ಕಾಂಗ್ರೆಸ್ ನಾಯಕ, ಉದ್ಯಮಿ ಪ್ರಕಾಶ್ ಕೊಡವೂರು ನಿಧನ
ಉಡುಪಿ, ಎ.21: ಜಿಲ್ಲೆಯ ಕಾಂಗ್ರೆಸ್ ಮುಖಂಡ, ಪ್ರಮುಖ ಉದ್ಯಮಿ ಪ್ರಕಾಶ್ ಕೊಡವೂರು ಅವರು ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ಪ್ರಾಯವಾಗಿತ್ತು.
ಕಳೆದ ಕೆಲವು ದಿನಗಳಿಂದ ಹೃದಯ ತೊಂದರೆಗಾಗಿ ಚಿಕಿತ್ಸೆ ಪಡೆಯುತಿದ್ದ ಪ್ರಕಾಶ್ ಕೊಡವೂರು ಅವರು ಚೇತರಿಸಿಕೊಳ್ಳುವ ಸೂಚನೆ ನೀಡುತಿದ್ದಂತೆ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕೊಡವೂರು, ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಗೌರವ ಉಪಾಧ್ಯಕ್ಷರಾಗಿದ್ದ ಅವರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತಿದ್ದಾರೆ. ಅಲ್ಲದೇ ಬಿಲ್ಲವ ಸಂಘದ ಪದಾಧಿಕಾರಿಯಾಗಿಯೂ ಅವರು ಕಾರ್ಯನಿರ್ವಹಿ ಸುತಿದ್ದರು.
ಉಡುಪಿಯ ಪ್ರಮುಖ ಉದ್ಯಮಿಯೂ ಆಗಿದ್ದ ಪ್ರಕಾಶ್ ಕೊಡವೂರು ಅವರ ಅಂತಿಮ ದರ್ಶನಕ್ಕೆ ಭಾರೀ ಸಂಖ್ಯೆಯ ಜನರು ಆಗಮಿಸುತಿದ್ದಾರೆ. ಉಡುಪಿ ಚೇಂಬರ್ ಆಫ್ ಕಾಮರ್ಸ್ನ ನಿರ್ದೇಶಕ ಬಿ.ಜಿ.ಲಕ್ಷ್ಮಿಕಾಂತ ಬೆಸ್ಕೂರು ಹಾಗೂ ಜೇಸಿಐ ವಲಯ 15ರ ವಲಯಾಧ್ಯಕ್ಷ ಸಂದೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.