ಸೆ.27ರಿಂದ ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮುಷ್ಕರ

Update: 2023-09-26 16:02 GMT

ಉಡುಪಿ, ಸೆ.26: ಕಳೆದ ಕೆಲವು ದಿನಗಳಿಂದ ಇಲಾಖಾ ಅಧಿಕಾರಿಗಳು ಪರವಾನಿಗೆ ರಹಿತ ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು, ಯಾವುದೇ ಅವಕಾಶ ನೀಡದೇ ದೊಡ್ಡ ಮಟ್ಟದ ದಂಡ ಹಾಗೂ ಎಫ್‌ಐಆರ್‌ಗಳಂಥ ಕಟಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ವಿರೋಧಿಸಿ ನಾಳೆ (ಸೆ.27)ಯಿಂದ ಎಲ್ಲಾ ರೀತಿಯ ಕಟ್ಟಡ ಸಾಮಗ್ರಿಗಳನ್ನು ಸಾಗಾಟ ಮಾಡುವುದನ್ನು ಸ್ಥಗಿತಗೊಳಿಸಲು ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ಸಾಮಗ್ರಿಗಳಾದ ಕೆಂಪು ಕಲ್ಲು, ಶಿಲೆ ಕಲ್ಲು, ಜಲ್ಲಿಕಲ್ಲು, ಮಣ್ಣು, ಮರಳು ಮುಂತಾದವುಗಳನ್ನು ಪರವಾನಿಗೆ ಯಲ್ಲಿ ಕೆಲಮಟ್ಟದ ರಿಯಾಯಿತಿಗಳೊಂದಿಗೆ ಜಿಲ್ಲೆಯೊಳಗೆ ಸಾಗಾಟ ಮಾಡಿಕೊಂಡು ಬಂದಿರುವ ನಮಗೆ ಇತ್ತೀಚೆಗೆ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಎಂದವರು ತಿಳಿಸಿದರು.

ನಾವು ಪರವಾನಿಗೆ ದೊರೆಯುವ ಕಡೆಗಳಲ್ಲಿ ಪರವಾನಿಗೆ ಪಡೆದು, ಪರವಾನಿಗೆ ಸಿಗದ ಜಾಗಗಳಲ್ಲಿ ಅನಿವಾರ್ಯವಾಗಿ ಪರವಾನಿಗೆ ರಹಿತವಾಗಿ ಕಟ್ಟಡ ಸಾಮಗ್ರಿಗಳನ್ನು ಪೂರೈಕೆಮಾಡಿಕೊಂಡು ಬಂದಿದ್ದೇವೆ. ಆದರೆ ಇತ್ತೀಚೆಗೆ ಕಾನೂನಿನ ನೆಪದಲ್ಲಿ ಪರವಾನಿಗೆ ರಹಿತ ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳನ್ನು ಜಪ್ತಿ ಮಾಡಿ, ದಂಡ ವಿಧಿಸುವ ಕ್ರಮವನ್ನು ಕಟ್ಟುನಿಟ್ಟಾಇಗ ಪಾಲಿಸುತಿದ್ದಾರೆ ಎಂದವರು ಹೇಳಿದರು.

ಇಂಥ ಏಕಾಏಕಿ ಬದಲಾವಣೆಯಿಂದ ಸಾಕಷ್ಟು ವಾಹನ ಮಾಲಕರು ಈಗಾಗಲೇ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ. ಇನ್ನುಳಿದವರಿಗೆ ಯಾವುದೇ ತರಹದ ಕಟ್ಟಡ ಸಾಮಗ್ರಿಗಳ ಸಾಗಾಟ ಮಾಡಲು ಅವಕಾಶವಿಲ್ಲದಿರುವುದನ್ನು ಗಮನಿಸಿ ನಮ್ಮ ಸಂಕಟವನ್ನು ಸರಕಾರದ ಗಮನಕ್ಕೆ ತರಲು ನಾಳೆಯಿಂದಲೇ ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದರು.

