ಸಂಕಷ್ಟಗಳ ನಡುವೆಯೂ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳು!
ರಾಂಚಿ/ಮೈನ್ಪುರಿ, ಮೇ 22: ಜಾರ್ಖಂಡ್ನ ರಾಜಧಾನಿ ರಾಂಚಿಯ 16ರ ಹರೆಯದ ನಿರ್ಮಾಣ ಕಾರ್ಮಿಕೆ ಮೀರಾ ಖೋಯಾ 10ನೆ ತರಗತಿಯ ಪರೀಕ್ಷೆ ಉತ್ತೀರ್ಣಳಾದುದೇ ಒಂದು ಸಾಧನೆ. ತನಗೆ ಬಹಳ ಸಂತೋಷವಾಗಿದೆ. ತಾನು ಇನ್ನೂ ಚೆನ್ನಾಗಿ ಬರೆಯುತ್ತಿದ್ದರೆ, ಪ್ರಥಮ ದರ್ಜೆಯಲ್ಲಿ ಪಾಸಾಗಬಹುದಿತ್ತು ಎನ್ನುತ್ತಾಳೆ ಮೀರಾ.
ರಾಂಚಿಯಲ್ಲಿ ಜಾರ್ಖಂಡ್ನ ಹೊಸ ವಿಧಾನಸಭಾ ಕಟ್ಟಡದ ನಿವೇಶನದಲ್ಲಿ ಕೆಲಸ ಮಾಡುತ್ತಿರುವ ಆಕೆ, ಬಾಲ್ಯದಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡಿದ್ದಾಳೆ. ತನ್ನ ತಮ್ಮನ ಜವಾಬ್ದಾರಿಯೂ ಮೀರಾಳ ಮೇಲೆಯೇ ಬಿದ್ದಿದೆ.
ಕಳೆದ ವರ್ಷ ಮೀರಾಳ ಶಾಲಾ ಹಾಜರಾತಿ ಅನಿಯಮಿತವಾಗಿತ್ತು. ಅವಳು ನಿರ್ಮಾಣ ನಿವೇಶನದಲ್ಲಿ ದಿವಸಕ್ಕೆ 10 ತಾಸುಗಳ ಕಾಲ ಕೆಲಸ ಮಾಡಿ, ಮನೆಯ ಕೆಲಸಗಳನ್ನು ಪೂರೈಸಿ, ತನ್ನ 10ನೆ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಇದೇ ವೇಳೆ, ಉತ್ತರಪ್ರದೇಶದ ಮೈನ್ಪುರಿಯ 16ರ ಹರೆಯದ ಅಜಯ್ಕುಮಾರ್ ಎಂಬಾತ, ಎಲ್ಲ ಸಂಕಷ್ಟಗಳನ್ನು ಎದುರಿಸಿ 12 ತರಗತಿಯ ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಆತನ ದೈಹಿಕ ವಿಕಲತೆ ಅವನನ್ನು ಹಿಂಜರಿಸಲಿಲ್ಲ. ಅಜಯ್ ಪರೀಕ್ಷೆಗಳಿಗೆ ಹಾಜರಾಗಿ ಕಾಲ್ಬೆರಳುಗಳಿಂದಲೇ ಪರೀಕ್ಷೆ ಬರೆದಿದ್ದಾನೆ. ಕೃಷಿಯಿಂದಲೇ ಜೀವನ ನಡೆಸುವ ಅಜಯ್ನ ಕುಟುಂಬಕ್ಕೆ, ಆತ ಎಲ್ಲ ನಿರೀಕ್ಷೆಗಳನ್ನೂ ಮೀರಿಸಿದ್ದಾನೆ.
ತನಗೆ ಇಂಜಿನಿಯರ್ ಆಗುವ ಆಸೆಯಿದೆ. ಕುಟುಂಬವನ್ನು ಹಿಂಡುತ್ತಿರುವ ಬಡತನದಿಂದ ಪಾರು ಮಾಡಬೇಕಾಗಿದೆ. ತನಗೆ ಕೈಗಳಿಲ್ಲವೆಂಬ ಮಾತ್ರಕ್ಕೆ ಪರೀಕ್ಷೆ ಬರೆಯಲು ಅಸಾಧ್ಯವಾಗಬಹುದೆಂದು ತಾನೆಂದೂ ಯೋಚಿಸಿದುದೇ ಇಲ್ಲವೆಂದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಅಜಯ್ ಹೇಳಿದ್ದಾನೆ.