ಡಾ. ಜಿ.ಆರ್. ಸುಂದರ್ ರಾಮ್ ಪೈ
ಮೂಡುಬಿದಿರೆ, ಮೇ 19: ಇಲ್ಲಿನ ಭಾರತ್ ಫಾರ್ಮಸಿಯ ಮಾಲಕ ಡಾ. ಜಿ.ಆರ್. ಸುಂದರ್ ರಾಮ್ ಪೈ (71) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದರು.
ಮೃತರು ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರ ಸೂರಜ್ ಎಸ್.ಪೈ, ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಧೀರಜ್ ಎಸ್. ಪೈ ಸಹಿತ ಮೂವರು ಪುತ್ರರು, ಇಬ್ಬರು ವೈದ್ಯೆಯರ ಸಹಿತ ಮೂವರು ಸೊಸೆಯಂದಿರನ್ನು ಅಗಲಿದ್ದಾರೆ.
1975ರ ಅವಧಿಯಲ್ಲಿ ಮೂಡುಬಿದಿರೆಯಲ್ಲಿ ಆಯುರ್ವೇದ, ಹೋಮಿಯೋಪತಿ ವೈದ್ಯರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸುಂದರ್ ರಾಮ್ ಪೈಯವರು 1976ರಲ್ಲಿ ಭಾರತ್ ಫಾರ್ಮಸಿ ಮೂಲಕ ಆಯುರ್ವೇದ ಜೌಷದೋತ್ಪನ್ನಗಳ ತಯಾರಿಕೆಯ ಸ್ವಂತ ಉದ್ಯಮ ಆರಂಭಿಸಿದ್ದರು.
1977ರಲ್ಲಿ ಗಾಂಧೀನಗರದಲ್ಲಿ ಫಾರ್ಮಸಿಯ ವ್ಯವಹಾರವನ್ನು ವಿಸ್ತರಿಸಿಕೊಂಡು ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡಿನ ವ್ಯಾಪ್ತಿಗೆ 170ರಷ್ಟು ಆಯುರ್ವೇದ ಜೌಷದ ಉತ್ಪನ್ನಗಳನ್ನು ತಯಾರಿಸಿ ಒದಗಿಸುತ್ತಿದ್ದರು.
ಮೂಡುಬಿದಿರೆ ರೋಟರಿ ಕ್ಲಬ್ ಸದಸ್ಯರಾಗಿದ್ದ ಅವರು ಒಂದು ಅವಧಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.