ಲಾರಿ ಹಾಗೂ ಟೆಂಪೋ ಮಾಲಕರ ಮೇಲೆ ಒನ್ ಸ್ಟೇಟ್ ಒನ್ ಜಿಪಿಎಸ್‌ನ್ನು ಕಡ್ಡಾಯವಾಗಿ ಹೇರುವ ಪ್ರಯತ್ನ ನಡೆದಿದೆ. ಜಲ್ಲಿ ಕ್ರಷರ್, ಮರಳು ದಕ್ಕೆ, ಕೆಂಪು ಕಲ್ಲುಕೋರೆ, ಶಿಲೆಕಲ್ಲು ಕೋರೆಗಳಲ್ಲಿ ಕಡ್ಡಾಯವಾಗಿ ವೇ ಬ್ರಿಜ್ ಅಳವಡಿಸದೇ, ವೇ ಬ್ರಿಜ್‌ಗೆ ಜಿಪಿಎಸ್ ಸಂಯೋಜಿಸದೇ, ನಂಬರ್ ಪ್ಲೇಟ್ ರೀಡರ್ ಕ್ಯಾಮರಾ ಅಳವಡಿಸದೇ ಇದನ್ನು ಹೇಗೆ ಮಾಡಲು ಸಾಧ್ಯ ಎಂದು ರಾಘವೇಂದ್ರ ಶೆಟ್ಟಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಂಥ ಯಾವುದೇ ಸಿದ್ಧತೆ ಮಾಡದೇ ತರಾತುರಿಯಲ್ಲಿ ಎರಡು ತಿಂಗಳ ಹಿಂದೆ ಐಎಲ್‌ಎಂಎಸ್ ಪರವಾನಿಗೆ ಸ್ಥಗಿತಗೊಳಿಸಿ ಲಾರಿ ಮಾಲಕರಿಗೆ ಜಿಪಿಎಸ್ ಅಳವಡಿಸಲು ಒತ್ತಡ ಹೇರುತ್ತಿರುವುದೇಕೆ ಎಂದವರು ಸರಕಾರವನ್ನು ಪ್ರಶ್ನಿಸಿದರು.

ಪರವಾನಿಗೆ ರಹಿತವಾಗಿ ಕಟ್ಟಡ ಸಾಮಗ್ರಿಗಳನ್ನು ಸಾಗಿಸುತಿದ್ದ ಲಾರಿ ಅಥವಾ ಟೆಂಪೋವನ್ನು ವಶಪಡಿಸಿಕೊಂಡರೆ, ಸಾಮಗ್ರಿಗಳನ್ನು ಪೂರೈಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳದಿರಲು, ಅದೇ ರೀತಿ ಸಾಮಗ್ರಿಯನ್ನು ಖರೀದಿಸುವ ಗ್ರಾಹಕನ ಮೇಲೂ ಯಾಕೆ ಕ್ರಮತೆಗೆದುಕೊಳ್ಳುವುದಿಲ್ಲ. ಕೇವಲ ಸಾಲ ಮಾಡಿ ಲಾರಿ-ಟೆಂಪೊವನ್ನು ಓಡಿಸುವ ಮಾಲಕನ ಮೇಲೆ ಮಾತ್ರ ಯಾಕೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ಕೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಚಂದ್ರ ಪೂಜಾರಿ, ಮನೋಹರ ಕುಂದರ್, ವಿಜಯಕುಮಾರ, ರಮೇಶ್ ಶೆಟ್ಟಿ, ಹರೀಶ್ ಕೋಟ್ಯಾನ್, ಅಭಿಷೇಕ್ ಪೂಜಾರಿ, ಕೃಷ್ಣ ಅಂಬಲಪಾಡಿ, ಶೌಕತ್ ಅಲಿ, ಅಮ್ಜದ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News