ಯತ್ನಾಳ್ ಬಸ್ ಸ್ಟ್ಯಾಂಡ್ ಗಳಲ್ಲಿ ಕೂತು ಗಿಣಿ ಶಾಸ್ತ್ರ ಹೇಳಲಿ: ಸಚಿವ ಮಧು ಬಂಗಾರಪ್ಪ ತೀರುಗೇಟು

Update: 2023-08-15 10:47 GMT

ಶಿವಮೊಗ್ಗ,ಆ.15: ಅರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಹೇಳುವ ಬಿಜೆಪಿ ಶಾಸಕ ಯತ್ನಾಳ್ ಅವರಿಗೆ ಈ ಬಸ್ ಸ್ಟ್ಯಾಂಡ್ ನಲ್ಲಿ ಜಾಗ ಖಾಲಿಯಿದೆ. ಅಲ್ಲಿ ಗಿಣಿ ಶಾಸ್ತ್ರ ಹೇಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು,ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಸಾಕ್ಷ್ಯಾಧಾರ ನೀಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಸಿಎಂ ಸಹ ಇದನ್ನೇ ಹೇಳಿದ್ದಾರೆ.ಯತ್ನಾಳ್ ಅವರಿಗೆ ಈ ಬಸ್ ಸ್ಟ್ಯಾಂಡ್ ನಲ್ಲಿ ಜಾಗ ಖಾಲಿಯಿದೆ. ಅಲ್ಲಿ ಗಿಣಿ ಶಾಸ್ತ್ರ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.

ಉಪೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಈ ದೇಶದಲ್ಲಿ ಇರುವ ಎಲ್ಲ ಪ್ರಜೆಗಳು ನನ್ನ ಸ್ನೇಹಿತರು. ಹಾಗೆಯೇ ಉಪೇಂದ್ರ ಅವರು ನನ್ನ ಸ್ನೇಹಿತರು.ಅವರು ಏಕೆ ಹಾಗೆ ಹೇಳಿದರೋ ಗೊತ್ತಾಗುತ್ತಿಲ್ಲ.ಇದು ಯಾರಿಗೂ ಅನ್ವಯಿಸಲ್ಲ ಎಂದು ಸಿನೆಮಾದಲ್ಲಿ ಮೊದಲೇ ಹಾಕಿರುತ್ತೇವೆ. ಆದರೆ ನಿಜ ಜೀವನದಲ್ಲಿ ಏನೇ ಮಾಡಬೇಕಾದರೂ ಯೋಚನೆ ಮಾಡಿ ಮಾಡಬೇಕು. ಉಪೇಂದ್ರ ನನ್ನ ಆತ್ಮೀಯ ಸ್ನೇಹಿತರು. ಜೊತೆಗೆ ಒಂದು ಪಕ್ಷದ ಮುಖಂಡರು.ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ತಪ್ಪಾಗಿದ್ದರೆ ಉಪೇಂದ್ರ ಅವರು ಕ್ಷಮೆ ಕೇಳಬೇಕು ಎಂದರು.

ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಹಾಗೂ ಗುರಿ ನೀಡಿಕೆ ವಿಚಾರವಾಗಿ ಮಾಹಿತಿ ನೀಡಿದ ಅವರು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಎರಡು ದಿನ ಸಭೆ ನಡೆದಿತ್ತು.ಅಲ್ಲಿ ಇಡಿ ರಾಜ್ಯದಲ್ಲಿ ಗೆಲುವು ಸಾಧಿಸಲು ಸಿಎಂ ಹಾಗೂ ಡಿಸಿಎಂ ಗೆ ಗುರಿ ನೀಡಲಾಗಿದೆ.ಅದೇ ರೀತಿ ಸಚಿವರಿಗೂ ಕೆಲ ಕ್ಷೇತ್ರಗಳಲ್ಲಿ ಗೆಲ್ಲಲು ಟಾರ್ಗೆಟ್ ನೀಡಲಾಗಿದೆ.ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದರು.

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಗ್ಗಂಟಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲಿ ಸದರಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು. ಎಂದರು.

ಅಡಿಷನಲ್ ಅಡ್ವೋಕೇಟ್ ಜನರಲ್ ಸೇರಿದಂತೆ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ತಜ್ಞರನ್ನೊಳಗೊಂಡಂತೆ ಈಗಾಗಲೇ ಅನೇಕ ಮಹತ್ವದ ಸಭೆಗಳನ್ನು ಏರ್ಪಡಿಸಿ, ಸಮಾಲೋಚನೆ ನಡೆಸಲಾಗಿದೆ. ಅಗತ್ಯವಿದ್ದಲ್ಲಿ ರೈತರ ಹಿತ ಕಾಯುವಲ್ಲಿ ಕಾನೂನು ಸಮರಕ್ಕೂ ಸರ್ಕಾರ ಬದ್ಧವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ ಕೇಂದ್ರದ ಸಹಕಾರವನ್ನು ಪಡೆಯಲಾಗುವುದಲ್ಲದೇ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಮರ್ಥವಾಗಿ ವಿಷಯ ಮಂಡನೆ ಮಾಡಲಾಗುವುದು.ಜಿಲ್ಲೆಯಲ್ಲಿನ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಭೂ ಸಮಸ್ಯೆಯನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ನನ್ನ ಇಲಾಖೆ ಅಡಿ 1.20 ಲಕ್ಷ ಮಕ್ಕಳು ಬರುತ್ತಾರೆ. ಶಾಲೆಗಳ ದುರಸ್ತಿಯಾಗಬೇಕಿದೆ. ಹಾಗೂ ಹೊಸ ಶಾಲೆಗಳ ನಿರ್ಮಾಣವೂ ಆಗಬೇಕಿದೆ.ಆ.18 ನೇ ತಾರೀಖು ಮಂಡ್ಯದಲ್ಲಿ ಹೊಸ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

