ಯಾದಗಿರಿ | ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿ ; ಜೀವನ ಕಟ್ಟೀಮನಿ

ಸುರಪುರ : ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ, ಆದ್ದರಿಂದ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಮತ್ತು ಪ್ರತಿಯೊಬ್ಬ ವ್ಯಾಪಾರಿ ತಮ್ಮ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲ ಬೇಡ ಬಟ್ಟೆ ಚೀಲ ತನ್ನಿ ಎಂದು ನಾಮಫಲಕ ಅಳವಡಿಸಬೇಕು ಎಂದು ನಗರಸಭೆ ಪೌರಾಯುಕ್ತ ಜೀವನ ಕುಮಾರ್ ಕಟ್ಟೀಮನಿ ಹೇಳಿದರು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ಲಾಸ್ಟಿಕ್ ಸುಟ್ಟಾಗ ಅದರಿಂದ ಹೊರಬರುವ ವಿಷಾಕಾರಿ ಅನಿಲಗಳು ವಾತಾವರಣಕ್ಕೆ ವಾಯುಮಾಲಿನ್ಯ ಉಂಟುಮಾಡುತ್ತವೆ. ಪ್ಲಾಸ್ಟಿಕ್ ಮಣ್ಣಲ್ಲಿ ಸೇರಿಕೊಂಡು ನೀರು ಇಂಗಲು ಅಡ್ಡಿ ಮಾಡಿ, ಕೆರೆ ಕಟ್ಟೆ ಬಾವಿಗಳಿಗೆ ಬರುವ ನೀರನ್ನು ತಡೆಯುತ್ತದೆ. ಪ್ಲಾಸ್ಟಿಕ್ ಇರುವ ಮಣ್ಣಿನಲ್ಲಿ ಎರೆಹುಳುಗಳು ಬೆಳೆಯದೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಪ್ಲಾಸ್ಟಿಕ್ ಸಸ್ಯಗಳ ಬೇರುಗಳು ಮಣ್ಣಿನಲ್ಲಿ ಫಸರಿಸಲು ಅಡ್ಡಿ ಮಾಡುತ್ತದೆ. ಪ್ಲಾಸ್ಟಿಕ್ ಹುಲ್ಲು ಮೇವಿನ ಜೊತೆ ಬೆರೆತು ದನಕರುಗಳು ಮತ್ತು ಇನ್ನಿತರೆ ಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಚರಂಡಿಗಳಲ್ಲಿ ಸೇರಿ ನೀರಿನ ಹರಿಯುವಿಕೆ ಅಡ್ಡಿಯುಂಟು ಮಾಡುವುದಲ್ಲದೆ ಹಲವಾರು ಕಾಯಿಲೆಗಳು ಹರಡುತ್ತವೆ.
ಇನ್ನು ಮುಂದೆ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ತಟ್ಟೆ, ಲೋಟ, ಚಮಚ ಸೇರಿದಂತೆ ಪ್ಲಾಸ್ಟಿಕ್ ಬಳಕೆ ನಿಷೇಧವಿರುವ ಕಾರಣ ಅಂಗಡಿಯಲ್ಲಿ ಉಪಯೋಗಿಸುವುದು ಕಂಡು ಬಂದಲ್ಲಿ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಆದಕಾರಣ ಎಲ್ಲರೂ ಸಹಕಾರ ನೀಡಿ ಪ್ಲಾಸ್ಟಿಕ್ ಬಳಕೆಗೆ ಮುಕ್ತಿಗೆ ಇತಿಶ್ರೀ ಹಾಡಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ನಗರಸಭೆ ಸದಸ್ಯರಾದ ನಾಸೀರ್ ಹುಸೇನ್ ಕುಂಡಾಲೆ, ಮಾನಪ್ಪ ಚಳ್ಳಿಗಿಡ, ಶಕೀಲ್ ಅಹಮದ್ ಖುರೇಷಿ, ಎಇಇ ಶಾಂತಪ್ಪ ಹೊಸೂರು, ಇಂಜಿನೀಯರ್ ಗಳಾದ ಮಹೇಶ ಮಾಳಗಿ, ವಿಶ್ವನಾಥ್ ಯಾದವ, ಮಲ್ಲಿಕಾರ್ಜುನ ವಾಲಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಿ, ನೈರ್ಮಲ್ಯ ಅಧಿಕಾರಿಗಳಾದ ಗುರುಸ್ವಾಮಿ ಹೀರೆಮಠ, ಹಣಮಂತ ಯಾದವ, ಮೈನುದ್ದೀನ್, ದುರ್ಗಪ್ಪ ನಾಯಕ, ಸಂಗಮ್ಮ ಸಜ್ಜನ್,ರತ್ನಮ್ಮ,ಸುರೇಖಾ, ಶರಣಪ್ಪ ತೇಲ್ಕರ್, ದುರ್ಗಪ್ಪ ಸೇರಿದಂತೆ ಅನೇಕ ಸಿಬ್ಬಂದಿಗಳಿದ್ದರು. ನಗರದಲ್ಲಿ ಅಭಿಯಾನ ನಡೆಸಿ ಜನ ಜಾಗೃತಿ ಮೂಡಿಸಿದರು.