ಕಾಶ್ಮೀರದಲ್ಲಿ ಉಗ್ರರ ದಾಳಿ: ಕನ್ನಡಿಗರ ನೆರವಿಗೆ ತೆರಳಿದ ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹಲವರು ಮೃತಪಟ್ಟಿದ್ದು, ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಕನ್ನಡಿಗರ ನೆರವಿಗೆ ಸಚಿವ ಸಂತೋಷ್ ಲಾಡ್ ತೆರಳಿದ್ದಾರೆ.
ಈ ಸಂದರ್ಭ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಯಾವುದೇ ತುರ್ತು ಸಂದರ್ಭದಲ್ಲಿ ನನ್ನನ್ನು ನಿಯೋಜನೆ ಮಾಡುತ್ತಿದ್ದು, ನಾನು ಅದೃಷ್ಟವಂತ ಎಂದುಭಾವಿಸುತ್ತೇನೆ. ಏರ್ ಕ್ರಾಫ್ಟ್ ಹೈದರಾಬಾದ್ ಅಥವಾ ಮುಂಬೈಯಿಂದ ಬರುತ್ತೆ. ಕರ್ನಾಟಕದ 2 ಜನ ಮೃತ ಪಟ್ಟಿದ್ದಾರೆ ಅಂತ ದೃಢ ಪಟ್ಟಿದೆ. ನಾನು ಇಲ್ಲಿಂದ ಶ್ರೀನಗರಕ್ಕೆ ಹೋಗ್ತೇನೆ ಎಂದು ತಿಳಿಸಿದರು
ಕೊಪ್ಪಳ ಜಿಲ್ಲೆಯವರು 12 ಜನ ಇದ್ದಾರೆಂಬ ಮಾಹಿತಿ ಇದೆ. ಕರ್ನಾಟಕದವರು ಎಷ್ಟು ಜನ ಇದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ನಂತರ ಸಂಪೂರ್ಣ ಮಾಹಿತಿ ತಿಳಿಯಲಿದೆ. ಎಲ್ಲರೂ ಸುರಕ್ಷಿತರಾಗಿರಲಿ ಅಂತ ಪ್ರಾರ್ಥಿಸುತ್ತೇನೆ ಎಂದರು.
ಇದೀಗ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ವಾಪಸ್ ಕರೆತರಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ಈ ಸಂಬಂಧ ಪ್ರವಾಸಕ್ಕೆ ತೆರಳಿರುವವರ ಮಾಹಿತಿ ನೀಡುವಂತೆ ಪ್ರವಾಸ ನಿರ್ವಹಣೆದಾರರನ್ನು ಕೋರಿ ಸರಕಾರ ಪ್ರಕಟಣೆ ಹೊರಡಿಸಿದೆ. ದಾಳಿಗೆ ಬಲಿಯಾದವರ ಮೃತದೇಹಗಳನ್ನು ಅವರ ಊರುಗಳಿಗೆ ಕಳುಹಿಸಲು ಸರಕಾರ ವಿಮಾನಗಳ ವ್ಯವಸ್ಥೆಯನ್ನು ಮಾಡಿದೆ.
ಪ್ರವಾಸಕ್ಕೆ ತೆರಳಿರುವವರ ಸಂಬಂಧಿಕರು ಮತ್ತು ಸ್ನೇಹಿತರು ಪ್ರವಾಸಿಗರ ಮಾಹಿತಿಯನ್ನು ಈ ಕೆಳಕಂಡ ಹೆಲ್ಪ್ಲೈನ್ ಸಂಖ್ಯೆಗೆ ಕರೆಮಾಡಿ ತಿಳಿಸುವಂತೆ ಕೋರಲಾಗಿದೆ.
ಹೆಲ್ಪ್ಲೈನ್ ಸಂಖ್ಯೆಗಳು
* 080-43344334
* 080-43344335
* 080-43344336
* 080-43344342