ತರ್ಲೆ ತಿಮ್ಮನೂರಿಗೊಂದು ಹುಚ್ಚಾಸ್ಪತ್ರೆ
ಉಚ್ಚೆ ಹೊಯ್ಯುವುದಕ್ಕೆ ಬಡಿದಾಡಿದ್ರು, ಜಾಗವಿಲ್ಲದೆ ಬಯಲಲ್ಲಿ ಆಲಯ ಮಾಡಿಕೊಂಡು ಹಗಲಲ್ಲೂ ಜನ ಜಗಳವಾಡಿದ್ರು ಈರ ಊರು ಉದ್ಧಾರವಾಗಿದೆ ಎಂದು ಬೊಬ್ಬೆ ಹೊಡೆದಿದ್ದ ಉಚ್ಚೆ ಹೊಯ್ಯುವುದಕ್ಕೆ ಊರಾಚೆ ಹೋಗಬೇಕು ಎಲ್ಲಿ ನೋಡಿದರಲ್ಲಿ ಜನ ಜನ ಜನ ಇನ್ನೂ ಹೆಂಗಸ್ರ ಪಾಡಂತೂ ಕಷ್ಟದ್ದು ಎಂದು ಹಪಹಪಿಸಿದ್ರು.
ಊರಲ್ಲಿ ತಲೆ ಕೆಟ್ಟವರು ಬಹಳಿದ್ರು ‘‘ಊರಿಗೊಂದು ಹುಚ್ಚಾಸ್ಪತ್ರೆ ಬೇಕು’’ ಎಂದು ತಿಮ್ಮ ಜನ್ರನ್ನ ಒಂದುಗೂಡಿಸಿ ವಿಷಯವೆತ್ತಿದ್ದ, ಹುಚ್ಚಾಸ್ಪತ್ರೆಗಾಗಿ ಎಲ್ಲರು ಒಕ್ಕೊರಲಿನಿಂದ ಈರನ ಮನೆ ಮುಂದೆ ಹರತಾಳ ಮಾಡೋಣ ಎಂದು ಪಟ್ಟು ಹಿಡಿದ್ರು ‘‘ನಮ್ಮೂರಿಗೆ ಬೇಕು ಹುಚ್ಚಾಸ್ಪತ್ರೆ’’ ಎಂದು ನಾಮಫಲಕ ಬರೆದು ಈರನ ಮನೆ ಮುಂದೆ ಕುಳಿತ್ರು. ‘‘ಜಾಗ ನಿಮ್ಮದು ಅನುದಾನ ನಮ್ಮದು’’ ಎಂದು ಈರ ಊರು ಜನರಿಗೆ ಮಾತು ಕೊಟ್ಟಿದ್ದ. ಬಹುದೊಡ್ಡ ಹುಚ್ಚಾಸ್ಪತ್ರೆ ನಿರ್ಮಿಸುವ ಕನಸು ನನ್ನದು ಅನುದಾನ ತರುವ ಕೆಲಸ ಈಗ್ಲೆ ಮಾಡ್ತಿನಿ ಎಂದು ಶಪಥ ಮಾಡಿ ಹರತಾಳ ನಿಲ್ಲಿಸಿದ್ದ.
ಹುಚ್ಚಾಸ್ಪತ್ರೆಗೆ ಅನುದಾನ ಸಿಗ್ಲಿಲ್ಲಂದ್ರ ಊರಿಗೆ ಕಾಲಿಡಲ್ಲವೆಂದು ದೊಡ್ಡೂರಿಗೆ ಹೋಗಿದ್ದ, ತಿಮ್ಮ ಹುಚ್ಚಾಸ್ಪತ್ರೆಗಾಗಿ ಊರು ಜನ್ರ ಸಹಿ ಸಂಗ್ರಹಿಸಿದ ‘‘ಹುಚ್ಚು ಮನೆ’’ ಪ್ರತಿ ಮನೆಯಿಂದ ಇಂತಿಷ್ಟು ಹಣ ಎತ್ತಿದ ಟವಲ್ ತುಂಬ ಹಣ ಎತ್ಗೊಂಡು ದೊಡ್ಡೂರಿಗೆ ಹೋಗಿ ಈರನ ಮುಂದೆ ಬಿಚ್ಚಿ ತೋರಿಸಿದ ಹಿರಿ ಹಿರಿ ಹಿಗ್ಗಿದ ಈರ ‘ಹುಚ್ಚು ಇಲಾಖೆ’’ ಗೆ ಪ್ರಸ್ತಾವನೆ ಸಲ್ಲಿಸಲು ತಿಮ್ಮನಿಗೆ ತಿಳಿಸಿದ. ಹುಚ್ರು ಮಿನಿಷ್ಟು ಈಗ ಹುಚ್ಚಾಸ್ಪತ್ರೆಯ ಕಡತ ಮಂಡಿಸಲು ಇಲಾಖೆಗೆ ತಿಳಿಸಿದ ಹುಚ್ಚಾಸ್ಪತ್ರೆಯ ಜಾಗ ಊರಾಚೆ ಇರಬೇಕು. ಕಾನ ಕೊಟ್ಟವರ ಹೆಸರು ಬ್ಯಾಡ ಮಾನ ಹೋದ್ರು ಮಾಮೂಲು ಕೊಡುವುದು ಕಡ್ಡಾಯ. ಬಲಗೈಲಿ ಕೊಟ್ಟ ಲಂಚ ಎಡಗೈಗೆ ತಿಳಿಬಾರದು ಎಂದು ಹುಚ್ರ ಇಲಾಖೆ ಷರತ್ತು ವಿಧಿಸಿತ್ತು.
