ಶ್ರೀಶಾಂತ್ ಕ್ಲೀನ್ ಬೌಲ್ಡ್... ಶುಕ್ಲಾ, ಬಿಸ್ವಾಸ್ ಪಾಸ್
ವಿಜಯದ ಗೋಲು ಬಾರಿಸಲು ಭುಟಿಯಾ ವಿಫಲ
ತಿರುವನಂತಪುರ, ಮೇ 19: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಕೇರಳದ ಎಸ್.ಶ್ರೀಶಾಂತ್ ಬಿಜೆಪಿ ಟಿಕೆಟ್ ಪಡೆದು ತಿರುವನಂತಪುರ ಕ್ಷೇತ್ರದಿಂದ ರಾಜ್ಯ ವಿಧಾನ ಸಭೆ ಪ್ರವೇಶಿಸುವಲ್ಲಿ ಎಡವಿದ್ದಾರೆ. ಇದೇ ವೇಳೆ ಮಾಜಿ ಆಲ್ರೌಂಡರ್ ಲಕ್ಷ್ಮೀ ರತನ್ ಶುಕ್ಲಾ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ಲಾ, ಶ್ರೀಶಾಂತ್ ಇವರಂತೆ ಅದೃಷ್ಟ ಪರೀಕ್ಷೆಗಿಳಿದಿದ್ದ ಮಾಜಿ ಫುಟ್ಬಾಲ್ ತಾರೆಯರಾದ ಬೈಚುಂಗ್ ಭುಟಿಯಾ ಜಯ ಗಳಿಸುವಲ್ಲಿ ಎಡವಿದ್ದಾರೆ. ದಿಪೇಂದು ಬಿಸ್ವಾಸ್ ಜಯ ಗಳಿಸಿದ್ದಾರೆ.
ಐಪಿಎಲ್ ಸ್ಟಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡು ಜೈಲು ಸೇರಿದ್ದ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಅನಂತರ ಖುಲಾಸೆಗೊಂಡಿದ್ದರು. ಬಿಜೆಪಿಯು ಅವರನ್ನು ರಾಜ್ಯದ ರಾಜಧಾನಿ ತಿರುವನಂತಪುರದಿಂದ ಕಣಕ್ಕಿಳಿಸಿತ್ತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶ್ರೀಶಾಂತ್ರನ್ನು ತಿರುವನಂತಪುರ ಕ್ಷೇತದಿಂದ ಕಣಕ್ಕಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೇಂದ್ರ ವಿತ್ತ ಸಚಿವ ನೇತೃತ್ವದ ಬಿಸಿಸಿಐನ ಸಮಿತಿಯು 33ರ ಹರೆಯದ ಶ್ರೀಶಾಂತ್ಗೆ ಎಲ್ಲ ವಿಧಗಳ ಕ್ರಿಕೆಟಿಗೂ ಆಜೀವ ನಿಷೇಧ ಹೇರಿತ್ತು. ಜೇಟ್ಲಿ ಅವರ ಪಕ್ಷ ಬಿಜೆಪಿ ಕಳಂಕಿತ ಶ್ರೀಕಾಂತ್ಗೆ ಟಿಕೆಟ್ ನೀಡಿ ಅವರ ಬಿಜೆಪಿ ಸ್ಥಾನ ಗೆಲ್ಲುವ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ. ಶ್ರೀಶಾಂತ್ ವಿರುದ್ಧ ಹಾಲಿ ಶಾಸಕ ಕಾಂಗ್ರೆಸ್ನ ಶಿವಕುಮಾರ್ 10,905 ಮತಗಳ ಅಂತರದಿಂದ ಜಯ ಗಳಿಸಿ ಶ್ರೀಶಾಂತ್ರ ವಿಧಾನಸಭೆ ಪ್ರವೇಶಿಸುವ ಯತ್ನವನ್ನು ವಿಫಲಗೊಳಿಸಿದರು. ನ್ಯಾಯವಾದಿ ವಿ.ಎಸ್.ಶಿವಕುಮಾರ್ 2011ರಲ್ಲಿ 5,352 ಮತಗಳ ಅಂತರದಲ್ಲಿ ಜಯ ಗಳಿಸಿದ್ದರು. ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡರು. ಶ್ರೀಶಾಂತ್ ವರ್ಚಸ್ಸು ಶಿವಕುಮಾರ್ ಜನಪ್ರಿಯತೆ ಮುಂದೆ ಮಸುಕಾಗಿದೆ. ನ್ಯಾಯವಾದಿ ವಿಎಸ್ ಶಿವಕುಮಾರ್ 46,474 ಮತಗಳನ್ನು ಪಡೆದರು. ಆ್ಯಂಟನಿ ರಾಜು 35, 569 ಎರಡನೆ ಸ್ಥಾನಕ್ಕೆ ತೃಪ್ತರಾದರು. 34,764 ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ಶ್ರೀಶಾಂತ್ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟರು.
