ನಕಲಿ ಮದ್ಯ ಮಾರಾಟ ಪ್ರಕರಣ: ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ
Update: 2025-04-10 20:28 IST

ಕುಂದಾಪುರ, ಎ.10: ನಕಲಿ ಮದ್ಯ ಮಾರಾಟದ ಪ್ರಕರಣ ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ ವಿಧಿಸಿ ಕುಂದಾಪುರ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.
ಜಯಪ್ರಕಾಶ್ ಹಾಗೂ ರತ್ನಾಕರ ಖಾರ್ವಿ ಶಿಕ್ಷೆಗೆ ಗುರಿಯಾದ ಆರೋಪಿಗಳು. ಇವರು 2017ರಲ್ಲಿ ನಕಲಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ಅಬಕಾರಿ ಉಪನಿರೀಕ್ಷಕ ನಿತ್ಯಾನಂದ ಪತ್ತೆ ಹಚ್ಚಿದ್ದರು. ಅಂದಿನ ಕುಂದಾಪುರ ಉಪವಿಭಾಗ ಉಪಅಬಕಾರಿ ನಿರೀಕ್ಷಕ ಅರವಿಂದ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಶ್ರುತಿಶ್ರೀ ಆರೋಪಿಗಳಿಗೆ ತಲಾ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 8 ಸಾವಿರ ರೂ.ದಂಡ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ವಾದ ಮಂಡಿಸಿದ್ದರು.