ಪುದುಚೇರಿ ಸಿಎಂ ಹುದ್ದೆಗೆ ವಿ.ನಾರಾಯಣ ಸ್ವಾಮಿ ಹೆಸರು
ಪುದುಚೇರಿ,ಮೇ 28: 2016ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲವಾದರೂ ಏಐಸಿಸಿ ಪ್ರಧಾನ ಕಾರ್ಯದರ್ಶಿ ವಿ.ನಾರಾಯಣ ಸ್ವಾಮಿ ಅವರನ್ನು ಪುದುಚೇರಿ ಮುಖ್ಯಮಂತ್ರಿಯಾಗಿ ಶನಿವಾರ ಹೆಸರಿಸಲಾಗಿದೆ. ಕಾಂಗ್ರೆಸ್ನ ಈ ಹೆಜ್ಜೆಯು ಈಗಾಗಲೇ ಸಂಕಟದಲ್ಲಿರುವ ಪಕ್ಷದಲ್ಲಿ ಇನ್ನಷ್ಟು ಉದ್ವಿಗ್ನತೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ.
ತನ್ನ ಸುದೀರ್ಘ ರಾಜಕೀಯ ವೃತ್ತಿಜೀವನದಲ್ಲಿ ಸ್ವಾಮಿ ಅವರು ಕೇಂದ್ರ ಸಚಿವ ಹುದ್ದೆ ಮತ್ತು ರಾಜ್ಯಸಭಾ ಸದಸ್ಯತ್ವ ಸೇರಿದಂತೆ ಹಲವಾರು ಅಧಿಕಾರಗಳನ್ನು ಅನುಭವಿಸಿದ್ದಾರೆ. ಆದರೆ ಪುದುಚೇರಿಯ ಮುಖ್ಯಮಂತ್ರಿಯಾಗಬೇಕೆಂಬ ತನ್ನ ಸುದೀರ್ಘ ಕಾಲದ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಶನಿವಾರ ಯಶಸ್ವಿಯಾಗಿದ್ದಾರೆ.
30 ಸದಸ್ಯ ಬಲದ ಪುದುಚೇರಿ ವಿಧಾನಸಭೆಯಲ್ಲಿ 15 ಕಾಂಗ್ರೆಸ್ ಸದಸ್ಯರ ಪೈಕಿ ಹೆಚ್ಚಿನವರ ಬೆಂಬಲವನ್ನು ಹೊಂದಿರುವ ಸ್ವಾಮಿ ಮುಖ್ಯಮಂತ್ರಿ ರೇಸ್ನಲ್ಲಿದ್ದ ಪಕ್ಷದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ.ನಮಃಶಿವಾಯಂ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎ.ವೈದ್ಯಲಿಂಗಂ ಅವರನ್ನು ನಿರಾಶರನ್ನಾಗಿಸಿದ್ದಾರೆ.