35ರ ಹರೆಯದ ಶುಕ್ಲಾ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಹೊವ್ರಾ (ಉತ್ತರ) ಕೇಂದ್ರದಿಂದ ಕಣಕ್ಕಿಳಿದಿದ್ದರು. ಶುಕ್ಲಾ ಅವರು ಕಾಂಗ್ರೆಸ್ನ ಅಭ್ಯರ್ಥಿ ಸಂತೋಷ್ ಕುಮಾರ್ ಪಾಠಕ್ ವಿರುದ್ಧ 36,919 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದರು. ಕೋಲ್ಕತಾ ಐಪಿಎಲ್ ತಂಡದ ಸದಸ್ಯ ಶುಕ್ಲಾ ಅವರು 61, 917 ಮತಗಳನ್ನು ಪಡೆದರು. ಪಾಠಕ್ ಕಾಂಗ್ರೆಸ್ನ ಜಯಪ್ರಿಯ ಅಭ್ಯರ್ಥಿ ಆದರೆ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ. ಬಿಜೆಪಿಯ ಅಭ್ಯರ್ಥಿ ಮಾಜಿ ಫಿಲ್ಮ್ ಸ್ಟಾರ್ ರೂಪಾ ಗುಂಗುಲಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟರು.
ಬಂಗಾಳದಿಂದ ಇನ್ನಿಬ್ಬರು ಆಟಗಾರರು ಅದೃಷ್ಟ ಪರೀಕ್ಷೆ ನಡೆಸಿದ್ದರು. ಭಾರತದ ಫುಟ್ಟಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ತನ್ನ ಎರಡನೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಎಡರಂಗದ ಸಿಲಿಗುರಿಯ ಮಾಜಿ ಸಚಿವ ಅಶೋಕ್ ಭಟ್ಟಾಚಾರ್ಯ (78,054 ಮತಗಳು) ವಿರುದ್ಧ ಭುಟಿಯಾ (63,982 ಮತಗಳು) ಸೋಲೊಪ್ಪಿಕೊಂಡರು.ಕಳೆದ ಬಾರಿ ಭುಟಿಯಾ ಲೋಕಸಭೆ ಪ್ರವೇಶಿಸುವ ಪ್ರಯತ್ನ ನಡೆಸಿ ಸೋತಿದ್ದರು.
ರಾಷ್ಟ್ರೀಯ ತಂಡದ ಮಾಜಿ ಸ್ಟ್ರೈಕರ್ ದಿಪೇಂದು ಬಿಶ್ವಾಸ್ ಬಸಿರಾತ್ (ದಕ್ಷಿಣ) ಕ್ಷೇತ್ರದಲ್ಲಿ ಬಿಜೆಪಿಯ ಸಾಮಿಕ್ ಭಟ್ಟಾಚಾರ್ಯ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಬಿಶ್ವಾಸ್ 88,085 ಮತ್ತು ಭಟ್ಟಾಚಾರ್ಯಗೆ 64, 027 ಮತಗಳನ್ನು ಪಡೆದರು.