ವಕ್ಫ್ ಕಾಯ್ದೆ ತಿದ್ದುಪಡಿಯಿಂದ ಮುಸ್ಲಿಮರಿಗೆ ಅನ್ಯಾಯ: ಮುಜೀಬುಲ್ಲಾ ಝಫರಿ

Update: 2024-09-11 14:46 GMT

ಉಡುಪಿ, ಸೆ.11: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆ ಸಮಾಲೋಚನಾ ಸಭೆಯು ಇಂದು ಉಡುಪಿಯ ಮಣಿಪಾಲ್ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ವಕ್ಫ್ ಮಂಡಳಿಯ ಮಾಜಿ ಸಿಇಓ ಮುಜೀಬುಲ್ಲಾ ಝಫರಿ ಮಾತನಾಡಿ, ಸುಮಾರು 1.17ಲಕ್ಷ ಎಕರೆ ನೋಟಿಫೈಡ್ ವಕ್ಫ್ ಆಸ್ತಿ ಇದ್ದು ಭುಹ ಸುಧಾರಣೆ ಕಾಯ್ದೆ, ಊಳುವವನೆ ಹೊಲದೊಡೆಯ ಇತರೇ ಹಲವು ಕಾಯ್ದೆಗಳು ಬಂದ ನಂತರ ಪ್ರಸ್ತುತ 30ಸಾವಿರ ಎಕರೆ ವಕ್ಫ್ ಆಸ್ತಿ ಇದೆ. ಈಗ ಕೇಂದ್ರ ಸರಕಾರ ತರಲು ಹೊರಟಿರುವ ನೂತನ ವಕ್ಫ್ ತಿದ್ದುಪಡಿ ಕಾಯ್ದೆ - 2024 ಜಾರಿಗೆ ಬಂದರೆ ಇನ್ನಷ್ಟು ವಕ್ಫ್ ಆಸ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.

ನೂತನ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಹಲವರು ತಿದ್ದುಪಡಿ ತಂದು ಮುಸ್ಲಿಮ್ ಸಮಾಜಕ್ಕೆ ಅನ್ಯಾಯ ಮಾಡಲು ಕೇಂದ್ರ ಸರಕಾರ ಹೊರಟಿದೆ. ಮುಖ್ಯವಾಗಿ ಸೆಕ್ಷನ್ 40ನ್ನು ಸಂಪೂರ್ಣ ತೆಗೆಯುವುದರ ಮೂಲಕ ಅನ್ಯಾಯ ಎಸುಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಸಾವಿನ ಸಮಯದಲ್ಲಿ ಯಾರಾದರೂ ಮೌಖಿಕವಾಗಿ ಆಸ್ತಿಯನ್ನು ವಕ್ಫ್ ಮಾಡಿದರೆ ಅದನ್ನು ಇಬ್ಬರ ಸಾಕ್ಷಿಯ ಮೂಲಕ ಪರಿಗಣಿಸಲಾಗುತ್ತಿತ್ತು. ಇದನ್ನು ಸುಪ್ರೀಂ ಕೋರ್ಟ್ ಕೂಡ ಅನುಮತಿಸಿತ್ತು. ಆದರೆ ಈಗಿನ ಕಾನೂನಿನ ಪ್ರಕಾರ ಡೀಡ್ ಮಾಡಬಹುದು. ಆದರೆ ರಿಜಿಸ್ಟರ್ ಮಾಡಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಾಸೀನ್ ಕೋಡಿಬೆಂಗ್ರೆ ಸಮಾರೋಪ ಭಾಷಣ ಮಾಡಿದರು. ಸಲಾಹುದ್ದೀನ್ ಅಬ್ದುಲ್ಲಾ ಸ್ವಾಗತಿಸಿದರು. ಮುಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು. ಇಸ್ಮಾಯಿಲ್ ಹುಸೇನ್ ವಂದಿಸಿದರು. ಜಿಲ್ಲೆಯ ವಿವಿಧ ಸಂಘ ಸಂಸ್ಥೆ, ಮಸೀದಿ ಆಡಳಿತ ಸಮಿತಿಯ ಹೊಣೆಗಾರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News