ಮನುಷ್ಯನ ಸ್ವಾರ್ಥ, ನಿರ್ಲಕ್ಷ್ಯತನದಿಂದ ನದಿಗಳು ಮಲಿನ: ಡಾ.ಗಣೇಶ್ ಪ್ರಸಾದ್

ಉಡುಪಿ: ಲಕ್ಷಾಂತರ ಜನರಿಗೆ ನೀರುಣಿಸುವ ನದಿಗಳು ಇಂದು ಮಲಿನವಾಗುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಮನುಷ್ಯನ ಸ್ವಾರ್ಥ ಮತ್ತು ನಿರ್ಲಕ್ಷ್ಯತನದಿಂದ ಜಲಮೂಲಗಳು ದಿನನಿತ್ಯ ಮಲಿನ ಗೊಳುತ್ತಿವೆ ಎಂದು ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಡಾ. ಗಣೇಶ್ ಪ್ರಸಾದ್ ಜಿ.ನಾಯಕ್ ಹೇಳಿದ್ದಾರೆ.
ಉಡುಪಿ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಲಾದ ‘ಗ್ರೀನೋವೇಷನ್ ವೀಕ್ 2.0’ ಸರಣಿ ಕಾರ್ಯಕ್ರಮದ ಭಾಗವಾದ ಸ್ಪೆಕ್ ಇಕೋ ಟಾಕ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ವೈಜ್ಞಾನಿಕವಾಗಿ ಕಸ ವಿಲೇವಾರಿಯ ವ್ಯವಸ್ಥೆ ಇದ್ದರೂ ವಾಹನ ಸವಾರರು ತ್ಯಾಜ್ಯ ಎಸೆಯುವ ಘಟನೆ ಅದೇ ರೀತಿ ಕೆಲ ಅಂಗಡಿಯವರು ಕೋಳಿ ಇನ್ನಿತರ ತ್ಯಾಜ್ಯವನ್ನು ನದಿಗಳಿಗೆ ಎಸೆದು ನೀರಿನ ಗುಣಮಟ್ಟ ವನ್ನು ಕಳಪೆಯನ್ನಾಗಿಸುತ್ತಿ ದ್ದಾರೆ. ಇದರಿಂದ ಇಂಥ ನೀರನ್ನು ಆಶ್ರಯಿಸುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ನದಿಗಳ ಪರಿಸ್ಥಿತಿ ಮತ್ತಷ್ಟು ಬಿಗಡಾ ಯಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಏಕಬಳಕೆಯ ಪ್ಲಾಸ್ಟಿಕ್ಗಳಿಂದ ಕಡಲಾಮೆ ಸೇರಿದಂತೆ ಜಲಚರಗಳಿಗೆ ಅಪಾಯ ಎದುರಾಗಿದೆ. ಹಸಿರು ಪದರ ಕಡಿಮೆಯಾಗುತ್ತಿರುವ ಕಾರಣ ಒಂದೆರಡು ತಿಂಗಳ ಮುಂಚೆಯೇ ಸೆಖೆಗಾಲದ ಅನುಭವವಾ ಗುತ್ತಿದೆ. ಅತಿಯಾದ ಹಣದ ವ್ಯಾಮೋಹಕ್ಕೆ ಪೂರ್ವಜರಿಂದ ಬಂದಂತಹ ಕೃಷಿಭೂಮಿ ಗಗನಚುಂಬಿ ಕಟ್ಟಡ ನಿರ್ಮಿಸಲು ಮಾರಾಟವಾಗುತ್ತಿದೆ. ಅತಿಯಾದ ಗಳಿಕೆಯ ಮನೋಭಾವ ಕಡಿಮೆಯಾಗಿ ಪರಿಸರ ರಕ್ಷಣೆಯ ತುಡಿತ ಬೆಳೆದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರ ಉಳಿಯಬಹುದು. ವೇಸ್ಟ್ ಟು ವೆಲ್ತ್ ಪರಿಕಲ್ಪನೆಗೆ ಇಂಧನ ಒದಗಿಸಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನ ಮಾಡಬೇಕು ಎಂದರು.
ಉಪಪ್ರಾಚಾರ್ಯ ವಿನಾಯಕ ಪೈ ಬಿ. ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಯೋಜಕ ನಾಗರಾಜ ಗಿಳಿಯಾರು, ಉಪನ್ಯಾಸಕರಾದ ದಿನೇಶ್, ಗೌರಿ ಶೆಣೈ, ಪುಷ್ಪಲತಾ, ಚಕ್ರಪಾಣಿ ಅಡಿಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅವನಿ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.