ದೋಷಪೂರ್ಣ ರಕ್ತಪೂರೈಕೆಯಿಂದ 2,234 ಜನರಿಗೆ ಎಚ್ಐವಿ ಸೋಂಕು
ಹೊಸದಿಲ್ಲಿ,ಮೇ 31: ಕಳೆದ ಕೇವಲ 17 ತಿಂಗಳುಗಳಲ್ಲಿ ಭಾರತದಾದ್ಯಂತ ರಕ್ತಪೂರೈಕೆ ಸಂದರ್ಭದಲ್ಲಿ 2,234 ಜನರು ಎಚ್ಐವಿ ಸೋಂಕಿಗೊಳಗಾಗಿರುವ ಆಘಾತಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ಆಸ್ಪತ್ರೆಗಳಲ್ಲಿ ರಕ್ತಪೂರಣದ ಅಸುರಕ್ಷಿತ ವಿಧಾನ ಈ ಅನಾಹುತಕ್ಕೆ ಕಾರಣವಾಗಿದ್ದು,ಗರಿಷ್ಠ 361 ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿವೆ.
ಕಳೆದ ವಾರ ನಡೆದಿರುವ ಪ್ರಕರಣ ಎಂಥವರನ್ನೂ ಮರುಗುವಂತೆ ಮಾಡಿದೆ. ಅಸ್ಸಾಮಿನ ಕಾಮರೂಪ ಜಿಲ್ಲೆಯ ಮೂರರ ಹರೆಯದ ಬಾಲಕನನ್ನು ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆಗೆಂದು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೋಷಪೂರ್ಣ ರಕ್ತಪೂರೈಕೆಯಿಂದಾಗಿ ಈ ಪುಟ್ಟ ಬಾಲಕನೂ ಎಚ್ಐವಿ ಸೋಂಕಿಗೊಳಗಾಗಿದ್ದಾನೆ.
ಗುಜರಾತ್ ನಂ.2
ಇಂತಹ 292 ಪ್ರಕರಣಗಳೊಂದಿಗೆ ಗುಜರಾತ್ ಎರಡನೇ ಸ್ಥಾನದಲ್ಲಿದ್ದರೆ,ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (276) ಮತ್ತು ದಿಲ್ಲಿ (264) ಇವೆ.
ಮಾಹಿತಿ ಹಕ್ಕು ಕಾರ್ಯಕರ್ತ ಚೇತನ ಕೊಠಾರಿ ಅವರು ಆರ್ಟಿಐ ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ನ್ಯಾಕೋ)ಯು ನೀಡಿರುವ ಉತ್ತರದಿಂದ ಈ ಕಳವಳಕಾರಿ ಅಂಶ ಬಹಿರಂಗಗೊಂಡಿದೆ.
ಸರಕಾರದ ಉದಾಸೀನ?
ಮುಂಗಡಪತ್ರದಲ್ಲಿ ಹಣಕಾಸಿನ ಕಡಿತದಿಂದಾಗಿ ಏಡ್ಸ್ ಕುರಿತು ಸರಕಾರದಿಂದ ಜಾಗೃತಿ ಕಾರ್ಯಕ್ರಮ ಚುರುಕು ಕಳೆದುಕೊಂಡಿದೆ. ಇಂತಹ ಪ್ರಕರಣಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇವೆ ಮತ್ತು ತಪ್ಪಿತಸ್ಥ ಆಸ್ಪತ್ರೆಗಳು ಮತ್ತು ರಕ್ತನಿಧಿಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಸರಕಾರವು ಇದನ್ನು ತುರ್ತಾಗಿ ಬಗೆಹರಿಸುವ ಅಗತ್ಯವಿದೆ ಎನ್ನುತ್ತಾರೆ ಕೊಠಾರಿ.
ಭಾರತದಲ್ಲಿ ಸುರಕ್ಷಿತ ರಕ್ತಪೂರೈಕೆಯ ಪ್ರಾಥಮಿಕ ಜವಾಬ್ದಾರಿಯನ್ನು ನ್ಯಾಕೋ ಹೊತ್ತಿದೆ. ಕಾನೂನಿನಂತೆ ದಾನಿಗಳಿಂದ ಸಂಗ್ರಹಿಸಲಾದ ರಕ್ತವನ್ನು ಸಾಂಕ್ರಾಮಿಕವಾದ ಎಚ್ಐವಿ,ಎಚ್ಬಿವಿ ಮತ್ತು ಹೆಪಟೈಟಿಸ್ ಸಿ,ಮಲೇರಿಯಾ ಮತ್ತು ಸಿಫಿಲಿಸ್ ಸೋಂಕುಮುಕ್ತ ಎನ್ನುವುದನ್ನು ದೃಢಪಡಿಸಿಕೊಳ್ಳಲು ಪರೀಕ್ಷೆಗೊಳಪಡಿಸುವುದು ಕಡ್ಡಾಯವಾಗಿದೆ.
ಇತ್ತೀಚಿನ ವಾರ್ಷಿಕ ವರದಿಯಂತೆ,2014,ಸೆಪ್ಟೆಂಬರ್ವರೆಗೆ ನ್ಯಾಕೋ ಒಟ್ಟೂ ಸುಮಾರು 30 ಲಕ್ಷ ಯೂನಿಟ್ ರಕ್ತ ಸಂಗ್ರಹಿಸಿದೆ. ಈ ಪೈಕಿ ಶೇ.84ರಷ್ಟು ಯೂನಿಟ್ಗಳು ಸ್ವಯಂಸೇವಾ ರಕ್ತದಾನದ ಮೂಲಕ ಬಂದಿದ್ದು, ಸಮಸ್ಯೆಗೆ ಇದೇ ಕಾರಣವಾಗಿರುವಂತಿದೆ ಎನ್ನುತ್ತಾರೆ ನ್ಯಾಕೋದ ಉಪ ಮಹಾ ನಿರ್ದೇಶಕ ನರೇಶ ಗೋಯಲ್.