ಇಂದು ವಿಶ್ವ ರೆಡ್ ಕ್ರಾಸ್ ದಿನ
ರೆಡ್ ಕ್ರಾಸ್ ಸಂಸ್ಥೆ
ಜಗತ್ತಿನಾದ್ಯಂತ ಮೇ 8 ರಂದು ‘ವಿಶ್ವ ರೆಡ್ ಕ್ರಾಸ್ ದಿನ’ ಎಂದು ಆಚರಿಸಲಾಗುತ್ತದೆ. ‘‘ಮಾನವೀಯತೆಯಿಂದ ಶಾಂತಿಯ ಕಡೆಗೆ’’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಭಾರತದಲ್ಲಿ ಕೂಡಾ 1920ರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉದಯವಾಯಿತು ಮತ್ತು ಕರ್ನಾಟಕದಲ್ಲಿ 1921ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಹುಟ್ಟಿಕೊಂಡಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯಂತ ವಿಶಾಲವಾದ ಹಾಗೂ ದೇಶೀಯ ಮಾನವೀಯ ಸೇವಾ ಸಂಘಟನೆಯಾಗಿದೆ. ಈ ಸಂಸ್ಥೆಯು ವಿಕೋಪಗಳಲ್ಲಿ ಪಾಲ್ಗೊಳ್ಳುವಿಕೆ, ಆರೋಗ್ಯ ಆರೈಕೆ ಸೇವೆಗಳು, ರಕ್ತ ಸಂಗ್ರಹಣ ಸೇವೆಗಳು ಮತ್ತು ಕಿರಿಯ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳು, ಇತ್ಯಾದಿ ಸೇವಾ ಕಾರ್ಯಗಳಿಗೆ ಪ್ರಸಿದ್ಧವಾಗಿದೆ.
ರೆಡ್ ಕ್ರಾಸ್ ಸಂಸ್ಥೆಯ ಉಗಮದ ಬಗ್ಗೆ
ರೆಡ್ ಕ್ರಾಸ್ ಸಂಸ್ಥೆಯ ಉಗಮ ಮಾನವ ಇತಿಹಾಸದಲ್ಲಿ ಒಂದು ಕುತೂಹಲಕಾರಿ ಅಧ್ಯಾಯ. ಜೂನ್ 1859ರ 24 ರಂದು ನಡೆದ ಅಮಾನವೀಯ, ಭೀಕರ ಯುದ್ಧದ ರಣರಂಗ ರೆಡ್ ಕ್ರಾಸ್ ಉಗಮಕ್ಕೆ ಕಾರಣವಾಯಿತು. ಒಂದೆಡೆ ್ರಾನ್ಸ್ ಮತ್ತು ಇಟಲಿಯ ಸಂಯುಕ್ತ ಸೈನ್ಯ, ಇನ್ನೊಂದೆಡೆ ಆಸ್ಟ್ರಿಯಾ ಸೈನ್ಯ ಆ ರಣರಂಗದಲ್ಲಿ ಇದ್ದವು. ಮೂರು ಲಕ್ಷಕ್ಕೂ ಹೆಚ್ಚಿನ ಸೈನಿಕರು ಆ ರಣರಂಗದಲ್ಲಿ ಕಾದಾಡುತ್ತಿದ್ದರು. 1859ರ ಜೂನ್ 24 ರಂದು ‘ಸಲೆರಿನೋ’ದಲ್ಲಿ ನಡೆದ ಈ ಯುದ್ಧ 15 ಗಂಟೆಗಳ ಕಾಲ ನಡೆದಿತ್ತು. ಯುದ್ಧ ಮುಗಿದಾಗ ರಣರಂಗದ ತುಂಬಾ ಸತ್ತ ಹಾಗೂ ಗಾಯಗೊಂಡ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ದಿನಗಳಲ್ಲಿ ಚಿಕಿತ್ಸೆಗೆ ಲಭ್ಯವಿದ್ದ ಆಸ್ಪತ್ರೆಗಳು ಹಾಗೂ ವೈದ್ಯರ ಸಂಖ್ಯೆ ಬಹಳ ವಿರಳವಾಗಿತ್ತು. ರಕ್ತಸಿಕ್ತ ರಣರಂಗದಲ್ಲಿ ಸೈನಿಕರು ನೋವಿನಿಂದ ಚೀರಾಡುತ್ತಿದ್ದರೂ, ಸಹಾಯ ಹಸ್ತ ನೀಡಲು ಕೈಗಳೇ ಇರಲಿಲ್ಲ. ಮೃತ ದೇಹಗಳನ್ನು ಸಾಗಿಸಲು ಹಾಗೂ ಬದುಕಿ ಉಳಿದ ಗಾಯಾಳು ಸೈನಿಕರನ್ನು ಉಪಚರಿಸಲು ಮತ್ತು ಚಿಕಿತ್ಸೆ ಮಾಡಲು ವೈದ್ಯಕೀಯ ಸಹಾಯ ಬಹಳ ಸ್ವಲ್ಪ ಪ್ರಮಾಣದಲ್ಲಿ ಇತ್ತು. ಸ್ವಿಟ್ಝರ್ಲ್ಯಾಂಡ್ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ಎಂಬಾತ ಯುದ್ಧರಂಗದ ಬಳಿ ಹಾದು ಹೋಗುತ್ತಿದ್ದಾಗ ಈ ಭಯಾನಕ ರಣರಂಗದ ರಕ್ತದೋಕುಳಿ, ನೋವು, ಕಿರುಚಾಟ ಕಂಡು ಮಮ್ಮಲ ಮರುಗಿದ.
ರ್ಯ ಮುಳುಗುವ ಹೊತ್ತಲ್ಲಿ ಅಲ್ಲಿ ಬಂದಿದ್ದ ಡ್ಯೂನಾಂಟ್ ಮರುದಿನ ಸೂರ್ಯ ಉದಯಿಸುವವರೆಗೆ ಸ್ಥಳೀಯ ಗ್ರಾಮಸ್ಥರ ಸಹಕಾರ ಪಡೆದು ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಹಾಕಿಕೊಂಡು ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಸಾಗಿಸಿ ಖಾಸಗಿ ಮನೆಗಳಲ್ಲಿ, ಚರ್ಚ್ಗಳಲ್ಲಿ, ಆಶ್ರಮಗಳಲ್ಲಿ, ಮಸೀದಿಗಳಲ್ಲಿ ಸೇನಾ ಸ್ಥಳಗಳಲ್ಲಿ ಇರಿಸಿ ಉಪಚರಿಸಿದ.
ಹೆನ್ರಿ ಡ್ಯೂನಾಂಟ್ ಒಬ್ಬ ಪಕ್ಕಾ ವ್ಯಾಪಾರಿ, ಆದರೆ ಮಾನವೀಯತೆಯ ಮುಂದೆ ವ್ಯಾಪಾರ ಬುದ್ಧ್ದಿ ಮಂಕಾಗಿತ್ತು. ಅಲ್ಜೀರಿಯದಲ್ಲಿ ಕಾರ್ನಮಿಲ್ಗಳನ್ನು ಪ್ರಾರಂಭಿಸಲು ಅನುಮತಿ ಪಡೆಯಲು ನೆಪೋಲಿಯನ್ ದೊರೆಯನ್ನು ಕಾಣಲು ಬಂದಿದ್ದನು. ತಾನು ನಡೆಯುತ್ತಾ ಇದ್ದ ದಾರಿಯಲ್ಲಿನ ರಣರಂಗದ, ಮಾರಣಾಂತಿಕ ದೃಶ್ಯವನ್ನು ಕಂಡು ಮಮ್ಮಲ ಮರುಗಿದನು. ಆ ಸೈನಿಕರ ನೋವಿಗೆ ತಕ್ಷಣ ಸ್ಪಂದಿಸಿದನು. ಆ ಸೈನಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪೂರಕವಾಗಿ ಸ್ವಯಂಸೇವಕ ತಂಡವನ್ನು ತಯಾರು ಮಾಡಿದನು. ಯಾವುದೇ ದೇಶ, ಜಾತಿ, ಮತ, ಕುಲ, ಗೋತ್ರ, ಬಣ್ಣ, ಧರ್ಮಗಳ ಭೇದ ಮಾಡದೆ ಎಲ್ಲ ದೇಶದ ಗಾಯಾಳುಗಳನ್ನು ಉಪಚರಿಸಿ ಮಾನವೀಯತೆಯನ್ನು ಮೆರೆದ.
