18 ಶಾಸಕರ ಅಮಾನತು ರದ್ದತಿ ವಿಚಾರ: ಸದನದಲ್ಲಿ ಮಾತ್ರ ಮರು ಪರಿಶೀಲನೆಗೆ ಅವಕಾಶ: ಸ್ಪೀಕರ್ ಯು.ಟಿ.ಖಾದರ್

ಮಂಗಳೂರು: ವಿಧಾನ ಸಭೆಯ ಕಲಾಪದ ಸಂದರ್ಭದಲ್ಲಿ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವ ಕ್ರಮದ ಬಗ್ಗೆ ಮರು ಪರಶೀಲನೆಗೆ ವಿಪಕ್ಷ ನಾಯಕರ ಮನವಿ ಬಂದಿದೆ. ಸಂವಿಧಾನದ ಪೀಠಕ್ಕೆ ಅಗೌರ ತೋರಿದ ಹಿನ್ನೆಲೆಯಲ್ಲಿ ಸದನದಲ್ಲಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಸದನದಲ್ಲಿ ಮಾತ್ರ ಮರು ಪರಿಶೀಲಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ರವಿವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ ಕೈಗೊಳ್ಳಲು ಕೆಲವು ಶಾಸಕರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಿವಿಲೇಜ್ ಕಮಿಟಿಗೆ ಶಿಫಾರಸು ಮಾಡಲಾಗಿದೆ. ಶಾಸಕರು ಸಂವಿಧಾನಕ್ಕೆ ವಿರುದ್ಧ ವಾಗಿ ನಡೆದುಕೊಳ್ಳಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಮಿತಿ ತೀರ್ಮಾನಿಸಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ದೇಶವನ್ನು ದುರ್ಬಲಗೊಳಿಸುವ ಶಕ್ತಿಗಳಿಗೆ ಅವಕಾಶ ನೀಡಬಾರದು
ಕಾಶ್ಮೀರದ ಪಲ್ಗಾಮ್ ನಲ್ಲಿ ಉಗ್ರಗಾಮಿಗಳು ನಡೆಸಿದ ಕೃತ್ಯ ದೇಶದಲ್ಲಿ ಅಶಾಂತಿ ಸೃಷ್ಟಿ ಸುವ ಮತ್ತು ದೇಶವನ್ನು ದುರ್ಬಲಗೊಳಿಸುವ ಶಕ್ತಿಗಳ ತಂತ್ರವಾಗಿದೆ. ಅಂತಹ ಶಕ್ತಿಗಳಿಗೆ ಅವಕಾಶ ನೀಡಬಾರದು. ಅವರನ್ನು ಮಟ್ಟ ಹಾಕಬೇಕು ಎಂದು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ದೇಶದ ಜನರು ಈ ಸಂದರ್ಭದಲ್ಲಿ ಒಗ್ಗಟ್ಟಿನಲ್ಲಿರಬೇಕಾಗಿದೆ. ಕೇಂದ್ರ ಸರಕಾರ ಎಲ್ಲಾ ವಿಪಕ್ಷಗಳನ್ನು ಕರೆದು ತೀರ್ಮಾನಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದ್ದಾರೆ.