ದಾವೂದ್-ಖಡ್ಸೆ ಸಂಬಂಧ: ತುರ್ತು ಕ್ರಮ ಆಗ್ರಹಿಸಿ ಹ್ಯಾಕರ್ಗಳು ಹೈಕೋರ್ಟ್ಗೆ
ಮುಂಬೈ ಮೇ, 30: ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹೀಂ ಹಾಗೂ ಮಹರಾಷ್ಟ್ರದ ಕಂದಾಯ ಸಚಿವ ಏಕನಾಥ್ ಖಡ್ಸೆ ನಡುವಿನ ಫೋನ್ ಕರೆ ವಿವಾದದಲ್ಲಿ ತುರ್ತು ಕ್ರಮಕ್ಕೆ ಆಗ್ರಹಿಸಿ ಬಾಂಬೆ ಹೈಕೋರ್ಟ್ಗೆ ಹ್ಯಾಕರ್ಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲಿಸಿದ್ದಾರೆ.
ಪಾಕ್ ಟೆಲಿಫೋನ್ ಕಂಪೆನಿಯ ವೆಬ್ಸೈಟ್ಗೆ ನುಸುಳಿ ದಾವೂದ್ ಪತ್ನಿ ಮೆಹಜಬೀನ್ ಹೆಸರಿನಲ್ಲಿರುವ ನಾಲ್ಕು ನಂಬರ್ಗಳ ಫೋನ್ನಿಂದ ಕರೆಮಾಡಿದ ಪಟ್ಟಿಯನ್ನು ಗುಜರಾತ್ನ ಎಥಿಕಲ್ ಹ್ಯಾಕರ್ ಮನೀಷ್ ಬಾಂಗಳೆ ಸೋರಿಕೆ ನಡೆಸಿದ್ದರು. ಅವರು ರವಿವಾರ ರಜಾಕಾಲ ಹೈಕೋರ್ಟ್ ಪೀಠಕ್ಕೆ ತುರ್ತು ಕ್ರಮಕೈಗೊಳ್ಳಲು ಆಗ್ರಹಿಸಿ ಅರ್ಜಿಯನ್ನು ಸಲ್ಲಿಸಿದ್ದು ಬಾಂಬೆ ಹೈಕೋರ್ಟ್ ಈ ಅರ್ಜಿ ಸ್ವೀಕಾರದ ಕುರಿತು ಸೋಮವಾರ ನಿರ್ಧರಿಸಲಿದೆ. 2015 ಮೇ ತಿಂಗಳಿಂದ ಕಳೆದ ತಿಂಗಳು ಎಪ್ರಿಲ್ ವರೆಗೆ ಹಲವು ಬಾರಿ ದಾವೂದ್ ಪತ್ನಿಯ ನಂಬರ್ನಿಂದ ಏಕನಾಥ್ ಖಡ್ಸೆಯ ಮೊಬೈಲ್ ಫೋನ್ಗೆ ಕರೆಗಳು ಬಂದಿವೆ ಎಂದು ಹಾಕರ್ಗಳು ಪತ್ತೆ ಹಚ್ಚಿದ್ದಾರೆ. ಮನೀಷ್ ಬಾಂಗಳೆ ಮೆಹಜಬೀನ್ ಹೆಸರಿನಲ್ಲಿರುವ ಫೋನ್ ಕರೆಗಳ ಪಟ್ಟಿಯನ್ನು ಮೇ 18ಕ್ಕೆ ಮುಂಬೈ ಪೊಲೀಸರಿಗೆ ನೀಡಿದ್ದರು.ಆದರೆ ಮುಂಬೈ ಪೊಲೀಸರು ಪ್ರಕರಣವನ್ನು ತಿರುಚಲು ಶ್ರಮಿಸುತ್ತಿದ್ದಾರೆ ಎಂದು ಬಾಂಗಳೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಜೊತೆಗೆ ತನಗೂ ತನ್ನ ಕುಟುಂಬಕ್ಕೂ ಜೀವ ಬೆದರಿಕೆಗಳಿವೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.