ಕಾಲಚಕ್ರ ಉರುಳುತ್ತಿತ್ತು, ಜನ ಎಲ್ಲವನ್ನೂ ಮರೆತರೂ, ಹೆನ್ರಿ ಡ್ಯೂನಾಂಟ್ ಕನಸಲ್ಲೂ ಬೆಚ್ಚಿ ಬೀಳುತ್ತಿದ್ದ. ಯುದ್ಧದ ಭೀಕರತೆ ಹೆನ್ರಿಯ ಮನದಲ್ಲಿ ಆಳವಾಗಿ ಬೇರುಬಿಟ್ಟಿತ್ತು. ಹಗಲೂ ರಾತ್ರಿ ಯುದ್ಧದ ಬಗ್ಗೆಯೇ ಯೋಚಿಸುತ್ತಿದ್ದ ಆತ, ಇದಕ್ಕೊಂದು ಶಾಶ್ವತ ಪರಿಹಾರ ಪಡೆಯಲೇ ಬೇಕೆಂಬ ದೃಢ ಚಿತ್ತದಿಂದ ಕಾರ್ಯಪ್ರವೃತ್ತನಾದ. ಯುದ್ಧಕಾಲದಲ್ಲಿ ಮಾನವ ಜನಾಂಗ ಎದುರಿಸುವ ಭಯಂಕರ ಯಾತನೆಯನ್ನು ತಪ್ಪಿಸಲು ಹೆನ್ರಿ ಡ್ಯೂನಾಂಟ್ ತನ್ನದೇ ಆದ ಎರಡು ಅಂಶಗಳನ್ನು ಮನದಟ್ಟು ಮಾಡಿಕೊಂಡ. ಆ ನಿಟ್ಟಿನಲ್ಲಿ ಹೆನ್ರಿ ಡ್ಯೂನಾಂಟ್ ‘ದಿ ಮೆಮೊರಿ ಆ್ ಸಾಲರಿನೋ’ ಎಂಬ ಪುಸ್ತಕವನ್ನು ಪ್ರಕಟಿಸಿ, ಅದರ ಪ್ರತಿಗಳನ್ನು ವಿಶ್ವದಾದ್ಯಂತ ಹಂಚಿದ. ಆ ಪುಸ್ತಕದಲ್ಲಿ ಯುದ್ಧ ಕಾಲದಲ್ಲಿ ಮಾನವೀಯತೆಯನ್ನು ಮೆರೆಯಲು ಎರಡು ಕಾರ್ಯಸೂಚಿಯನ್ನು ಜಾರಿಗೆ ತರಬೇಕೆಂದು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಕರೆ ನೀಡಿದ. ಆ ಎರಡು ಅಂಶಗಳು ಯಾವುದೆಂದರೆ,
(1) ಅಂತಾರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಎಲ್ಲ ರಾಷ್ಟ್ರಗಳಲ್ಲೂ ಶಾಂತಿಕಾಲದಲ್ಲಿ ಪ್ರತಿಷ್ಠಾಪಿಸಬೆಕು. ಇದರಲ್ಲಿ ಸ್ವಯಂ ಸೇವಕ ತಂಡವು ಯುದ್ಧ ಮುಕ್ತಾಯವಾದ ಬಳಿಕ ಅಲ್ಲಿನ ಗಾಯಾಳುಗಳನ್ನು ಅವರ ಜಾತಿ, ಮತ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಗಮನಿಸದೇ ಉಪಚರಿಸಬೇಕು.
