ಸರಕಾರಿ ನೌಕರರ ಮುಷ್ಕರ ನ್ಯಾಯ ಸಮ್ಮತವೇ?
ಮಾನ್ಯರೆ,
ಕೇಂದ್ರ ಸರಕಾರಿ ನೌಕರರಿಗೆ ನೀಡುವ ವೇತನ ಮತ್ತು ಭತ್ತೆಗಳನ್ನು ತಮಗೂ ಸಮಾನವಾಗಿ ನೀಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಸರಕಾರಿ ನೌಕರರು ನಡೆಸಿದ ಮುಷ್ಕರ ಯಶಸ್ವಿಯಾಯಿತೆಂದು ಬೀಗುತ್ತಿರುವವರಿಗೆ ನನ್ನದೊಂದು ಸಣ್ಣ ಪ್ರಶ್ನೆ.
ಕೇಂದ್ರ ಸರಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಸಮಾನವಾಗಿ ಕೇಳುತ್ತಿರುವುದು ಸಂತೋಷದ ವಿಷಯ. ಆದರೆ ಕೇಂದ್ರ ಸರಕಾರದ ನೌಕರರು ಕಾರ್ಯನಿರ್ವಹಿಸುವಷ್ಟು ದಿನಗಳಷ್ಟು ರಾಜ್ಯ ಸರಕಾರಿ ನೌಕರರು ಕೆಲಸ ನಿರ್ವಹಿಸುತ್ತಿದ್ದೀರಾ? ಕೇಂದ್ರ ಸರಕಾರದ ನೌಕರರು ಪಡೆಯುವ ಸರಕಾರಿ ರಜೆಯನ್ನು ಮಾತ್ರ ತಾವು ಪಡೆಯಲು ತಯಾರಿದ್ದೀರಾ? ರಾಜ್ಯ ಸರಕಾರವು 2ನೆ ಶನಿವಾರ, ನಾನಾ ಜಯಂತಿ/ಜನ್ಮ ದಿನಾಚರಣೆಗಳು, ಅಮಾವಾಸ್ಯೆ, ಹುಣ್ಣಿಮೆ ಇತ್ಯಾದಿಗಳಿಗೆ ಸರಕಾರಿ ರಜೆಯನ್ನು ಘೋಷಿಸಿದೆ. ಆದರೆ ಈ ಪದ್ದತಿ ಕೇಂದ್ರ ಸರಕಾರದಲ್ಲಿಲ್ಲ. ರಾಜ್ಯ ಸರಕಾರದ ನೌಕರರು ಸಹ ಕೇಂದ್ರ ಸರಕಾರದಷ್ಟೇ ರಜೆಯನ್ನು ಪಡೆಯಲು ಸಮ್ಮತಿಸಿದರೆ ತಮ್ಮ ಹೋರಾಟ, ಬೇಡಿಕೆಗಳು ನ್ಯಾಯ ಸಮ್ಮತವಾದ್ದದು, ಅಲ್ಲದೆ ಬರೀ ವೇತನ/ ಭತ್ತೆಗಳು ಮಾತ್ರ ಅವರಿಗೆ ನೀಡುವಷ್ಟು ಪಡೆಯಲು ಇಚ್ಛಿಸುವವವರು ಕೆಲಸದಲ್ಲಿ ಮಾತ್ರ ಕಡಿಮೆ ದಿನಗಳು ದುಡಿಯಲು ಇಚ್ಛಿಸುವುದು ಯಾವ ನ್ಯಾಯ ಹೇಳಿ.?
ನಿಜವಾಗಿಯೂ ಮುಷ್ಕರ ಮಾಡಬೇಕಾದವರು ಸರಕಾರಿ ನೌಕರರಲ್ಲ. ಬದಲಿಗೆ ಪೌರ ಕಾರ್ಮಿಕರು ಹಾಗೂ ಗುತ್ತಿಗೆ/ಹೊರಗುತ್ತಿಗೆ ನೌಕರರು. ಇವರಿಗೆ ವೇತನ ಪರಿಷ್ಕರಣೆಗೊಂಡು 4 ವರ್ಷಗಳು ಕಳೆದರೂ ಇವರ ಬಗ್ಗೆ ಯಾರು ಯೋಚಿಸುತ್ತಿಲ್ಲ, ಯಾವುದೇ ಭತ್ತೆಗಳನ್ನು ನೀಡುತ್ತಿಲ್ಲ ಮತ್ತು ಸರಕಾರಿ ಅಧಿಕಾರಿಗಳು ಇವರುಗಳ ಸಲುವಾಗಿ ಸೊಲ್ಲೆತ್ತಲೂ ಇಲ್ಲ. ಇವರಿಗೆ ಬರುವ ಸಂಬಳದಲ್ಲಿ ಅರ್ಧ ಏಜೆನ್ಸಿಗಳ ಪಾಲಾಗಿ, ಉಳಿದುದರಲ್ಲಿ ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ. ಈಗ ಹೇಳಿ ನಿಜವಾಗಿಯೂ ಮುಷ್ಕರ ನಡೆಸಬೇಕಾಗಿರುವುದು ಯಾರು?