‘‘ಹುಚ್ರ ಮನೆ’’ ಹೀಗಿರಬೇಕು ಹಾಗಿರಬೇಕು ಎಂದು ಕನಸುಕಂಡ ಊರು ಜನ ಲಂಚ ಕೊಟ್ಟಾದ್ರು ತಮ್ಮೂರಿಗೊಂದು ‘‘ಹುಚ್ರು ಮನೆ’’ ಬೇಕೆಂದು ಊರು ದೇವರಿಗೆ ಹರಕೆ ಹೊತ್ತಿದ್ರು. ದೊಡ್ಡೂರಿನ ‘‘ಹುಚ್ರು ಇಲಾಖೆ’’ ಯಂದ್ರೆ ಉಚ್ಚಿಯಲ್ಲಿ ಮೀನು ಹಿಡಿಯುವವರು ಸಗಣಿಯಲ್ಲಿಯೂ ನೋಟು ಬಿಡದವರು ತಿಮ್ಮನೂರಿಗೆ ಹುಚ್ಚಾಸ್ಪತ್ರೆ ಬೇಕೋ ಬೇಡ್ವೊ ಎಂದು ಗೊತ್ತು ಮಾಡಲು ಅಲ್ಲಿರುವ ‘‘ಸಹಾಯಕ ಲಂಚಾಧಿಕಾರಿ’’ ಒಂದು ಟಿಪ್ಪಣಿ ಸಿದ್ಧಪಡಿಸಿದ್ದ, ಇವನು ಬರೆದದ್ದೆ ಕಾನೂನು ‘‘ಹುಟ್ಟಿದವನನ್ನು’’ ‘‘ಹುಟ್ಟಿಲ್ಲ’’ ಎಂದು ಬರೆದು ಮುಂದಿನವರು ‘‘ಹೌದು’’ ಎಂದು ರುಜು ಹಾಕ್ತಿದ್ರು. ‘‘ಬದುಕಿದ್ದವರನ್ನು ‘‘ಸತ್ತ’’ ಎಂದು ಒಂದು ಸಾಲು ಬರೆದರೆ ಸಾಕು ಮೇಲಿನವರು ‘‘ಒಪ್ಪಿದೆ’’ ಎಂದು ರುಜು ಹಾಕ್ತಿದ್ರು ಹುಚ್ರು ಇಲಾಖೆಯ ಲಂಚಾವತಾರವನ್ನೊಮ್ಮೆ ನೋಡಿದ್ರೆ ಕಣ್ಣಿಂದ ರಗತ ಬರ್ತಿತ್ತು. ಮಾತು ನಿಂತು ಹೋಗ್ತಿತ್ತು.
ಸಹಾಯಕ ಲಂಚಾಧಿಕಾರಿಯ ಮಾತು ಬರಹ ತುಂಬಾ ಮಹತ್ವದಿತ್ತು. ಹುಚ್ಚಾಸ್ಪತ್ರೆ ನಿರ್ಮಿಸಲು ಊರಾಚೆ ಜಾಗವಿರಬೇಕು. ಹುಚ್ಚರ ಸಂಖ್ಯೆ ಹೆಚ್ಚಿರಬೇಕು. ಅತಿ ಜಾಣರಿದ್ರೆ ಅತಿದಡ್ಡರಿಗೆ ಹುಚ್ಚಾಸ್ಪತ್ರೆ ಮಂಜೂರಾಗುವುದು ತುಂಬ ಕಷ್ಟ ಎಂದು ಪ್ರಥಮ ಲಂಚಾಧಿಕಾರಿ ತಿಮ್ಮನಿಗೆ ತಿಳಿಸಿ ಹೇಳಿದ್ದ.