(2)ಗಾಯಾಳು ಸೈನಿಕರನ್ನು ಉಪಚರಿಸಲು ಸಾಧ್ಯವಾಗಿಸಲು ರಾಷ್ಟ್ರಗಳು ಗಾಯಾಳು ಸೈನಿಕರನ್ನು, ವೈದ್ಯರನ್ನು ಹಾಗೂ ಇತರ ಸಹಾಯಕರನ್ನು ತಟಸ್ಥರೆಂದು, ಯಾವ ಪಕ್ಷಕ್ಕೂ ಸೇರದವರೆಂದು ಘೋಷಿಸಿ, ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು.
ಈ ಅದ್ಭುತವಾದ ಪುಸ್ತಕವನ್ನು ಓದಿದ ಬಳಿಕ ಜಿನಿವಾದ ಸಮಾಜಕಲ್ಯಾಣ ಸಂಸ್ಥೆಯೊಂದು, ಹೆನ್ರಿ ಡ್ಯೂನಾಂಟ್ನ ಸಂಕಲ್ಪಗಳನ್ನು ಸಾಕಾರಗೊಳಿಸಲು ಸಹಾಯ ಮಾಡಲು ಮುಂದೆ ಬಂದಿತು. 5 ಮಂದಿಯ ಒಂದು ಸಮಿತಿಯನ್ನು ಮಾಡಿ, ಹೆನ್ರಿ ಡ್ಯೂನಾಂಟ್ರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಈ ಸಮಿತಿಯು ಒಬ್ಬ ಸೇನೆಯ ನಿವೃತ್ತ ಕಮಾಂಡರ್, ಒಬ್ಬ ವೈದ್ಯ, ಒಬ್ಬ ಸಮಾಜ ಸೇವಕ, ಒಬ್ಬ ವ್ಯಾಪಾರಿ ಹಾಗೂ ಮತ್ತೊಬ್ಬ ನಿವೃತ್ತ ಅಧ್ಯಾಪಕರನ್ನು ಒಳಗೊಂಡಿತ್ತು. ಇವರ ಶ್ರಮದ ಲವಾಗಿ 1863, ಅಕ್ಟೋಬರ್ 26 ರಂದು ಜಿನೇವಾದಲ್ಲಿ ಅಂತಾರಾಷ್ಟೀಯ ಸಮ್ಮೇಳನ ನಡೆದು, 16 ರಾಷ್ಟ್ರಗಳ ವಿವಿಧ ಆಮಂತ್ರಿಕರು ಇದರಲ್ಲಿ ಪಾಲ್ಗೊಂಡಿದ್ದರು. ‘ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ’ ಎಂಬ ಹೆಸರಿನ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ಈ ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು. ಮುಂದೆ ಇದೇ ಸಂಸ್ಥೆ ‘ರೆಡ್ ಕ್ರಾಸ್ ಸಂಸ್ಥೆ’ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಹೀಗೆ ಒಬ್ಬ ವ್ಯಾಪಾರಿಯಾಗಿದ್ದ ಹೆನ್ರಿ ಡ್ಯೂನಾಂಟ್ನ ಹೃದಯ ಅಂತಃಕರಣದ ಮತ್ತು ಪರಿಶ್ರಮದ ಲವಾಗಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಉಗಮವಾಯಿತು.
ಜೀನ್ ಹೆನ್ರಿ ಡ್ಯೂನಾಂಟ್ ಬಗ್ಗೆ ...
