಯವೂ ಅವರದ್ದಾಗಿತ್ತು ಎಂದು ಸಚಿವರು ತಿಳಿಸಿದರು.

ಎಐ ಕ್ಷೇತ್ರದಲ್ಲಿ ಬೆಂಗಳೂರು ಈಗ ಜಗತ್ತಿನ ಐದು ಪ್ರಮುಖ ನಗರಗಳಲ್ಲಿ ಒಂದಾಗಿದೆ. ಕೌಶಲ್ಯ ಅಭಿವೃದ್ಧಿ ಹಾಗೂ ಎಐ ಕೌಶಲ್ಯದಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದರಿಂದ ಬಂಡವಾಳ ಹಾಗೂ ವ್ಯಾಪಾರೋದ್ಯಮಕ್ಕೆ ಭಾರತದಲ್ಲಿ ಕರ್ನಾಟಕ ಸೂಕ್ತವಾಗಿದೆ ಎಂದು ರಾಯಭಾರಿ ಎರಿಕ್ ಗಾರ್ಸೆಟಿ ಅಭಿಪ್ರಾಯ ಹೊಂದಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ನಮ್ಮ ಮಾನವ ಸಂಪನ್ಮೂಲ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದೂ ರಾಯಭಾರಿಗಳು ಮೆಚ್ಚಿಕೊಂಡಿದ್ದಾರೆ, ಕರ್ನಾಟಕದಲ್ಲಿ ರಾಯಭಾರಿ ಕಚೇರಿ ತೆರೆಯುವದರಿಂದ ಅಮೆರಿಕ ಹಾಗೂ ಭಾರತಕ್ಕೆ ನೆರವಾಗುವುದು ಎಂದೂ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ತೆರೆಯಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನೀಡಿದ್ದ ಸಂದೇಶವನ್ನು ನಾನು ಅಮೆರಿಕ ರಾಯಭಾರಿಗೆ ತಲುಪಿಸಿದ್ದೇನೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News