ಹುಚ್ಚಾಸ್ಪತ್ರೆಯ ಕಡತವನ್ನು ನೋಡಿ ಮೂರು ಪುಟದ ವರದಿ ಮಾಡಿ ಶಾಖಾ ಲಂಚಾಧಿಕಾರಿಗೆ ಕಳಿಸಿದ್ದ. ಅವನ ವರದಿ ನೋಡಿ ಮೂರು ದಿನ ಗಡುವು ಕೊಟ್ಟಿದ್ದ ಊರಲ್ಲಿರುವ ಹುಚ್ರ ಸಂಖ್ಯೆ ಎಷ್ಟು ಅವರು ನಿಜವಾಗ್ಲು ಹುಚ್ರೋ ಸುಮ್ಸುಮ್ನೆ ಹುಚ್ರೋ ಎಂದು ತಪಾಸಣೆ ಮಾಡಲು ಒಂದು ಸತ್ಯಶೋಧನಾ ಸಮಿತಿ ಊರಿಗೆ ಬರುತ್ತೆ ಎಚ್ಚರವಿರ್ರಿ ಎಂದು ಸೂಚನೆ ಬರೆದು ತಿಮ್ಮನ ಕೈಗೆ ಕೊಟ್ಟಿದ್ರು.
ತಿಮ್ಮ ಮೂರು ದಿನ ಕಾಯಲು ಟೈಮಿಲ್ಲ ಸತ್ಯಶೋಧನಾ ಸಮಿತಿಗೊಂದು ಸುಳ್ಳು ಮಾಹಿತಿ ಕೊಟ್ಟು ಊರಲ್ಲಿ ಅರ್ಧದಷ್ಟು ಜನ್ರು ಜಾಣರಿದ್ದಾರೆ ಎಂದು ಬರೆದು ‘‘ಹುಚ್ರು ಇಲಾಖೆ’’ಗೆ ಮಾಹಿತಿ ಕೊಡ್ರಿ ಎಂದು ಕೈ ಬೆಚ್ಚಗೆ ಮಾಡಿದ್ದ. ಅದರಂತೆ ಸತ್ಯಶೋಧನಾ ಸಮಿತಿ ಊರಿಗೆ ಬಂದು ಮೂರು ದಿನ ಬಿಡಾರ ಹೂಡಿ ಜನರೊಂದಿಗೆ ಬೆರೆತು ಮಾಹಿತಿ ಪಡೆದ್ರು ಚುನಾವಣೆಲಿ ‘‘ನಾಯಕ’’ ಯಾರೆಂದು ಕೇಳಿದ್ರು ಅದಕ್ಕೆ ಊರವರು ‘‘ಕಾಸು ಕೊಡ್ರಿ ಹೇಳ್ತಿವಿ’’ ಅಂದ್ರು ಅಲ್ಲಿಗೆ ‘‘ಸತ್ಯ ಶೋಧನಾ ಸಮಿತಿ’’ ಒಂದು ಸುಳ್ಳು ವರದಿ ಸಿದ್ಧಮಾಡಿ ‘‘ಹುಚ್ರು ಇಲಾಖೆ’’ಗೆ ಕಳಿಸಿತು. ಇಲ್ಲಿ ಹುಚ್ಚಾಸ್ಪತ್ರೆ ಬೇಕಿಲ್ಲ. ಅಲ್ಲೆಲ್ಲ ತುಂಬಾ ಜಾಣರಿದ್ದಾರೆ. ನಮ್ಮನ್ನೆಲ್ಲ ‘‘ಹುಚ್ರು’’ ಎಂದು ಜರೆದು ಬಿರುದು ಕೊಟ್ರು ಎಂದು ರಿಪೋರ್ಟ್ ಮಾಡಿತ್ತು.
ಸತ್ಯ ಶೋಧನಾ ಸಮಿತಿ ಮಂಡಿಸಿದ ವರದಿ ಸುಳ್ಳು ಎಂದು ರುಜು ಮಾಡಲು ಶಾಖಾ ಲಂಚಾಧಿಕಾರಿಯು ಮಾಮೂಲು ಕೇಳಿದ ಅನುದಾನ ಬಿಡುಗಡೆಯಾದ್ರೆ ಸಾಕು. ತನಗೊಂದು ದಂಧೆಯಾಗುತ್ತದೆ ಎಂದು ತಿಮ್ಮ ಕೈ ಬೆಚ್ಚಗೆ ಮಾಡಿ ಶಾಖಾ ಲಂಚಾಧಿಕಾರಿಗೆ ಕಣ್ಸನ್ನೆ ಮಾಡಿದ.
‘‘ಹುಚ್ರು ಮನೆ’’ಗೆ ಅನುದಾನ ಪಡೆಯಲು ತಿಮ್ಮ ಹಠ ತೊಟ್ಟಿದ್ದ. ಊರಲ್ಲಿ ಹುಚ್ಚಾಸ್ಪತ್ರೆಯಾಗಲೇಬೇಕು. ಸುತ್ತ ಊರಿನ ಜನರಿಗೆ ತಲೆ ಕೆಡಿಸಿಯಾದ್ರೂ ಅನುದಾನ ತರಬೇಕು ಎಂದು ಮಹಾಲಂಚಾಧಿಕಾರಿಯ ಮುಂದೆ ಗೋಳಿಟ್ಟಿದ್ದ.
ಊರು ಜನ್ರು ಹುಚ್ಚಾಸ್ಪತ್ರೆಗೆ ತವಕ ಪಡುತಿದ್ರು, ತಿಮ್ಮ ಶಾಖಾ ಲಂಚಾಧಿಕಾರಿಗೆ ಮುಡುಪು ಮುಟ್ಟಿಸಿ ಅಧೀನ ಲಂಚಾಧಿಕಾರಿಯ ಮುಂದೆ ಮಂಡೆಯೂರಿ ಕುಳಿತ. ನಮ್ಮೂರಿಗೊಂದು ಹುಚ್ಚಾಸ್ಪತ್ರೆಯ ಆವಶ್ಯಕತೆ ಇದೆ. ಅನುದಾನ ಒದಗಿಸಿ ಹುಚ್ಚರ ಬಾಳು ರೂಪಿಸಿ ಎಂದು ಮುಡುಪು ಹಿಡಿದು ಕಂಬನಿ ಮಿಡಿದ. ಕಂಬನಿಗೆ ಕರಗಿದ ಅಧೀನ ಲಂಚಾಧಿಕಾರಿ ಉರಲ್ಲೊಂದು ಹುಚ್ಚಾಸ್ಪತ್ರೆಗೆ ನೀನು ತೋರಿದ ಕಳಕಳಿಗೆ ನನ್ನ ಮನ ಕರಗಿದೆ ಎಂದು ಟೇಬಲ್ ಕೆಳಗೆ ತೂರಿದ ಕೈಗೆ ತಿಮ್ಮ ಮೆಲ್ಲನೆ ಸೇರಿಸಿದ ಆಯ್ತು ನಡಿ ಎಂದು ಕಣ್ಣೊರೆಸಿ ಕಳಿಸಿದ.
ಅಧೀನ ಲಂಚಾಧಿಕಾರಿ ಒಮ್ಮೆ ರುಜು ಮಾಡಿ ‘‘ಮಂಜೂರು’’ ಎಂದು ಬರೆದರೆ ಉಪಲಂಚಾಧಿಕಾರಿ ತಲೆಯಲ್ಲಾಡಿಸಿ ‘‘ಹುಂ’’ ಎಂದು ಒಂದು ಷರಾ ಸೇರಿಸಿ ಮಹಾ ಲಂಚಾಧಿಕಾರಿಯ ಗಮನಕ್ಕೆ ತರಬೇಕಿತ್ತು.
