ಯಾದಗಿರಿ | ಗ್ರಂಥಾಲಯಗಳಿಗೆ ಒಂಬತ್ತು ಕಂಪ್ಯೂಟರ್ ವಿತರಣೆ

ಯಾದಗಿರಿ : ಗ್ರಂಥಾಲಯಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ಮಂಗಳವಾರ ಶಾಸಕರ ಕಚೇರಿಯಲ್ಲಿ ತಮ್ಮ ಮತಕ್ಷೇತ್ರದ ಏಳು ಗ್ರಾಮಪಂಚಾಯತಗಳ ಗ್ರಂಥಾಲಯಗಳಿಗೆ ಒಟ್ಟು 9 ಕಂಪ್ಯೂಟರ್ ಹಾಗೂ ಇನ್ನಿತರೆ ಉಪಕರಣಗಳನ್ನು ವಿತರಿಸಿ ಮಾತನಾಡಿದ ಅವರು, ಸುಮಾರು 3ಲಕ್ಷ ರೂ. ವೆಚ್ಚದ ವಿವಿಧ ಯಂತ್ರೋಪಕರಣಗಳನ್ನು ನೀಡಲಾಗಿದ್ದು, ಅವಶ್ಯಕ ವಸ್ತುಗಳು ಬೇಕಾದಲ್ಲಿ ಒದಗಿಸಲಾಗುವುದು ಎಂದರು.
ಇದೇ ವೇಳೆ ಮತಕ್ಷೇತ್ರದ ಚಟ್ನಳ್ಳಿ ಹಾಗೂ ಗುರಸಗುಂಡಗಿ ಗ್ರಾಮದ ಅರ್ಹ ವಿಕಲಚೇತನ ಅಭ್ಯರ್ಥಿಗಳಿಗೆ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ವಿತರಿಸಿದರು.
ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಅತೀವೇಗದಿಂದ ವಾಹನ ಚಲಾಯಿಸಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ನಗರದ ಜನತೆ ಬಿಸಿಲಿನ ತಾಪಮಾನದಿಂದ ಅಲ್ಪ ವಿರಾಮ ಪಡೆಯಲು ನೇತಾಜಿ ಸರ್ಕಲ್ ಸೇರಿದಂತೆ ಇನ್ನಿತರ ವೃತ್ತಗಳಲ್ಲಿ ಗ್ರಿನ್ ನೆಟ್ ಅಳವಡಿಸುವ ಕುರಿತಂತೆ ನಗರಸಭೆ ಅಧಿಕಾರಿ ರಜನಿಕಾಂತ ಹಾಗೂ ಸಿಪಿಐ ಸುನೀಲ್ ಮೂಲಿಮನಿ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಶರಬಯ್ಯಾ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ ಶಹಾಪುರ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಲ್ಲಿಕಾರ್ಜುನ ಈಟೆ, ಲಚಮ ರೆಡ್ಡಿ, ಶರಣಬಸವ ಕುರಕುಂದಿ, ಶರಣಪ್ಪ ಜಂಬೆ,ಅಮಾತೆಪ್ಪ ಪೂಜಾರಿ, ಬಸವರಾಜಪ್ಪ ಕೊಂಕಲ್, ಸುರೇಶ ಜಾಕ, ಪ್ರಭಾಕರ್ ಜೀ, ಕ್ರಿಷ್ಟೋಪರ್ ಬೆಳ್ಳಿ, ಶಿವಕುಮಾರ ಕರದಳ್ಳಿ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು