ಕೊಲೆ ಬೆದರಿಕೆ ಎದುರಿಸುತ್ತಿರುವ ದಲಿತ ಶಾಸಕನ ಪರ ನಿಲ್ಲಲು ಬಿಜೆಪಿಯಲ್ಲಿ ಯಾರೂ ಸಿದ್ಧರಿಲ್ಲ: ರಮೇಶ್ ಬಾಬು

Update: 2023-08-18 14:48 GMT

ಬೆಂಗಳೂರು, ಆ.18: ಕೇಂದ್ರ ಸಚಿವ ಭಗವಂತ ಖೂಬಾ ಅವರಿಂದ ನನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ನಾಯಕರೆ ಪ್ರಾಣಭಯದಲ್ಲಿ ಬದುಕುತ್ತಿದ್ದಾರೆ. ಚುನಾವಣೆಗೂ ಮೊದಲು ಗೂಂಡಾ ರಾಜಕಾರಣ ಮಾಡುತ್ತಿದ್ದ ಬಿಜೆಪಿ, ಚುನಾವಣೆ ಸೋತ ನಂತರವೂ ಹಳೆಯ ಚಾಳಿ ಬಿಟ್ಟಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭು ಚವ್ಹಾಣ್, ಭಗವಂತ ಖೂಬಾ ಮೇಲೆ ಆರೋಪ ಮಾಡಿದರೂ ಬಿಜೆಪಿಯಲ್ಲಿ ದಲಿತ ಶಾಸಕನ ಪರ ನಿಲ್ಲಲು ಯಾರೂ ಸಿದ್ದರಿಲ್ಲ. ವಿಧಾನಸಭಾ ಚುನಾವಣೆಯ ಮೊದಲು ಹಾಗು ನಂತರವೂ ಬಿಜೆಪಿ ಅಪರಾಧಗಳಿಗೆ, ಅಪರಾಧಿಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಟೀಕಿಸಿದರು.

ಪ್ರಭು ಚವ್ಹಾಣ್ ಅವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ನಾನು ಹೊಣೆಗಾರನ್ನಲ್ಲ ಎಂದು ಭಗವಂತ ಖೂಬಾ ಬೀದರ್ ಜಿಲ್ಲಾ ಎಸ್ಪಿಗೆ ದೂರು ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಘಟಕ ಖೂಬಾ ಅವರಿಗೆ ನೋಟಿಸ್ ನೀಡಬೇಕಿತ್ತು, ಸ್ಪಷ್ಟನೆ ಕೇಳಬೇಕಿತ್ತು ಅಥವಾ ಕೇಂದ್ರ ಸಂಪುಟದಿಂದ ತೆಗೆದು ಹಾಕಬೇಕಿತ್ತು, ಇದನ್ನೆಲ್ಲಾ ಮಾಡದೇ ಕ್ರಿಮಿನಲ್‍ಗಳನ್ನ ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರು ಸುಮ್ಮನೆ ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷವು ವಿಧಾನಸಭಾ ಸ್ಪೀಕರ್ ಅವರಲ್ಲಿ ಮನವಿ ಮಾಡುತ್ತಿದ್ದು, ಶಾಸಕ ಪ್ರಭು ಚವ್ಹಾಣ್ ಅವರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಮತ್ತು ನ್ಯಾಯಾಂಗ ತನಿಖೆಗೆ ಸೂಚಿಸಬೇಕು. ಭಗವಂತ ಖೂಬಾ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೀದರ್ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ರದ್ದುಮಾಡಲಾಗುವುದು ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಅದರಂತೆ ನಾವು ನಮ್ಮ ಮಾತಿಗೆ ಬದ್ದರಾಗಿದ್ದೇವೆ. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ರಾಜ್ಯ ಪಟ್ಟಿಯಿಂದ ತೆಗೆದು ಕೇಂದ್ರ ಪಟ್ಟಿಗೆ ಸೇರಿಸಬಾರದು, ಶಿಕ್ಷಣದ ಕುರಿತು ಕಾನೂನು ತೆಗೆದುಕೊಳ್ಳುವ ಹಕ್ಕು ರಾಜ್ಯಗಳ ಬಳಿಯೇ ಇರಬೇಕು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News