1ರಿಂದ 10 ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಎರಡು ಮೊಟ್ಟೆ ನೀಡಲಾಗುವುದು.ಮೊಟ್ಟೆ ತಿನ್ನದ ಮಕ್ಕಳಿಗೆ ಚಿಕ್ಕಿ ನೀಡುತ್ತೇವೆ.ಗೆದ್ದವನು ಒಳ್ಳೆಯವನು ಸೋತವನು ಕೆಟ್ಟವನ. ಎಲ್ಲರೂ ನಮ್ಮ ದೇಶದ ಪ್ರಜೆಗಳೆ.ಮಕ್ಕಳನ್ನು ಫೇಲ್ ಮಾಡಬಾರದು ಅವರಿಗೆ ಅವಕಾಶ ನೀಡಬೇಕು.ಮಕ್ಕಳು ಅನುತ್ತೀರ್ಣವಾಗುವುದಕ್ಕೆ ಹಲವು ಕಾರಣಗಳಿರುತ್ತವೆ.ಹೀಗಾಗಿ ಎರಡನೇ ಪೂರಕ ಪರೀಕ್ಷೆ ನಡೆಸುತ್ತೇವೆ. ದೇಶದಲ್ಲೇ ಇದು ಹೊಸ ಪ್ರಯತ್ನವಾಗಲಿದೆ ಎಂದರು.

ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಿದೆ. ಆದರೆ ಅದರಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಿದೆ. ಸ್ಟೇಟ್ ಎಜುಕೇಷನ್ ಪಾಲಿಸಿಯನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುತ್ತೇವೆ. ಇದಕ್ಕಾಗಿ ಕಮಿಟಿಗಳನ್ನು ರಚಿಸುವ ಕೆಲಸ ಮಾಡಿದ್ದೇವೆ. ಮಕ್ಕಳ ಭವಿಷ್ಯಕ್ಕೆ ಪೂರಕವಾಗುವಂತ ಶಿಕ್ಷಣ ನೀಡುತ್ತೇವೆ. ಕರ್ನಾಟಕ ಡಿಜಿಟಲ್ ಲೈಬ್ರರಿಯಲ್ಲಿ 40 ಲಕ್ಷ ಪುಸ್ತಕಗಳಿವೆ. ಇಲ್ಲಿ ಒಂದನೇ ತರಗತಿಯಿಂದ ಐಎಎಸ್ ವರೆಗೆ ವ್ಯಾಸಂಗ ಮಾಡುವ ಪುಸ್ತಕಗಳಿವೆ. ಕರ್ನಾಟಕ ಡಿಜಿಟಲ್ ಲೈಬ್ರರಿ ವೆಬ್ ನಲ್ಲಿ ಎಲ್ಲರೂ ಓದಬಹುದು.ಶಿಕ್ಷಕರ ದಿನಾಚರಣೆಯಂದು ಈ ವೆಬ್ ಸೈಟ್ ರಿ ಲಾಂಚ್ ಮಾಡುತ್ತೇವೆ ಎಂದರು.

ಮುಂದಿನ ವರ್ಷದೊಳಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಿದ್ದೇವೆ. ಎರಡು ಮೂರು ಗ್ರಾಮ ಪಂಚಾಯತಿಗಳಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಿದ್ದೇವೆ. ಎಲ್ ಕೆಜಿ, ಯುಕೆಜಿಯನ್ನು ಸರ್ಕಾರಿ ಶಾಲೆಗಳನ್ನು ಆರಂಭಿಸಲಿದ್ದೇವೆ ಎಂದರು.

ಶಿಕ್ಷಕರ ನೇಮಕಾತಿ ವಿಷಯ ಕೋರ್ಟ್ ನಲ್ಲಿದೆ. ಹೀಗಾಗಿ ನೇಮಕಾತಿ ಸಾಧ್ಯವಾಗುತ್ತಿಲ್ಲ. ಬೇಗನೆ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ ಶೀಘ್ರವೇ 10 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತೇವೆ.ರಾಜ್ಯದಲ್ಲಿ 1600 ಅನಧಿಕೃತ ಶಾಲೆಗಳಿವೆ.ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News