ಮಹಾವೀರರ ಅಹಿಂಸಮಾರ್ಗದ ಪಾಲನೆ ಬದುಕಿಗೆ ದಾರಿದೀಪ: ಉಡುಪಿ ಡಿಸಿ ವಿದ್ಯಾಕುಮಾರಿ

ಉಡುಪಿ, ಎ.11: ಭಗವಾನ್ ಮಹಾವೀರರ ಮುಖ್ಯ ತತ್ವವಾದ ಅಹಿಂಸಾ ಮಾರ್ಗವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ್ ಮಿಲನ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಅವರು ಮಾತನಾಡುತಿದ್ದರು.
ಭಗವಾನ್ ಮಹಾವೀರರ ಆದರ್ಶಗಳು ಇಂದಿನ ಕಾಲಘಟ್ಟಕ್ಕೆ ಅತೀ ಅವಶ್ಯವಾಗಿದ್ದು. ಮನುಷ್ಯ ತಾನು ಹೊಂದಿರುವ ಬದುಕಿನ ಬಗೆಗೆ ತೃಪ್ತಿ ಹೊಂದಬೇಕು ಎಂಬುದನ್ನು ಜಗತ್ತಿಗೆ ಸಾರಿದ ಮಹಾವೀರರ ಚಿಂತನೆಗಳು ನಮ್ಮೆಲರಿಗೂ ದಾರಿದೀಪ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಪ್ರಸ್ತುತ ಸಮಯದಲ್ಲಿ ಮಹಾವೀರರ ಅಹಿಂಸ ತತ್ವಗಳನ್ನು ಇನ್ನಷ್ಟು ಪ್ರಚುರಗೊಳಿಸುವುದರಿಂದ ನಾಡಿನ ಜನತೆ ಶಾಂತಿಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ವಾಂಸ ಪ್ರೊ. ವೃಷಭರಾಜ್ ಜೈನ್ ಮಹಾವೀರರ ಕುರಿತು ವಿಶೇಷ ಉಪನ್ಯಾಸ ನೀಡಿ, ಸಾಮಾನ್ಯ ಜೀವನವನ್ನು ತೊರೆದು ಆಧ್ಯಾತ್ಮಿಕತೆಯನ್ನು ಆಳವಡಿಸಿಕೊಂಡ ಮಹಾವೀರರು ಅಹಿಂಸೆಯೇ ಪರಮ ಧರ್ಮ ಎಂಬುದನ್ನು ನಂಬಿದವರು. ಅವರ 5 ತತ್ವಗಳಾದ ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ ಹಾಗೂ ಬ್ರಹ್ಮಚರ್ಯವನ್ನು ಅನುಸರಿಸುವುದರಿಂದ ಉತ್ತಮ ಜೀವನ ನಿರ್ಮಾಣ ಸಾಧ್ಯ ಎಂದು ತಮ್ಮ ತತ್ವಗಳಲ್ಲಿ ಸಾರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜೈನ್ ಮಿಲನ್ನ ಅಧ್ಯಕ್ಷ ಡಾ.ನಿತಿನ್ ಪಟೇಲ್, ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್, ಜೈನ್ ಮಿಲನ್ನ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಇಲಾಖೆಯ ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ಡಾ. ನಿತಿನ್ ಕುಮಾರ್ ವಂದಿಸಿದರು.
