ಉಡುಪಿ: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

Update: 2024-09-27 14:05 GMT

ಉಡುಪಿ, ಸೆ.27: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಕೆಲವು ಸ್ಪರ್ಧೆಗಳು ಸೆ.28 ಮತ್ತು 29ರಂದು ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕ್ರೀಡಾಕೂಟವನ್ನು ನಾಳೆ ಸೆ.28ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಲಿದ್ದು, ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಪೌರಾಯುಕ್ತ ರಾಯಪ್ಪ ಹಾಗೂ ಇತರರು ಉಪಸ್ಥಿತರಿರಲಿದ್ದಾರೆ.

ವಾಲಿಬಾಲ್, ಕಬಡ್ಡಿ: ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದಲ್ಲಿ ನಾಳೆ ಮೈಸೂರು ವಿಭಾಗ ಮಟ್ಟದ ವಾಲಿಬಾಲ್, ಕಬಡ್ಡಿ ಹಾಗೂ ಈಜು ಸ್ಪರ್ಧೆಗಳು ಬೆಳಗ್ಗೆ 8 ಗಂಟೆಯಿಂದ ನಡೆದರೆ, ಸೆ.29ರ ರವಿವಾರ ಟೆನಿಸ್ ಹಾಗೂ ಟೇಬಲ್ ಟೆನಿಸ್ ಸ್ಪರ್ಧೆಗಳು ನಡೆಯಲಿವೆ ಎಂದು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಉಳಿದಂತೆ ನಾಳೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ವೆಯ್ಟ್‌ಲಿಫ್ಟಿಂಗ್, ಕುಸ್ತಿ, ಥ್ರೋಬಾಲ್, ಬಾಲ್‌ಬ್ಯಾಡ್ಮಿಂಟನ್ ಹಾಗೂ ಟೇಕ್ವಾಂಡೋ ಕ್ರೀಡಾ ಸ್ಪರ್ಧೆಗಳು ನಡೆದರೆ, ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಖೋ-ಖೋ ಹಾಗೂ ನೆಟ್‌ಬಾಲ್, ಚಾಮರಾಜನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಹಾಗೂ ಹ್ಯಾಂಡ್‌ಬಾಲ್, ಕೂಡಿಗೆ ಕ್ರೀಡಾಶಾಲೆಯಲ್ಲಿ ಹಾಕಿ, ಯೋಗ ಹಾಗೂ ಜಿಮ್ನಾಸ್ಟಿಕ್ಸ್, ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ಸ್ಪರ್ಧೆಗಳು ನಡೆಯಲಿವೆ.

ಸೆ.29ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ಬಾಲ್ ಸ್ಪರ್ಧೆಗಳು ನಡೆಯಲಿವೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ, ದೂ.ಸಂಖ್ಯೆ: 0820-2521324, ಮೊ.ನಂ: 9480886467ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News