ಮಹಾಲಂಚಾಧಿಕಾರಿ ಹುಚ್ಚಾಸ್ಪತ್ರೆ ಕಡತ ನೋಡಿ ಗಹಗಹಿಸಿ ನಕ್ಕು ತಲೆಕೆದರಿ ಅಂಗಿ ಹರಿದುಕೊಂಡು ಉಳ್ಳಾಡಿದ ಒಮ್ಮೆ ಗಳಗಳನೆ ಅತ್ತ ಬಾಯಿಗೆ ಬಂದಂತೆ ಬೈದ ಕಲ್ಲು ತೂರಲು ಗಿರ್ರನೆ ತಿರುಗಿದ ಅನುದಾನ ಕೇಳಿದ ತಿಮ್ಮನಿಗೆ ಬಾಯಿಗೆ ಬಂದಂತೆ ಬಯ್ದ. ಊರಲ್ಲೆಲ್ಲ ಜಾಣರಿದ್ದಾರೆ. ಅಂತಹ ಊರಿಗೆ ‘‘ಹುಚ್ರು ಮನೆ’’ ಬೇಕಾ ಎಂದು ನಕ್ಕ. ಅಲ್ಲಿಗೆ ಹುಚ್ಚು ಮಿನಿಷ್ಟ್ರು ಈರ ಬಂದು ಇಂತಹುಕ್ಕೆಲ್ಲ ಅನುದಾನ ಕೊಡಾಕ ಹಣಕಾಸು ಇಲಾಖೆ ಒಪ್ಪಲ್ಲ. ಊರಲ್ಲಿ ‘‘ಹುಚ್ರ ಸಂಖ್ಯೆ’’ ಇನ್ನು ಹೆಚ್ಚಾಗಬೇಕು. ಅಲ್ಲಿವರೆಗೆ ಹುಚ್ಚಾಸ್ಪತ್ರೆ ಅನುದಾನ ಪೆಂಡಿಂಗ್ ಎಂದು ಈರ ಜೋರಾಗಿ ನಕ್ಕ ಅವನನ್ನು ನೋಡಿ ಮಹಾಲಂಚಾಧಿಕಾರಿಯೂ ನಕ್ಕ ಅಲ್ಲಿಗೆ ಉಪಲಂಚಾಧಿಕಾರಿಯೂ ಬಂದ ಅವನು ನಕ್ಕ ನಗುವ ದನಿಗೆ ಮಾರು ಹೋಗಿ ತಿಮ್ಮ ಸುಮ್ನಿರ್ಲಿಲ್ಲ ಅವನು ನಕ್ಕ ನಕ್ಕೊತ ಊರಿಗೆ ಬಂದ ಕೂದಲು ಕೆದರಿಕೊಂಡು ಅಂಗಿ ಚಿಂದಿ ಮಾಡಿಕೊಂಡಿದ್ದ. ತಿಮ್ಮನನ್ನು ಊರು ಜನ ನೋಡಿದ್ರು. ಅವರು ಕೂಡ ನಗಲು ಶುರು ಮಾಡಿದ್ರು.
ಊರಲ್ಲಿ ಹುಚ್ರ ಸಂಖ್ಯೆ ಹೆಚ್ಚಾಗಬೇಕು. ಅಲ್ಲಿಯವರೆಗೆ ನಮ್ಮೂರಿಗೆ ಹುಚ್ಚಾಸ್ಪತ್ರೆ ಕನಸಿನ ಮಾತು ಎಂದು ಮೀಟಿಂಗ್ ಮಾಡಿದ.ಸಿಟ್ಟಿಗೆದ್ದ ಜನ ತಿಮ್ಮನಿಗೆ ಕಲ್ಲು ತೂರಿದ್ರು ತಿಮ್ಮನೂ ಕಲ್ಲು ಒಗೆದ. ಕಲ್ಲಿಗೆ ಕಲ್ಲು, ಕೈಗೆ ಕೈ, ಏಟಿಗೆ ಏಟು ಊರಲ್ಲೆಲ್ಲ ಹುಚ್ಚರಾಟ ದೊಡ್ಡೂರಿಗೆ ಮುಟ್ಟಿತು. ಮಹಾಲಂಚಾಧಿಕಾರಿಯ ಉಸ್ತುವಾರಿಯಲ್ಲಿ ಹುಚ್ಚು ಮಿನಿಷ್ಟ್ರು ಊರಿಗೆ ಬಂದು ಹುಚ್ಚಾಸ್ಪತ್ರೆಗೆ ಅನುದಾನ ಘೋಷಣೆ ಮಾಡಿದ ಊರು ಜನ ಕಲ್ಲೆಸೆಯುವುದು ನಿಲ್ಲಿಸಿದರು. ಕೇಕ್ ಹಂಚಿದ್ರು ಪಟಾಕಿ ಸಿಡಿಸಿದ್ರು. ಸಿಹಿ ತಿಂದು ಡ್ರಗ್ ಎಂದು ಡೇಗಿದ್ರು ಅನುದಾನ ನೀಡಿದ ಈರನಿಗೆ ಕೊಂಡಾಡಿದ್ರು.
ಈಗ ಈರ ಹುಚ್ಚಾಸ್ಪತ್ರೆಯ ಹೆಸರಲ್ಲಿ ಮತ್ತೆ ಚುನಾವಣೆಗೆ ಸಜ್ಜಾಗಿದ್ದಾನೆ. ಇನ್ನೊಂದು ಸಲ ಗೆಲ್ಲಿಸಿದರೆ ಮತ್ತೊಂದು ಹುಚ್ಚಾಸ್ಪತ್ರೆ ನಿರ್ಮಿಸುವ ಭರವಸೆ ನೀಡಿದ್ದಾನೆ.
ತಿಮ್ಮ, ಈರನ ಅನುದಾನಕ್ಕಾಗಿ ಹೊಸ ಜಾಗದ ಹುಡುಕಾಟದಲ್ಲಿದ್ದಾನೆ.