ಮಾಲಾಡಿಯಲ್ಲಿ ಮತ್ತೆ ಚಿರತೆ ಓಡಾಟ: ಸೆರೆಗಾಗಿ ಬೋನು ಇಟ್ಟ ಅರಣ್ಯ ಇಲಾಖೆ

ಕುಂದಾಪುರ, ಎ.17: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಿಂಭಾಗದ ಹಾಡಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಈ ಭಾಗದಲ್ಲಿ ಆಗ್ಗಾಗೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು ನಿರಂತರ ಚಿರತೆ ಓಡಾಟ ಇರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಬೋನು ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಈ ಹಿಂದೆಯೂ ಮಾಲಾಡಿ ಅಸುಪಾಸಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ಬಲಿ ಪಡೆದುಕೊಂಡಿದೆ. ಅಲ್ಲದೆ ಹಲವು ಬಾರಿ ಹಾಡುಹಗಲೇ ಕಾಣಿಸಿ ಕೊಂಡು ಜನರಲ್ಲಿ ಭೀತಿ ಸೃಷ್ಟಿಸಿದೆ. ಈ ಭಾಗದಲ್ಲಿ ಮೊದಲಿಗೆ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ 2019 ಅ.6, ಡಿ.12, 2019, ಡಿ.24 ,2019 ರಲ್ಲಿ ಹಾಗೂ 2022ರ ಎಪ್ರಿಲ್ ತಿಂಗಳಿನಲ್ಲಿ, 2022 ಅ.2 ರಂದು ಹಾಗೂ 2023 ಮಾರ್ಚ್ ಮತ್ತು ಜೂನ್ ತಿಂಗಳಿನಲ್ಲಿ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿದ್ದಿತ್ತು.