ಯಾದಗಿರಿ | ವಕ್ಫ್ ತಿದ್ದಪಡಿ ಕಾನೂನು ಹಿಂಪಡೆಯಲು ಆಗ್ರಹಿಸಿ ಎ.25 ರಂದು ಪ್ರತಿಭಟನೆ

ಸುರಪುರ : ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಕಾನೂನು ಹಿಂಪಡೆಯಲು ಆಗ್ರಹಿಸಿ ಎ.25 ರಂದು ನಗರದಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಅಹ್ಮದ್ ಪಠಾಣ್ ತಿಳಿಸಿದರು.
ಮುಸ್ಲಿಂ ಸಮುದಾಯದ ಮುಖಂಡರು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಕರಾಳ ಕಾನೂನು ವಕ್ಫ್ ತಿದ್ದುಪಡಿ ಕಾನೂನು ಜಾರಿಗೊಳಿಸಲು ಮುಂದಾಗಿದ್ದು, ಇದನ್ನು ಇಡೀ ಮುಸ್ಲಿಂ ಸಮುದಾಯ ಖಂಡಿಸುತ್ತದೆ . ಅಲ್ಲದೆ ಇಂತಹ ಕರಾಳ ಕಾನೂನನ್ನು ಜಾರಿಗೊಳಿಸಬಾರದು ಎಂದು ಪ್ರತಿಭಟನೆ ಮೂಲಕ ಆಗ್ರಹಿಸುತ್ತೇವೆ ಎಂದರು.
ಶುಕ್ರವಾರ ಮಧ್ಯಾಹ್ನ ನಮಾಜ್ ನಂತರ ನಗರದ ತಿಮ್ಮಾಪುರ ಜಾಮಿಯಾ ಮಸೀದ್ ನಿಂದ ರಂಗಪೇಟ ಮೂಲಕ ಸುರಪುರ ಟಿಪ್ಪುಸುಲ್ತಾನ ಚೌಕ್ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಮಾಲಾರ್ಪಣೆ ಮಾಡಿ ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಸಿ ಕೇಂದ್ರ ಸರಕಾರಕ್ಕೆ ಆಗ್ರಹಿಸಲಾಗುವುದು, ನಂತರ ರಾಷ್ಟಪತಿಗಳಿಗೆ ಬರೆದ ಮನವಿ ತಹಶೀಲ್ದಾರ್ ಮೂಲಕ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮುಖಂಡರಾದ ಅಬ್ದುಲ್ ಗಫೂರ ನಗನೂರಿ, ಖಾಜಾ ಖಲೀಲ್ ಅಹ್ಮದ್ ಅರಕೇರಿ, ಖಾಲಿದ್ ಅಹ್ಮದ್ ತಾಳಿಕೋಟೆ, ಅಬ್ದುಲ್ ಮಜೀದ್, ಶೇಖ್ ಮಹಿಬೂಬ್ ಒಂಟಿ, ಶೇಖ್ ಲಿಯಾಖತ್ ಹುಸೇನ್ ಉಸ್ತಾದ್, ಮಹಮ್ಮದ್ ಇಸ್ತಿಯಾಕ್ ಹುಸೇನ ಸವಾರ, ಅಬ್ದುಲ್ ಅಲೀಂ ಗೋಗಿ, ಶಕೀಲ್ ಅಹ್ಮದ್ ಖುರೇಶಿ, ಅಬೀದ್ ಹುಸೇನ್ ಪಗಡಿ, ಮಹಮ್ಮದ್ ರಿಯಾಜ್ ಇಲಕಲ್, ಮಹಮ್ಮದ್ ಖಮರುದ್ದಿನ್, ನಾಸಿರ ಹುಸೇನ ಕುಂಡಾಲೆ, ಸೈಯ್ಯದ್ ಇದ್ರಿಸ್ ದಖನಿ, ಸೈಯ್ಯದ್ ಬಕ್ತಿಯಾರ್ ಅಹ್ಮದ್, ಮಹಮ್ಮದ್ ಜಾಫರ್ ಉಪಸ್ಥಿತರಿದ್ದರು.