ನನ್ನ ಮೇಲೆ ಹಲ್ಲೆಯಾಗಿದೆ ಎಂದು ಡಿಆರ್ಐ ಎಡಿಜಿಗೆ ರನ್ಯಾ ರಾವ್ ಪತ್ರ

ರನ್ಯಾ ರಾವ್
ಬೆಂಗಳೂರು : ಚಿನ್ನ ಕಳ್ಳಸಾಗಾಣಿಕೆ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾರಾವ್, ಜೈಲಿನಿಂದಲೇ ಡಿಆರ್ಐ ಅಡಿಷನಲ್ ಡೈರಕ್ಟರ್ ಜನರಲ್ಗೆ ಸುದೀರ್ಘವಾದ ಮನವಿ ಪತ್ರ ಬರೆದಿರುವುದಾಗಿ ವರದಿಯಾಗಿದೆ.
ಏಳು ಅಂಶಗಳ ಕುರಿತು ಪ್ರಸ್ತಾಪಿಸಿ ರನ್ಯಾ ರಾವ್ ಬರೆದಿರುವ ಮನವಿ ಪತ್ರವನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಡಿಆರ್ಐ ಎಡಿಜಿಯವರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
‘ದುಬೈನಿಂದ ಬಂದಿಳಿದ ನನ್ನ ವಿರುದ್ಧ ಚಿನ್ನ ಕಳ್ಳಸಾಗಾಣಿಕೆಯ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿಮ್ಮ ಅಧಿಕಾರಿಗಳು ನನಗೆ ವಿವರಣೆ ನೀಡಲು ಅವಕಾಶವನ್ನೇ ನೀಡಿಲ್ಲ’ ಎಂದು ಪತ್ರದಲ್ಲಿ ಆರೋಪಿಸಲಾಗಿರುವ ಬಗ್ಗೆ ಮೂಲಗಳು ತಿಳಿಸಿವೆ.
‘ನಾನು ನಿರ್ದೋಷಿಯಾಗಿದ್ದೇನೆ, ವಿಮಾನದ ಒಳಗಿನಿಂದಲೇ ನನ್ನನ್ನು ವಶಕ್ಕೆ ಪಡೆಯಲಾಗಿದೆ. ನಂತರ ನನ್ನನ್ನು ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದೆ. ಈ ಅವಧಿಯೊಳಗೆ ಸುಮಾರು 10ರಿಂದ 15 ಬಾರಿ ನನಗೆ ಕಪಾಳಕ್ಕೆ ಹೊಡೆದು, ಹಲ್ಲೆ ಮಾಡಿದ್ದಾರೆ. ಅಧಿಕಾರಿಗಳು ಸಿದ್ಧಪಡಿಸಿದ ದಾಖಲೆ ಮೇಲೆ ಸಹಿ ಮಾಡಲು ನಿರಾಕರಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪತ್ರದಲ್ಲಿ ನಟಿ ರನ್ಯಾ ರಾವ್ ಬರೆದಿರುವುದಾಗಿ ತಿಳಿದುಬಂದಿದೆ.