"ವಿಶ್ವಕರ್ಮ ಯೋಜನೆಯಲ್ಲಿ 5676 ಅರ್ಜಿಗಳು ಪರೀಶೀಲನೆಗೆ ಯೋಗ್ಯ"

Update: 2025-03-14 21:15 IST
"ವಿಶ್ವಕರ್ಮ ಯೋಜನೆಯಲ್ಲಿ 5676 ಅರ್ಜಿಗಳು ಪರೀಶೀಲನೆಗೆ ಯೋಗ್ಯ"
  • whatsapp icon

ಉಡುಪಿ, ಮಾ.14: ವಿಶ್ವಕರ್ಮ ಯೋಜನೆ ಮತ್ತು ಪಿಎಇಜಿಪಿ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಜರಗಿತು.

ಮೊದಲು ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಅಧಿಕಾರಿಗಳಿಂದ ಯೋಜನೆಯ ಪ್ರಗತಿಯ ವಿವರಗಳನ್ನ ಪಡೆದರು. ಒಟ್ಟು 18809 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 5676 ಪರೀಶೀಲನೆಗೆ ಯೋಗ್ಯವಾಗಿದೆ. 4865 ಅರ್ಜಿಗಳನ್ನು ಜಿಲ್ಲಾ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. 18809 ಅರ್ಜಿಗಳಲ್ಲಿ ಟೈಲರಿಂಗ್, ಬಡಗಿ ಮತ್ತು ಗಾರೆ ಕೆಲಸಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದು, ಈ ಅರ್ಜಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಂಸದ ಕೋಟ ಮಾತನಾಡಿ, ಈ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮಾತುಕತೆ ನಡೆಸಿದ್ದೇನೆ. ಉಡುಪಿ ಜಿಲ್ಲೆಯಲ್ಲಿ ಟೈಲರಿಂಗ್, ಬಡಗಿ ಮತ್ತು ಗಾರೆ ಕೆಲಸಕ್ಕೆ 12ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೈಲರಿಂಗ್ ಒಂದಕ್ಕೆ 22ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ. ಹೀಗೆ ಆದಾಗ ಬೇರೆಲ್ಲಾ ಕಸುಬುದಾರರಿಗೆ ಸಮಸ್ಯೆಯಾಗುತ್ತದೆ. ಎಲ್ಲ ಕಸುಬುದಾರರಿಗೂ ಅವಕಾಶ ಸಿಗಬೇಕು ಎಂಬ ದೃಷ್ಟಿಯಿಂದ ತಡೆ ಹಿಡಿಯಲಾಗಿದೆ. ಪರಿಶೀಲನೆ ನಡೆಸಿ ಇನ್ನೆರಡು ಮೂರು ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಟೈಲರಿಂಗ್‌ಗೆ ಹಣ ನೀಡುತ್ತಿಲ್ಲ ಎಂದು ಕೆಲವರು ಮೀನಿನಬಲೆ ತಯಾರಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿ ದ್ದಾರೆ. ಇಂತಹ ಹಲವಾರು ಪ್ರಕರಣಗಳು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು. ಸೂಕ್ತವಾಗಿ ಪರೀಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸಂಸದರು ಸೂಚಿಸಿದರು. ಅರ್ಜಿ ಪರಿಶೀಲನೆ ವಿಳಂಬ ವಾಗುತ್ತಿರುವುದನ್ನು ಕಂಡ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರಿನ ತರಬೇತಿ ಸಂಸ್ಥೆಗಳು ಜಿಲ್ಲೆಯ ಫಲಾನುಭವಿಗಳನ್ನು ಅರ್ಧ ದಿನದ ತರಬೇತಿ ನೀಡಿ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂಬ ಬಗ್ಗೆ ತರಬೇತಿ ಸಂಸ್ಥೆಗಳ ಮುಖ್ಯಸ್ಥರು ಸಂಸದರ ಗಮನ ಸೆಳೆದರು. ಮುಖಚಹರೆ ಗುರುತಿಸುವ ತಂತ್ರಜ್ಞಾನವನ್ನು ಎನ್‌ಎಸಿಡಿಎ ಜಾಲತಾಣದಲ್ಲಿ ಅಳವಡಿಸ ಲಾಗುತ್ತದೆ. ಆ ಬಳಿಕ ಈ ಸಮಸ್ಯೆ ಪರಿಹಾರವಾಗಲಿದೆ. ಆದರೆ ಐದು ದಿನಗಳ ತರಬೇತಿಗೆ ಕಡ್ಡಾಯ ವಾಗಿ ಬಂದವರಿಗೆ ಮಾತ್ರ ಪ್ರಮಾಣಪತ್ರ ವಿತರಣೆಯಾಗಬೇಕು ಎಂಬ ವಿಚಾರದ ಬಗ್ಗೆ ಚರ್ಚಿಸಲಾಯಿತು.

ಕಳೆದ ಬಾರಿ 275 ವಿಶ್ವಕರ್ಮ ಯೋಜನೆಯ ಟೂಲ್‌ಕಿಟ್ ವಿತರಣೆ ಯಾಗಿದೆ. ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಈ ಬಾರಿ 144 ಟೂಲ್‌ಕಿಟ್ ವಿತರಣೆಗೆ ಬಂದಿದೆ. ಇದನ್ನು ಸರಳ ಸಮಾರಂಭ ಮಾಡಿ ಸ್ಥಳೀಯ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ವಿತರಣೆ ಮಾಡುವಂತೆ ನಿರ್ಧರಿಸಲಾಯಿತು. ತರಬೇತಿ ಸಂಸ್ಥೆಗಳಿಗೆ ಹಣಪಾವತಿ ವಿಳಂಬದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಬಳಿಕ ಪಿಎಂಇಜಿಪಿ ಯೋಜನೆಯ ಸಮಸ್ಯೆಗಳನ್ನು ಚರ್ಚಿಸಿದ ಸಂಸದರು, 438 ಅರ್ಜಿಗಳ ಕ್ಲೈಂ ಆಗಿದೆ. 97 ಮಂದಿಗೆ ಮಾರ್ಜಿನ್ ಹಣ ಬಂದಿದೆ. 15.72 ಕೋಟಿ ರೂ.ಗಳ ಸಬ್ಸಿಡಿ ಮಂಜೂರಾಗಿದ್ದು, 2.95 ಕೋಟಿ ರೂ. ಹಣ ಬಂದಿದೆ. ಸುಮಾರು 13 ಕೋಟಿ ರೂ. ಮಾರ್ಜಿನ್ ಹಣ ಬಾರದೇ ಇರುವುದರಿಂದ ಬ್ಯಾಂಕ್‌ಗಳು ಬಡ್ಡಿಯನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಹಾಯಕ ನಿರ್ದೇಶಕ ಸೀತಾರಾಮ್ ಶೆಟ್ಟಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್, ಲೀಡ್ ಬ್ಯಾಂಕ್‌ನ ಪ್ರಬಂಧಕ ಹರೀಶ್ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News