ರಾಜ್ಯಪಾಲರಿಗೆ ಅಪಮಾನ | ಅಧಿವೇಶನದ ಮೊದಲ ದಿನ ಸರಕಾರದ ವಿರುದ್ಧ ಪ್ರತಿಭಟನೆ : ಆರ್.ಅಶೋಕ್

Update: 2025-03-02 18:32 IST
Photo of R.Ashok

ಆರ್.ಅಶೋಕ್

  • whatsapp icon

ಬೆಂಗಳೂರು : ‘ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನಿರಂತರವಾಗಿ ಅಪಮಾನ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಅಧಿವೇಶನದ ಮೊದಲ ದಿನ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರಕಾರ ರಾಜ್ಯಪಾಲರಿಗೆ ಅಪಮಾನ ಮಾಡುತ್ತಿದೆ. ಒಂದು ಕಡೆ ಅಪಮಾನ ಮಾಡಿದರೆ, ಮತ್ತೊಂದು ಕಡೆ ಅವರಿಂದಲೇ ಸರಕಾರಕ್ಕೆ ಮೆಚ್ಚುಗೆ ಹೇಳುವ ಮಾತನ್ನು ಆಡಿಸಲಾಗುತ್ತಿದೆ. ಇದನ್ನು ವಿರೋಧಿಸಿ ಬಿಜೆಪಿಯಿಂದ ಮಾ.3ರಂದು ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಮಾ.7ಕ್ಕೆ ಪಾದಯಾತ್ರೆ :

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಈ ಮಾತನ್ನು ಹೇಳುತ್ತಿದ್ದಾರೆ. ಇದರ ಜೊತೆಗೆ ಹಣ ಇಲ್ಲದೆ 1ಲಕ್ಷ ಕೋಟಿ ರೂ.ಸಾಲ ಮಾಡಲಾಗುತ್ತಿದೆ. ಜನರ ಮೇಲೆ ತೆರಿಗೆ ಹೊರೆ ಹೇರಲಾಗುತ್ತಿದೆ. ಇದನ್ನು ಖಂಡಿಸಿ ಮಾ.7ರಂದು ಶಾಸಕರ ಭವನದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಮಾಡಲಾಗುವುದು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯರ ಸರಕಾರ ದಲಿತರ ಹಣವನ್ನು ಗ್ಯಾರಂಟಿಗೆ ಬಳಸಿದೆ. ಪರಿಶಿಷ್ಟರ ಹಣವನ್ನು ದಲಿತರಿಗೆ ಸಂಬಂಧಿಸಿದ ಯೋಜನೆಗಳಿಗೆ ಮಾತ್ರ ಬಳಸಬೇಕು. ಎಲ್ಲರಿಗೂ ಉಚಿತ ಎಂದು ಹೇಳಿ, ಈಗ ದಲಿತರ ಹಣ ಬಳಸಲಾಗುತ್ತಿದೆ. ಬಿಜೆಪಿಯ ಶೇ.40ರಷ್ಟು ಕಮಿಶನ್ ಹಣ ಉಳಿಸಿ ಗ್ಯಾರಂಟಿಗೆ ಬಳಸಲಾಗುವುದು ಎನ್ನಲಾಗಿತ್ತು. ಈಗ ಗುತ್ತಿಗೆದಾರರೇ ಸರಕಾರದ ಕಮಿಶನ್ ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

ರಾಜಣ್ಣ ನಟ್ಟು-ಬೋಲ್ಟ್ ಟೈಟ್ ಮಾಡಿ: ಡಿ.ಕೆ.ಶಿವಕುಮಾರ್ ಸಿನಿಮಾ ಕಲಾವಿದರಿಗೆ ನೆಟ್-ಬೋಲ್ಟ್ ಟೈಟ್ ಮಾಡುತ್ತೇನೆ ಎಂದಿದ್ದಾರೆ. ಮೊದಲು ಸಚಿವ ರಾಜಣ್ಣ ಸೇರಿದಂತೆ ಅವರನ್ನು ವಿರೋಧ ಮಾಡುತ್ತಿರುವವರ ನೆಟ್-ಬೋಲ್ಟ್ ಸರಿ ಮಾಡಲಿ. ಇವರು ಯಾವುದೇ ಕಲಾವಿದರನ್ನು ಆಹ್ವಾನಿಸಿಲ್ಲ. ಕಲಾವಿದರಿಗೆ ಧಮ್ಕಿ ಹಾಕುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಕಲಾವಿದರು ಕಾಂಗ್ರೆಸ್ ಗುಲಾಮರಲ್ಲ ಎಂದು ಅಶೋಕ್ ತಿರುಗೇಟು ನೀಡಿದರು.

ಧಮ್ಕಿ ಹಾಕುವುದು, ಗೂಂಡಾಗಿರಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ. ಸಿನಿಮಾ ರಂಗಕ್ಕೆ ಬಿಜೆಪಿ ಸರಕಾರವು ನೆರವು ನೀಡಿತ್ತು. ಇಂದು ಅಂಬರೀಶ್ ಇದ್ದಿದ್ದರೆ ಸರಿಯಾಗಿ ಉತ್ತರ ನೀಡುತ್ತಿದ್ದರು. ಸಿನಿಮಾ ರಂಗದವರು ಈ ಹೇಳಿಕೆಯನ್ನು ಖಂಡಿಸಬೇಕು. ಇದು ಕಲಾವಿದರಿಗೆ ಮಾಡುವ ಅಪಮಾನ. ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಲಿ ಎಂದು ಅಶೋಕ್ ಆಗ್ರಹಿಸಿದರು.

ಪ್ರಧಾನಿ ಮೋದಿಯವರು, ಶರದ್ ಪವಾರ್, ದೇವೇಗೌಡ ಸೇರಿದಂತೆ ಎಲ್ಲರಿಗೂ ಗೌರವ ನೀಡುತ್ತಾರೆ. ಅವರು ಗೌರವ ನೀಡುವುದರಲ್ಲಿ ಮಾದರಿ. ಡಿ.ಕೆ.ಶಿವಕುಮಾರ್ ಧಮ್ಕಿ ಹಾಕುವುದರಲ್ಲಿ ಮಾದರಿಯಾಗಿದ್ದಾರೆ ಎಂದು ಅಶೋಕ್ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News