ಸ್ವಿಟ್ಝರ್ಲ್ಯಾಂಡ್ ದೇಶದ ಜಿನೀವಾದಲ್ಲಿ 1828ರ ಮೇ 8 ರಂದು ಜನಿಸಿದ. ತಂದೆ ಜೀನ್ ಜ್ಯಾಕ್ ಡ್ಯೂನಾಂಟ್ ವ್ಯಾಪಾರಿ ಮತ್ತು ಸಮಾಜ ಸೇವಕ ತಾಯಿ ದೈವ ಭಕ್ತೆ. ಇವರಿಬ್ಬರ ಗುಣ ಮೇಳೈಸಿ ಹೆನ್ರಿ ಡ್ಯೂನಾಂಟ್ ವ್ಯಾಪಾರದ ಜೊತೆಗೆ ಮಾನವೀಯತೆಯನ್ನು ಹಚ್ಚಿಕೊಂಡ. ಎಳೆ ಪ್ರಾಯದಲ್ಲೇ ಬಡವರಿಗೆ, ರೋಗಿಗಳಿಗೆ, ವೃದ್ಧರಿಗೆ ಔಷಧ, ಸಹಾಯ, ಆಹಾರ ನೀಡುವುದನ್ನು ರೂಢಿ ಮಾಡಿಕೊಂಡಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಡ್ಯೂನಾಂಟ್ ಪ್ರತಿಭಾವಂತನಾಗಿದ್ದ ಜೊತೆಗೆ ಮಾನವೀಯ ಕಳಕಳಿ ಮತ್ತು ಧಾರ್ಮಿಕ ಚರ್ಚೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮತ್ತು ಒಬ್ಬ ಉತ್ತಮ ಮಾತುಗಾರನಾಗಿದ್ದನು. 1844ರಲ್ಲಿ ವೈ.ಎಂ.ಸಿ.ಎ. ಎಂಬ ಧರ್ಮ ಸಂಸ್ಥೆ ಹುಟ್ಟಿಹಾಕಿ ಬಡವರಿಗೆ, ರೋಗಿಗಳಿಗೆ, ನೊಂದವರಿಗೆ, ಸಾಂತ್ವನ ಹೇಳುವಲ್ಲಿ ಹೆಚ್ಚು ಆಸಕ್ತನಾಗಿದ್ದನು. ತನ್ನ ಜೀವನದ ಹೆಚ್ಚಿನ ಸಮಯವನ್ನು ಯುದ್ಧ ಕೆೈದಿಗಳ ಕಲ್ಯಾಣಕ್ಕಾಗಿ, ಸಮುದ್ರದಲ್ಲಿ ಗಾಯಗೊಂಡ ಜನರಿಗಾಗಿ ಸೇವೆ ಮಾಡುವುದಕ್ಕೆ ಮುಡಿಪಾಗಿರಿಸಿದನು.
1859ರ ‘ಸಲ್ರೆರಿನೋ ಯುದ್ಧ’ ಡ್ಯೂನಾಂಟ್ನ ಜೀವನ ಧೇಯವನ್ನು ಬದಲಾಯಿಸಿತು. ಮೂಲತಃ ವ್ಯಾಪಾರಿಯಾಗಿದ್ದರೂ, ವ್ಯಾವಹಾರಿಕತೆಗಿಂತ ಮಾನವೀಯತೆಗೆ ಹೆಚ್ಚು ಒತ್ತು ನೀಡಿದ ಲವಾಗಿಯೇ ‘ರೆಡ್ ಕ್ರಾಸ್’ ಸಂಸ್ಥೆ ಉಗಮಕ್ಕೆ ಪರೋಕ್ಷವಾಗಿ ಕಾರಣೀ ಭೂತನಾದನು. 