ಯುಪಿಎಸ್ಸಿ ನಾಗರೀಕ ಸೇವಾ ಪರೀಕ್ಷೆ ಫಲಿತಾಂಶ : ರಾಜ್ಯದಿಂದ 20 ಮಂದಿ ಆಯ್ಕೆ

ಆರ್. ರಂಗ ಮಂಜು/ಡಾ.ಸಚಿನ್ ಬಸವರಾಜ ಗುತ್ತೂರ್
ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್ಸಿ) 2024ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆಯ(ಸಿಎಸ್ಇ) ಫಲಿತಾಂಶವನ್ನು ಮಂಗಳವಾರದಂದು ಪ್ರಕಟಿಸಿದ್ದು, ದೇಶಾದ್ಯಂತ 1,009 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡಿದುಕೊಂಡಿದ್ದಾರೆ. ರಾಜ್ಯದಿಂದ 20 ಮಂದಿ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಅಖಿಲ ಭಾರತೀಯ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಪರೀಕ್ಷೆಯಲ್ಲಿ ಆರ್.ರಂಗ ಮಂಜು 24ನೇ ರ್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಡಾ.ಸಚಿನ್ ಬಸವರಾಜ ಗುತ್ತೂರ್ 41ನೇ ರ್ಯಾಂಕ್, ವಿಭೋರೆ ಮೆಂಡಿರಟ್ಟ 389ನೇ ರ್ಯಾಂಕ್, ಬಿ.ಎಂ. ಮೇಘನಾ 425ನೇ ರ್ಯಾಂಕ್, ಡಾ. ಮಾಧವಿ 446ನೆ ರ್ಯಾಂಕ್, ಪ್ರತಿವಾ ಲಾಮ 461ನೇ ರ್ಯಾಂಕ್ ಪಡೆದಿದ್ದಾರೆ.
ರಾಹುಲ್ ಸಿ ಯರತ್ನಳಿ 462ನೇ ರ್ಯಾಂಕ್, ಪರಮಿತ ಮಲಕರ್ 477ನೇ ರ್ಯಾಂಕ್, ಡಾ. ಭಾನುಪ್ರಕಾಶ್ 523ನೇ ರ್ಯಾಂಕ್, ಅಭಿಶೀಲ್ ಜೈಶ್ವಾಲ್ 538ನೇ ರ್ಯಾಂಕ್, ಎ.ಮಧು 544ನೇ ರ್ಯಾಂಕ್, ವರುಣ್ ಕೆ ಗೌಡ 565ನೇ ರ್ಯಾಂಕ್, ಭರತ್ ಸಿಯಾರಂ 567ನೇ ರ್ಯಾಂಕ್ ಪಡೆದಿದ್ದಾರೆ.
ಸ್ವಪ್ಟಿಲ್ ಭಾಗಲ್ 620ನೇ ರ್ಯಾಂಕ್, ಸಂಪ್ರೀತ್ ಸಂತೋಷ್ 652ನೇ ರ್ಯಾಂಕ್, ನಿಖಿಲ್ ಎಂಆರ್ 724 ರ್ಯಾಂಕ್, ಟಿ. ವಿಜಯ್ ಕುಮಾರ್ 894 ರ್ಯಾಂಕ್, ಹನುಮಂತಪ್ಪ ನಂದಿ 910 ರ್ಯಾಂಕ್, ಧನ್ಯಾ ಕೆ.ಎಸ್ 982 ರ್ಯಾಂಕ್, ಮೋಹನ್ ಪಾಟೀಲ್ 984 ರ್ಯಾಂಕ್ ಗಳಿಸಿದ್ದಾರೆ.ಯುಪಿಸ್ಸಿ ಟಾಪ್ 50ರಲ್ಲಿ ರಾಜ್ಯದ ಆರ್. ರಂಗ ಮಂಜುಗೆ 24ನೇ ರ್ಯಾಂಕ್ ಸಿಕ್ಕಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಸಚಿನ್ ಬಸವರಾಜ ಗುತ್ತೂರ್ ಯುಪಿಎಸ್ಸಿಯ ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಪಡೆದಿದ್ದಾರೆ. ಸಚಿನ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದವರಾಗಿದ್ದು, ಬೆಂಗಳೂರಿನ ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಪರೀಕ್ಷೆಗೆ ತರಬೇತಿ ನಡೆಸಿದ್ದರು. ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದುಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಇರಗಸಂದ್ರ ಎ.ಮಧು ಯುಪಿಎಸ್ಸಿ ಪರೀಕ್ಷೆಯಲ್ಲಿ 544ನೇ ರ್ಯಾಂಕ್ ಪಡೆದಿದ್ದಾರೆ. ಮಧು ಅಗ್ರಿಕಲ್ಚರ್ ಬಿಎಸ್ಸಿ ಪದವೀಧರರಾಗಿದ್ದು, ಸ್ವ-ಗ್ರಾಮದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿದ್ದರು. ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಏನಿಗದೆಲೆ ಜವಾಹರ್ ನವೋದಯ ಶಾಲೆಯಲ್ಲಿಯೂ ವ್ಯಾಸಂಗ ಮಾಡಿದ್ದರು. ಯಾವುದೇ ಅಕಾಡೆಮಿಗೆ ಹೋಗದೆ ನಾಲ್ಕು ವರ್ಷವೂ ಮನೆಯಲ್ಲಿಯೇ ಓದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದಾರೆ.
2024ರ ಯುಪಿಎಸ್ಸಿಯ ನಾಗರೀಕ ಸೇವಾ ಪರೀಕ್ಷೆಗೆ 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪೂರ್ವಭಾವಿ ಪರೀಕ್ಷೆಯು ಜೂ.16ರಂದು ನಡೆದಿತ್ತು. ಇವರಲ್ಲಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದು, ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಸೆಪ್ಟೆಂಬರ್ನಲ್ಲಿ ಮುಖ್ಯ ಪರೀಕ್ಷೆ ನಡೆದಿದ್ದು, 2,845 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಸಂದರ್ಶನ ಮುಗಿಸಿ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.