ನ್ಯಾಯವಾದಿ ಕೆ.ಚಕ್ರೇಶ್ವರ
ಮಂಗಳೂರು, ಎ.26: ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ಮಂಗಳೂರಿನ ನ್ಯಾಯವಾದಿ ಕೆ.ಚಕ್ರೇಶ್ವರ (69) ನ್ಯಾಯಾಲಯದ ಆವರಣದಲ್ಲಿ ಹೃದಯಾಘಾತದಿಂದ ಕುಸಿದು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಎಂದಿನಂತೆ ನ್ಯಾಯಾಲಯಕ್ಕೆ ಆಗಮಿಸಿದ್ದ ನ್ಯಾಯವಾದಿ ಚಕ್ರೇಶ್ವರ, ಸೋಮವಾರ ಮಧ್ಯಾಹ್ನ 12 ಗಂಟೆಗೆ ನ್ಯಾಯಾಲಯದ ಮೊದಲ ಕಲಾಪದಲ್ಲಿ ಭಾಗವಹಿಸಿ ಚಹಾ ಸೇವಿಸುತ್ತಿದ್ದಾಗ ಇದ್ದಕ್ಕಿದ್ದಂತೆ ವಾಂತಿ ಮಾಡಿ ಕುಸಿದರು. ಈ ಸಂದರ್ಭ ಅಲ್ಲಿದ್ದ ನ್ಯಾಯವಾದಿಗಳು ಅವರನ್ನು ಪಕ್ಕದ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಅಲ್ಲಿನ ವೈದ್ಯರು ತಪಾಸಣೆ ನಡೆಸಿ ಅವರು ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿಸಿದ್ದಾರೆ ಎಂದು ಮೃತರ ಕಿರಿಯ ಸಹೋದ್ಯೋಗಿ ನ್ಯಾಯವಾದಿ ಪದ್ಮನಾಭ ಪತ್ರಿಕೆಗೆ ತಿಳಿಸಿದ್ದಾರೆ. ಚಕ್ರೇಶ್ವರರು 1977ರಲ್ಲಿ ಸರಕಾರಿ ಉದ್ಯೋಗ ತ್ಯಜಿಸಿ ಸುಮಾರು 40 ವರ್ಷಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ಹಾಗೂ ಇತರ ನ್ಯಾಯಾಲಯಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಕೇಸುಗಳನ್ನು ನಡೆಸಿದ ಅಪಾರ ಅನುಭವ ಹೊಂದಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ದ.ಕ.ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ಹಾಗೂ ನ್ಯಾಯವಾದಿಗಳಾದ ಡಿ.ಪದ್ಮನಾಭ ಕುಮಾರ,ಸುಜಿತ್, ರೋಶನ್ ಮೊದಲಾದವರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.