1901ರಲ್ಲಿ ಹೆನ್ರಿ ಡ್ಯೂನಾಂಟ್ಗೆ ವಿಶ್ವದ ಅತ್ಯುನ್ನತ ಗೌರವವಾದ ‘ನೊಬೆಲ್ ಶಾಂತಿ ಪುರಸ್ಕಾರ’ ಪ್ರಪ್ರಥಮವಾಗಿ ದೊರಕಿತು. ರೆಡ್ ಕ್ರಾಸ್ ಸಂಸ್ಥೆಯ ಅಂತಾರಾಷ್ಟ್ರೀಯ ಸಮಿತಿಯು ಹೆನ್ರಿ ಡ್ಯೂನಾಂಟ್ ಬಗ್ಗೆ ಜಿನೀವಾದಿಂದಲೇ ಕಳಿಸಿದ ಸಂದೇಶ ಈ ರೀತಿಯಾಗಿತ್ತು. ‘‘ಇಂಥ ಘನತ್ತರವಾದ ಗೌರವಕ್ಕೆ ನಿಮ್ಮಂತೆ ಪಾತ್ರರಾದವರು ಬೇರೆ ಯಾರೋಬ್ಬರೂ ಇಲ್ಲ. 40 ವರ್ಷಗಳ ಸತತ ಪರಿಶ್ರಮದಿಂದ ಈ ಅಂತಾರಾಷ್ಟ್ರೀಯ ಸಂಘಟನೆಯನ್ನು ಯುದ್ಧರಂಗದಲ್ಲಿನ ಗಾಯಾಳುಗಳ ಪರಿಹಾರಕ್ಕಾಗಿ ನೀವು ಆರಂಭಿಸಿದಿರಿ. ನೀವಿಲ್ಲದಿದ್ದರೆ 19ನೆ ಶತಮಾನದ ಸರ್ವೋಚ್ಚ ಮಾನವೀಯ ಸಾಧನೆಯಾದ ರೆಡ್ ಕ್ರಾಸ್ ಸಂಸ್ಥೆ ಉದಯಿಸುತ್ತಿರಲಿಲ್ಲ’’. ತನ್ನ ಜೀವನದ ಕೊನೆಕ್ಷಣದಲ್ಲಿ ಕೂಡ ಹೆನ್ರಿ ಡ್ಯೂನಾಂಟ್ ಬಡರೋಗಿಗಳ ಸೇವೆ ಮಾಡುತ್ತಾ ಆಸ್ಪತ್ರೆಯಲ್ಲಿಯೇ ಇದ್ದ. ಹೀಗೆ ಶ್ರೀಮಂತನಾದರೂ ಬಡವರ ಜೊತೆಗೆ ಬದುಕಿ, ಅಕ್ಟೋಬರ್ 30, 1910ರಂದು ಹ್ರೆಡನ್ ನಗರದಲ್ಲಿ ಮರಣ ಹೊಂದಿದರು. ಹೆನ್ರಿ ಡ್ಯೂನಾಂಟ್ನ ಜನ್ಮದಿನವಾದ ಮೇ 8ನ್ನು ಪ್ರತಿ ವರ್ಷ ‘ವಿಶ್ವ ರೆಡ್ ಕ್ರಾಸ್’ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಜಗತ್ತಿನಲ್ಲೀಗ ರೆಡ್ ಕ್ರಾಸ್ ಸಂಸ್ಥೆ ಸಾರ್ವಕಾಲಿಕ ಸೇವಾ ಸಂಸ್ಥೆಯಾಗಿ ಹೊರಹೊಮ್ಮಿ, ಯುದ್ಧಕಾಲದಲ್ಲಿ ಮತ್ತು ಶಾಂತಿಕಾಲದಲ್ಲಿ ನಿರಂತರವಾಗಿ ಶಾಂತಿ ಪ್ರಕ್ರಿಯೆಗಳನ್ನು ನಡೆಸುತ್ತಲೇ ಇದ್ದು ವಿಶ್ವಶಾಂತಿಗೆ ಮುನ್ನುಡಿ ಬರೆಯುತ್ತಿದೆ.
ರೆಡ್ ಕ್ರಾಸ್ ಲಾಂಛನ
ಬಿಳಿ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಹೊಂದಿದ ಲಾಂಛನ ರೆಡ್ ಕ್ರಾಸ್ ಸಂಸ್ಥೆಯ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸಬಹುದಾಗಿದೆ. ‘ಯುದ್ಧದಿಂದ ಹೊರತಾದವರು’ ಎಂಬ ಸಂಕೇತ, ಈ ಲಾಂಛನದಿಂದ ಸೂಚಿಸಲಾಗುತ್ತದೆ. ತುರ್ತು ಅವಘಡದ ಸಮಯದಲ್ಲಿ ಮಾನವೀಯ ಮತ್ತು ಪರಿಹಾರಕಾರಕ ಸೇವೆ ನೀಡುವ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಈ ಲಾಂಛನವನ್ನು ಬಳಸಬಹುದು. ರೆಡ್ ಕ್ರಾಸ್ ಸಂಘಟನೆಯ ಚಟುವಟಿಕೆಗಳನ್ನು ಯುದ್ಧಕಾಲದ ಚಟುವಟಿಕೆ ಮತ್ತು ಶಾಂತಿ ಕಾಲದ ಚಟುವಟಿಕೆ ಎಂದು ವಿಂಗಡಿಸಲಾಗುತ್ತದೆ. ಶಾಂತಿ ಸಮಯದ ಚಟುವಟಿಕೆಗಳಾದ, ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು, ಜನರ ಆರೋಗ್ಯ ವೃದ್ಧಿಸುವ ಕಾರ್ಯ ನಿರ್ವಹಿಸುವುದು, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವುದು ಎಂಬುದಾಗಿ ವಿಂಗಡಿಸಲಾಗಿದೆ.
ರೆಡ್ ಕ್ರಾಸ್ ಸಂಸ್ಥೆಯ ಮೂಲ ತತ್ವಗಳು
‘‘ಮಾನವೀಯತೆಯಿಂದ ಶಾಂತಿಯ ಕಡೆಗೆ’’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ ರೆಡ್ ಕ್ರಾಸ್ ಸಂಸ್ಥೆಯ ಮೂಲ ಧ್ಯೇಯಗಳನ್ನು ಈ ರೀತಿ ವಿಂಗಡಿಸಲಾಗಿದೆ.
1.ಮಾನವೀಯತೆ: ಯುದ್ಧರಂಗದಲ್ಲಿನ ಗಾಯಾಳುಗಳಿಗೆ ತಾರತಮ್ಯವಿಲ್ಲದೇ ಸೇವೆ ಸಲ್ಲಿಸುವ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆ ಜನ್ಮ ತಾಳಿತು. ಮಾನವೀಯ ಸಂಕಟಗಳನ್ನು ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ಸಮರ್ಥವಾಗಿ ತಡೆಗಟ್ಟುವುದು ಅಥವಾ ಉಪಶಮನ ಮಾಡುವುದೇ ಅದರ ಪರಮ ಗುರಿ. ಜೀವನ ಸಂರಕ್ಷಣೆ , ಆರೋಗ್ಯ ಪಾಲನೆ ಹಾಗೂ ಮಾನವನ ಘನತೆ ಕಾಪಾಡುವುದು. ಇವುಗಳು ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶಗಳು. ಅದು ಪರಸ್ಪರ ತಿಳುವಳಿಕೆ, ಸ್ನೇಹ, ಸಹಕಾರ ಹಾಗೂ ಶಾಶ್ವತ ಶಾಂತಿ ಇವುಗಳನ್ನು ಜನರಲ್ಲಿ ಅಭಿವೃದ್ಧಿ ಪಡಿಸುತ್ತದೆ.
2. ನಿಷ್ಪಕ್ಷಪಾತ : ರೆಡ್ ಕ್ರಾಸ್ ಸಂಸ್ಥೆ ವ್ಯಕ್ತಿಯ ರಾಷ್ಟ್ರೀಯತೆ, ಜನಾಂಗ, ಧಾರ್ಮಿಕ ಶ್ರದ್ಧೆ, ವರ್ಗ ಅಥವಾ ರಾಜಕೀಯ ಅಭಿಪ್ರಾಯ ಇವುಗಳಿಗೆ ಸಂಬಂಸಿದಂತೆ ಯಾವುದೇ ಪಕ್ಷಪಾತ ಮಾಡುವುದಿಲ್ಲ.
3. ತಟಸ್ಥತೆ: ಎಲ್ಲರ ವಿಶ್ವಾಸವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆ ಯಾವುದೇ ದ್ವೇಷಗಳಲ್ಲಿ ಭಾಗಿಯಾಗುವುದಿಲ್ಲ ಅಥವಾ ಯಾವುದೇ ರಾಜಕೀಯ, ಜನಾಂಗೀಯ, ಧಾರ್ಮಿಕ ಮತ್ತು ಆದರ್ಶವಾದಗಳ ವಿವಾದ ಪ್ರಸಂಗಗಳಲ್ಲಿ ಪಾಲ್ಗೊಳ್ಳುವುದಿಲ್ಲ.
4. ಸ್ವಾತಂತ್ರ: ರೆಡ್ ಕ್ರಾಸ್ ಸಂಸ್ಥೆ ಅಂತಾರಾಷ್ಟ್ರೀಯ ಮತ್ತು ಸ್ವತಂತ್ರ ಸಂಘಟನೆ ಯಾಗಿದೆ. ಯಾವುದೇ ದೇಶದಲ್ಲಿನ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಆ ದೇಶದ ಸಹಾಯಕ ಮಾನವ ಸೇವೆಗಳ ಪರಿಹಾರಕಾರಕ ಸಂಘಟನೆಯಾಗಿದ್ದು, ಅದು ತನ್ನದೇ ಆದ ನೀತಿ, ನಿಯಮಗಳಿಗೆ ಒಳಪಟ್ಟು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಯಾವುದೇ ವಿಪತ್ತಿನ ಸಂದರ್ಭದಲ್ಲಿ ತಾನು ರೂಪಿಸಿದ ನೀತಿ ನಿಯಮಗಳಿಗೆ ಬದ್ಧವಾಗಿ, ಮೂಲತತ್ವಗಳಿಗೆ ಧಕ್ಕೆಯಾಗದಂತೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಮರ್ಥವಾಗಿರುತ್ತದೆ.
5. ಸ್ವಯಂ ಪ್ರೇರಣ ಸೇವೆಗಳು:
ರೆಡ್ ಕ್ರಾಸ್ ಸಂಸ್ಥೆಯು ಸ್ವಯಂ ಪ್ರೇರಿತ ಪರಿಹಾರಕಾರಕ ಸಂಘಟನೆಯಗಿದ್ದು, ಈ ಸಂಸ್ಥೆಯನ್ನು ಯಾವುದೇ ರೂಪದಲ್ಲಿಯೂ ಲಾಭಗಳಿಕೆಯ ಉದ್ದೇಶದಿಂದ ನಿರ್ಮಿಸಿರುವುದಿಲ್ಲ.
6. ಏಕತೆ: ಯಾವುದೇ ದೇಶದಲ್ಲಿ ಕೇವಲ ಒಂದೇ ಒಂದು ರಾಷ್ಟ್ರೀಯ ರೆಡ್ ಕ್ರಾಸ್ ಸಂಘಟನೆ ಇರುತ್ತದೆ. ಅದು ಎಲ್ಲರಿಗೂ ಮುಕ್ತವಾಗಿರುತ್ತದೆ. ಅದು ರಾಷ್ಟ್ರವ್ಯಾಪಿ ತನ್ನ ಮಾನವೀಯ ಸೇವೆಗಳನ್ನು ನೆರವೇರಿಸುತ್ತದೆ.
7. ವಿಶ್ವವ್ಯಾಪಕತ್ವ: ರೆಡ್ ಕ್ರಾಸ್ ಸಂಸ್ಥೆ ವಿಶ್ವವ್ಯಾಪಿ ಸಂಘಟನೆಯಾಗಿದ್ದು, ಎಲ್ಲಾ ಸಂಸ್ಥೆಗಳಿಗೂ ಸಮಾನ ಸ್ಥಾನಮಾನ ಹೊಂದಿದ್ದು, ಇತರರಿಗೆ ಸಹಾಯ ಮಾಡುವಲ್ಲಿನ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಹಂಚಿಕೊಳ್ಳುತ್ತದೆ.